Navaratri Special: ನವರಾತ್ರಿಯ ವಿಶೇಷವಾಗಿ ನಾವಿಂದು ಬಾದಾಮಿ ಬನಶಂಕರಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ.
ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಪಾರ್ವತಿಯ ಅವತಾರವಾದ ಬನಶಂಕರಿ ಅಮ್ಮನನ್ನು ಪೂಜಿಸಲ್ಪಡುತ್ತದೆ. ಬಾಗಲಕೋಟೆಯಲ್ಲಿರುವ ಬಾದಾಮಿಗೆ ಬರೀ ಕರ್ನಾಟಕದ ಭಕ್ತರು ಮಾತ್ರವಲ್ಲದೇ, ಪಕ್ಕದ ರಾಜ್ಯಗಳಾದ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ದೇವಿಯ ಭಕ್ತರು ದರುಶನಕ್ಕಾಗಿ ಇಲ್ಲಿಗೆ ಬರುತ್ತಾರೆ.
ಇನ್ನು ಬನಶಂಕರಿ ಇಲ್ಲಿ ಬಂದು ನೆಲೆನಿಲ್ಲಲು ಕಾರಣವೇನು ಎಂದರೆ, ಈ ಸ್ಥಳ ಮೊದಲು ದಟ್ಟಾರಣ್ಯವಾಗಿತ್ತು. ದುರ್ಗಮಾಸುರ ಎಂಬ ಅಸುರ ಇಲ್ಲಿ ಎಲ್ಲರಿಗೂ ತೊಂದರೆ ಕೊಡುತ್ತ ತಿರುಗುತ್ತಿದ್ದ. ಋಷಿ ಮುನಿಗಳ ಯಾಗ ಯಜ್ಞಗಳನ್ನು ಹಾಳು ಮಾಡುತ್ತಿದ್ದ. ಹಾಗಾಗಿ ದೇವತೆಗಳು, ಋಷಿ ಮುನಿಗಳು ಸೇರಿ, ದೇವಿಯನ್ನು ಈ ಉಪಟಳದಿಂದ ರಕ್ಷಿಸುವಂತೆ ಬೇಡಿ, ಯಜ್ಞ ಮಾಡುತ್ತಾರೆ. ಆ ಯಜ್ಞ ಪೂರ್ಣಗೊಂಡ ಬಳಿಕ, ಲಕ್ಷ್ಮೀ ಮತ್ತು ಸರಸ್ವತಿ ದೇವಿಯ ಅಂಶಗಳು ಒಂದೆಡೆ ಸೇರಿ, ಆ ಶಕ್ತಿ ಯಜ್ಞದಿಂದ ಹೊರಬರುತ್ತದೆ. ಬಳಿಕ ದುರ್ಗಮಾಸುರನ ಸಂಹಾರ ಮಾಡುತ್ತದೆ.
ಬಳಿಕ ಆ ಶಕ್ತಿ ದೇವಿಯ ರೂಪ ತಾಳಿ, ಅದೇ ಸ್ಥಳದಲ್ಲಿ ನೆಲೆಗೊಳ್ಳುತ್ತಾಳೆ. ಅಲ್ಲಿ ದಟ್ಟಕಾಡು ಇದ್ದು, ದೇವಿ ಅಲ್ಲಿ ನೆಲೆ ನಿಂತ ಕಾರಣ, ಆಕೆಯನ್ನು ವನಶಂಕರಿ ಎಂದು ಕರೆಯಲಾಯಿತು. ಹಾಗಾಗಿ ಈಗಲೂ ದೇವಿಯನ್ನು ಬನಶಂಕರಿ ಅಥವಾ ವನಶಂಕರಿ ಎಂದು ಕರೆಯಲಾಗುತ್ತದೆ. ಅಲ್ಲದೇ ಈಕೆಯನ್ನು ಶಾಕಾಂಬರಿ ಎಂದು ಹೇಳಲಾಗುತ್ತದೆ.. ತರಕಾರಿಗಳಿಂದಲೇ ಇಲ್ಲಿನ ಜನ ಈಕೆಯನ್ನು ಶೃಂಗರಿಸುತ್ತಾರೆ.
ಗತಕಾಲದಲ್ಲಿ ಯಜ್ಞ ಯಾಗಾದಿಗಳು ನಿಂತು ಹೋಗಿ, ಮಳೆ ಬೆಳೆ ಇಲ್ಲದೇ ಜನ ಕಂಗಾಲಾಗಿ, ದೇವಿಯ ಮೊರೆ ಹೋಗುತ್ತಾರೆ. ಆಗ ದೇವಿ ಮಳೆ ಬರುವಂತೆ ಮಾಡುವುದಲ್ಲದೇ, ತನ್ನ ಶಾಖದಿಂದಲೇ, ತರಕಾರಿ ಉತ್ಪತ್ತಿಯಾಗುವಂತೆ ಮಾಡಿ, ಜನರ ಹೊಟ್ಟೆ ತುಂಬಿಸುತ್ತಾಳೆ. ಹಾಗಾಗಿ ಈಕೆಯನ್ನು ಶಾಖಾಂಬರಿ ಎಂದು ಕರೆಯಲಾಗುತ್ತದೆ. ಇದೇ ಕಾರಣಕ್ಕೆ, ಈ ದೇವಿಗೆ ತರಕಾರಿಗಳಿಂದ ಶೃಂಗಾರ ಮಾಡಲಾಗುತ್ತದೆ.