Spiritual: ಇಂದು ನವರಾತ್ರಿಯ ಎರಡನೇಯ ದಿನ. ಈ ದಿನ ದುರ್ಗೆಯ ಎರಡನೇಯ ರೂಪವಾದ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ.
ಪಾರ್ವತಿಯ ಪ್ರತಿರೂಪವೇ ಈ ನವದುರ್ಗೆಯರು. ಆ ನವದುರ್ಗೆಯರಲ್ಲಿ ಒಬ್ಬಳು ಬ್ರಹ್ಮಚಾರಿಣಿ. ಈಕೆ ಕಠೋರವಾಗಿ ತಪಸ್ಸು ಮಾಡಿ, ಬ್ರಹ್ಮಚಾರಿಣಿ ಎನ್ನಿಸಿಕೊಂಡು ಶಿವನನ್ನು ಒಲಿಸಿಕೊಂಡವಳು. ತಂದೆ ದಕ್ಷನ ಅವಮಾನ ತಾಳಲಾರದೇ, ದಾಕ್ಷಾಯಿಣಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಬಿಟ್ಟು ಸತಿ ಎನ್ನಿಸಿಕೊಂಡಳು. ಈಕೆಯೇ ಮುಂದಿನ ಜನ್ಮದಲ್ಲಿ ಹಿಮಾಲಯನ ಮಗಳು ಪಾರ್ವತಿಯಾಗಿ ಜನ್ಮ ತಾಳಿದಳು.
ಶಿವನನ್ನು ಈ ಜನ್ಮದಲ್ಲಿ ಪಡೆಯಲು ನೀನು ಕಠಿಣವಾದ ತಪಸ್ಸು ಮಾಡಬೇಕು ಎಂದು ನಾರದರು, ಪಾರ್ವತಿಗೆ ಸಲಹೆ ನೀಡಿದರು. ಅವರ ಸಲಹೆಯಂತೆ ಪಾರ್ವತಿ, ಚಳಿ, ಮಳೆ, ಗಾಳಿ ಎನ್ನದೇ ಹಲವು ಸಮಯದವರೆಗೆ ತಪಸ್ಸಿಗೆ ಕೂತಳು. ಕೆಲ ವರ್ಷಗಳ ಕಾಲ ಹಣ್ಣು- ಹಂಪಲು ತಿಂದಳು, ಬಳಿಕ ತರಕಾರಿಗಳನ್ನಷ್ಟೇ ತಿಂದಳು, ನಂತರ ಎಲೆಗಳನ್ನಷ್ಟೇ ಸೇವಿಸಿ, ಉಪವಾಸ ಆಚರಿಸಿದಳು. ಬಳಿಕ ಏನನ್ನೂ ಸೇವಿಸದೇ, ಪೂರ್ತಿ ಉಪವಾಸ ಮಾಡಿ, ಬ್ರಹ್ಮಚಾರಿಣಿ ರೂಪ ತಾಳಿದಳು.
ಈಕೆಯ ಕಠಿಣ ತಪಸ್ಸಿಗೆ ಮೆಚ್ಚಿದ ಶಿವ, ಪ್ರತ್ಯಕ್ಷನಾಗಿ ಈಕೆಯನ್ನು ವರಿಸುತ್ತಾನೆ. ಈಕೆ ಎಲೆಯನ್ನೂ ತಿನ್ನುವುದನ್ನು ನಿಲ್ಲಿಸಿ, ಸಂಪೂರ್ಣ ಉಪವಾಸ ಮಾಡಿದ್ದಕ್ಕಾಗಿ ಈಕೆಯನ್ನು ಅಪರ್ಣಳೆಂದು ಕರೆಯುತ್ತಾರೆ. ಪರ್ಣವೆಂದರೆ ಎಲೆ. ಎಲೆಯನ್ನೂ ಸೇವಿಸದ ಕಾರಣ ಅಪರ್ಣಳೆಂದು ಕರೆಯುತ್ತಾರೆ.