ಮಂಡ್ಯ: ಮಂಡ್ಯದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿದ್ದು, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯೂ ಹಲವು ಸಮೀಕ್ಷೆಗಳು ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ಹೇಳ್ತಾ ಇದ್ದವು. ಕುಮಾರಸ್ವಾಮಿ ಅವರ ಪಂಚರತ್ನ ಪ್ರವಾಸ ನಮಗೆ ಶಕ್ತಿ ನೀಡಿದೆ. ದೇವೇಗೌಡರು ಚುನಾವಣೆ ಪ್ರಚಾರ ಮಾಡಿರುವುದು ನಮಗೆ ಬಲ ತಂದಿದೆ. ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಅತಂತ್ರ ಬರುವ ಪ್ರಶ್ನೆ ನಮ್ಮ ಮುಂದೆ ಇಲ್ಲ. ಒಂದು ವೇಳೆ ಅತಂತ್ರ ಬಂದರೆ ನಮ್ಮ ನಾಯಕರು ತೀರ್ಮಾನ ಮಾಡ್ತಾರೆ. ಸ್ವತಂತ್ರ ಸರ್ಕಾರ ಬರಲು ನಾವು ಚುನಾವಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಮೇಲುಕೋಟೆ ಕ್ಷೇತ್ರದ ನಾರಾಯಣಪುರದಲ್ಲಿ ನಿನ್ನೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ, ಸಿ.ಎಸ್.ಪುಟ್ಟರಾಜು ಪ್ರತಿಕ್ರಿಯಿಸಿದ್ದು, ನಾಲ್ಕು ವರ್ಷದ ಹಿಂದೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮರ್ಡರ್ ಆಗಿತ್ತು. ಆ ಕೊಲೆಯಲ್ಲಿ ರಘು ಎಂಬಾತ ಭಾಗಿಯಾಗಿದ್ದ. ಆ ರಘು ನಿನ್ನೆ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡ್ತಾ ಇದ್ದ. ನಾನು ಹಾಗೂ ನನ್ನ ಗನ್ ಮ್ಯಾನ್ ಗಲಾಟೆ ಬಿಡಿಸಿದೋ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದೋ. ಪುಟ್ಟಣ್ಣಯ್ಯ ಕಾಲದಿಂದ ನಾವು ಸ್ಪೂರ್ತಿದಾಯಕವಾಗಿ ಚುನಾವಣೆ ಮಾಡ್ತಾ ಇದ್ದೋ. ದರ್ಶನ್ ಪುಟ್ಟಣ್ಣಯ್ಯ ಮನುಷ್ಯ ಒಳ್ಳೆಯವನು ಎಂಬುದು ನನ್ನ ಭಾವನೆ. ದರ್ಶನ್ ಅಕ್ಕ-ಪಕ್ಕ ಇರೋರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿ.ಮಲ್ಲಿಗೆರೆ, ಚಿನಕುರುಳಿಗೆ ದರ್ಶನ್ ಬಂದಿದ್ದಾರೆ. ಇಲ್ಲೂ ಸಹ ಗಲಾಟೆ ಮಾಡಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಎಲ್ಲಾ ಕಳಿಸಿದ್ದಾರೆ. ಈ ರೀತಿಯ ನಡವಳಿಕೆಗಳು ನಡೆಯಬಾರದು. ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಫಲಿತಾಂಶ ಬಂದ ಮೇಲು ಎಲ್ಲರೂ ಶಾಂತಿಯುತವಾಗಿ ಇರಬೇಕು. ದರ್ಶನ್ ಅವರು ಅವರ ಮುಖಂಡರಿಗೆ ಕಿವಿ ಮಾತು ಹೇಳಬೇಕು ಎಂದು ಹೇಳಿದ್ದಾರೆ.