ಮನಿ ಲಾಂಡರಿಂಗ್ ಪ್ರಕರಣ: ದೆಹಲಿ ಸಚಿವ ಸತ್ಯೇಂದರ್ ಜೈನ್ ಜಾಮೀನು ಅರ್ಜಿ ವಜಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ಜಾಮೀನು ಅರ್ಜಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಶನಿವಾರ ವಜಾಗೊಳಿಸಿದೆ.

ವಿಶೇಷ ಸಿಬಿಐ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಏಷಿಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್ಐ) ವರದಿ ಮಾಡಿದೆ. ಕೋವಿಡ್ -19 ನಿಂದಾಗಿ ತನಗೆ ಜ್ಞಾಪಕ ಶಕ್ತಿ ನಷ್ಟವಾಗಿದೆ ಎಂದು ಜೈನ್ ತನಿಖೆಯ ಸಮಯದಲ್ಲಿ ಹೇಳಿಕೊಂಡಿದ್ದರು.

ಈ ಹಿಂದೆ ನ್ಯಾಯಾಲಯವು ಜೂನ್ 14 ರಂದು ಜಾಮೀನಿನ ಮೇಲಿನ ಆದೇಶವನ್ನು ಕಾಯ್ದಿರಿಸಿತ್ತು. ಜೈನ್ ಅವರ ವಕೀಲರು ಈಗ ಜಾಮೀನಿಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಲಿದ್ದಾರೆ.

ದೆಹಲಿ ಆರೋಗ್ಯ ಸಚಿವರ ವಿರುದ್ಧ ಮನಿ ಲಾಂಡರಿಂಗ್ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಜೈನ್ ಅವರ ಹಿರಿಯ ವಕೀಲರು ಈ ಹಿಂದೆ ಸಲ್ಲಿಸಿದ್ದರು. ಮತ್ತೊಂದೆಡೆ, ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆಗಳಿವೆ ಎಂದು ಹೇಳಿತ್ತು.

About The Author