ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ಜೈಮನ್ ಜೋಸೆಫ್ ಸಚಿವರ ನಿಂದನೆ ಮತ್ತು ವರ್ಗಾವಣೆಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ದುಃಖದ ಘಟನೆ ಸಂಭವಿಸಿದೆ. ಪೊನ್ಕುನ್ನಂ ಡಿಪೋಗೆ ಸೇರಿದ್ದ ಚಾಲಕ ಜೈಮನ್, ಮುಂಡಕ್ಕಯಂ-ಪಾಲಾ ಮಾರ್ಗದಲ್ಲಿ ಬಸ್ ಚಲಾಯಿಸುತ್ತಿತ್ತು.
ಈ ಸಂದರ್ಭದಲ್ಲಿ ಕಾಂಜೀರಪಳ್ಳಿಯ ಪೂತಕುಳಿಯ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾಂಜೀರಪಳ್ಳಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಕ್ಟೋಬರ್ 1ರಂದು ತಿರುವನಂತಪುರಕ್ಕೆ ಹೊರಟಿದ್ದ ಬಸ್ಸಿನಲ್ಲಿ ಚಾಲಕರ ಸೀಟ್ ಬಳಿ ಪ್ಲಾಸ್ಟಿಕ್ ಬಾಟಲಿಗಳನ್ನ ಇಟ್ಟುಕೊಂಡಿದ್ದರು. ಅದನ್ನ ಗಮನಿಸಿದ ಸಚಿವ ಕೆ.ಬಿ. ಗಣೇಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಸ್ ನಿಲ್ಲಿಸಿ, ಚಾಲಕ ಜೈಮನ್ ಅವರನ್ನು ಸಾರ್ವಜನಿಕವಾಗಿ ಗದರಿಸಿದ್ದರು. ಬಳಿಕ ಸಚಿವರು ಜೈಮನ್ ಸೇರಿದಂತೆ ಮೂವರು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಅದರ ಫಲಿತಾಂಶವಾಗಿ ಅವರಿಗೆ ವರ್ಗಾವಣೆ ಆದೇಶವನ್ನೂ ನೀಡಲಾಗಿತ್ತು.
ಈ ಕ್ರಮವು ನೌಕರರ ನಡುವೆ ತೀವ್ರ ಆಕ್ರೋಶ ಉಂಟುಮಾಡಿತ್ತು. ಜೈಮನ್ ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿರುವುದಾಗಿ ಮತ್ತು ಘಟನೆಯ ದಿನ ಬಸ್ ಮುಂದೆ ಇಡಲಾಗಿದ್ದ ಬಾಟಲಿಗಳನ್ನು ಕುಡಿಯುವ ನೀರನ್ನು ಹಿಡಿದಿಡಲು ಬಳಸಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದರು. ಆದರೂ ವರ್ಗಾವಣೆಯನ್ನು ಹಿಂತೆಗೆದುಕೊಂಡಿರಲಿಲ್ಲ. ಇದೀಗ ಪ್ರಾಣವನ್ನೇ ಬಿಟ್ಟಿದ್ದಾರೆ.
ವರದಿ : ಲಾವಣ್ಯ ಅನಿಗೋಳ

