National News: ಉಗ್ರವಾದ ಬೆಂಬಲಿಸುತ್ತಿರುವ ಪಾಕಿಸ್ತಾನದ ಕೊಳಕುತನದ ಬಣ್ಣ ಬಯಲು ಮಾಡಲು 33 ದೇಶಗಳಿಗೆ ತೆರಳಿರುವ ಭಾರತದ 7 ಸರ್ವಪಕ್ಷಗಳ ನಿಯೋಗಗಳನ್ನು ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡುವ ಸಾಧ್ಯತೆಗಳಿವೆ. ಅಲ್ಲದೆ ಈ ನಿರೀಕ್ಷಿತ ಭೇಟಿಯು ಜೂನ್ 9 ಅಥವಾ 10 ರಂದು ನಡೆಯಲಿದೆ ಎನ್ನಲಾಗುತ್ತಿದೆ.ಇನ್ನೂ ಭಯೋತ್ಫಾದಕತೆಯ ವಿರುದ್ಧ ಭಾರತದ ಹೋರಾಟದ ಕುರಿತು ಹಾಗೂ ಪಾಕ್ನ ಉಗ್ರ ಪೋಷಕ ಮುಖವಾಡವನ್ನು ಜಗತ್ತಿನೆದುರು ಬಿಚ್ಚಿಡಲು ತೆರಳಿದ್ದ ಸರ್ವಪಕ್ಷಗಳ ನಿಯೋಗಗಳು ಒಂದೊಂದಾಗಿ ತಮ್ಮ ಜವಾಬ್ದಾರಿಯನ್ನು ಪೊರೈಸಿ ತಾಯ್ನಾಡಿಗೆ ವಾಪಸ್ ಆಗುತ್ತಿದ್ದು, ಎಲ್ಲ ನಿಯೋಗಗಳು ಮರಳಿದ ಬಳಿಕ ಮೋದಿ ಮಹತ್ವದ ಸಭೆಯನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸಂಸದ ಜಯಂತ್ ಪಾಂಡಾ ನೇತೃತ್ವದ ನಿಯೋಗ ದೇಶಕ್ಕೆ ಮರಳಿದ್ದು, ಇನ್ನುಳಿದ ನಿಯೋಗಗಳು ಶೀಘ್ರದಲ್ಲೇ ಮರಳಲಿವೆ. ಇನ್ನೂ ವಿದೇಶಗಳಿಂದ ವಾಪಸ್ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮೊದಲೇ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಸಂಪೂರ್ಣ ಭೇಟಿಯ ವಿವರಗಳನ್ನು ಸಂಸದರು ನೀಡಲಿದ್ದಾರೆ. ಇದಾದ ಬಳಿಕ ಹಲವು ದೇಶಗಳು ನೀಡಿರುವ ಪ್ರತಿಕ್ರಿಯೆಯನ್ನು ನಿಯೋಗಗಳು ಮೋದಿಗೆ ಒದಗಿಸಲಿವೆಎನ್ನಲಾಗುತ್ತಿದೆ.
ಪಹಲ್ಗಾಮ್ನಲ್ಲಿ ನಡೆದಿತ್ತು ಭೀಕರ ಉಗ್ರರ ಗುಂಡಿನ ದಾಳಿ..
ಪಾಕಿಸ್ತಾನದ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಕಳೆದ ಏಪ್ರಿಲ್ 22ರಂದು ನಡೆಸಿದ್ದ ಭೀಕರ ಗುಂಡಿನ ದಾಳಿಯಲ್ಲಿ 26 ಜನ ಅಮಾಯಕ ಪ್ರವಾಸಿಗರು ಉಸಿರು ಚೆಲ್ಲಿದ್ದರು. ಅಲ್ಲದೆ ಇದಕ್ಕೆ ಪ್ರತೀಕಾರವಾಗಿ ಭಾರತವು ಮೇ 6ರ ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿ ಒಟ್ಟು 11 ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡುವ ಮೂಲಕ ತಕ್ಕ ಪ್ರತ್ತ್ಯುತ್ತರ ನೀಡಿದೆ.
ಭಾರತ ಪಾಕ್ನ ಉಗ್ರರ ನೆಲೆಗಳ ಮೇಲೆ ನಡೆಸಿದ ತೀವ್ರ ದಾಳಿಯಿಂದ ಎರಡೂ ದೇಶಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅಲ್ಲದೆ ದಿಢೀರನೆ ಕದನ ವಿರಾಮ ಉಂಟಾಗಿತು. ಇದರ ಬೆನ್ನಲ್ಲೇ ಸರ್ವಪಕ್ಷಗಳ ಸಂಸದರ 7 ನಿಯೋಗಗಳನ್ನು ರಚಿಸಿದ್ದ ಭಾರತ ಜಗತ್ತಿನ ವಿವಿಧ ದೇಶಗಳಿಗೆ ಭಾರತದ ಉದ್ದೇಶವನ್ನು ತಿಳಿಸಲು ಕಳುಹಿಸಲಾಗಿತ್ತು.
ಪಾಕ್ ವಿರುದ್ಧ ಭಾರತಕ್ಕೆ ಬ್ರಿಟನ್ ಮತ್ತು ಸ್ಪೇನ್ ದೇಶಗಳ ಬೆಂಬಲ..
ಇನ್ನೂ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆ ನೀತಿಯನ್ನು ತಿಳಿಸುವ ಹಾಗೂ ಪಾಕ್ ಪ್ರೇರಿತ ಉಗ್ರವಾದದ ವಿರುದ್ಧ ದೇಶದ ನಿಲುವನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಭಾರತದ ನಿಯೋಗಗಳು ಯಶಸ್ವಿಯಾಗಿವೆ. ಈ ಮೂಲಕ ಪಾಕ್ ವಿರುದ್ಧ ಭಾರತಕ್ಕೆ ಬ್ರಿಟನ್ ಮತ್ತು ಸ್ಪೇನ್ ದೇಶಗಳ ಬೆಂಬಲ ದೊರೆತಿದ್ದು, ಈ ಕುರಿತು ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗವು ಬ್ರಿಟನ್ ಸಚಿವೆ ಜೊತೆ ಮಹತ್ವದ ಮಾತುಕತೆ ನಡೆಸಿದೆ.ಇನ್ನೂ ಉಗ್ರವಾದದ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸ್ಪೇನ್ ವಿದೇಶಾಂಗ ಸಂಸದೆ ಕನಿಮೋಳಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಭಾರತದ ಹೋರಾಟಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ..
ಅಲ್ಲದೆ ಅಲ್ಜೀರಿಯಾ , ಮಲೇಷ್ಯಾ, ಈಜಿಪ್ಟ್, ಲಿಬೇರಿಯಾ, ಬ್ರೆಜಿಲ್ಗಳಿಗೂ ತೆರಳಿದ್ದ ನಿಯೋಗಗಳು ಪಾಕಿಸ್ತಾನ ಪ್ರಾಯೋಜಿತ ಉಗ್ರವಾದದ ವಿರುದ್ಧದ ಭಾರತ ಕೈಗೊಂಡಿರುವ ಹೋರಾಟದ ಬಗ್ಗೆ ಮನವಿ ಮಾಡಿವೆ.ಭಾರತದ ಈ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿವೆ.ಸರ್ವಪಕ್ಷಗಳ ನಿಯೋಗಗಳ ಉದ್ದೇಶವೂ ಬಹುತೇಕ ಈಡೇರಿದಂತಾಗಿದ್ದು, ಅಂತಿಮವಾಗಿ ನಿಯೋಗಗಳು ತಾವು ಕೈಗೊಂಡಿದ್ದ ಪ್ರವಾಸದ ರಿಪೋರ್ಟ್ ಕಾರ್ಡ್ ಅನ್ನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗಳಿಗೆ ಹಸ್ತಾಂತರಿಸಲಿವೆ. ಈ ಮೂಲಕ ಐತಿಹಾಸಿಕವಾಗಿ ಹಾಗೂ ರಾಜತಾಂತ್ರಿಕವಾಗಿ ಜಾಗತಿಕ ಮಟ್ಟದಲ್ಲಿ ಭಾರತ ಆಪರೇಷನ್ ಸಿಂಧೂರ್ನ ಯಶೋಗಾಥೆಯನ್ನು ಪಸರಿಸುವಲ್ಲಿ ಸಫಲವಾಗಿದೆ.