Political News: ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಗಣಿ ನಾಡಿನ ಕೈ ನಾಯಕರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬುಧವಾರ ನಿದ್ದೆಗಣ್ಣಲ್ಲಿದ್ದ ಸಂಸದ ಹಾಗೂ ಶಾಸಕರ ಮನೆಗಳಿಗೆ ತೆರಳಿ ಬೆಳಂಬೆಳಿಗ್ಗೆ ಇ.ಡಿ. ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದೆ.
ಇನ್ನೂ ತಮ್ಮ ಪಕ್ಷದ ಸಂಸದ ಹಾಗೂ ಶಾಸಕರ ಮನೆ, ಕಚೇರಿಗಳ ಮೇಲೆ ಇ.ಡಿ. ದಾಳಿ ನಡೆಸಿರುವ ವಿಚಾರಕ್ಕೆ ಆಡಳಿತಾರೂಢ ಸರ್ಕಾರದ ಸಿಎಂ, ಮಂತ್ರಿಗಳು ಹಾಗೂ ಶಾಸಕರು ನೇರವಾಗಿ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಆದರೆ ವಿಪಕ್ಷ ಬಿಜೆಪಿಯು ಮಾತ್ರ ದಾಳಿಯನ್ನು ಸಮರ್ಥಿಸಿಕೊಂಡಿದೆ.
ನಾನು ಹುಟ್ಟಿದಾಗಿನಿಂದಲೂ ಯಾರ ಭಯದಲ್ಲೂ ಇಲ್ಲ..!
ಈ ಎಲ್ಲದರ ನಡುವೆಯೇ ಸ್ವತಃ ಇ.ಡಿ. ಅಧಿಕಾರಿಗಳಿಂದ ದಾಳಿಗೆ ಒಳಗಾಗಿರುವ ಬಳ್ಳಾರಿ ಕಾಂಗ್ರೆಸ್ ಸಂಸದ ಇ. ತುಕಾರಾಂ ದಾಳಿಯ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಇ.ಡಿ. ಅಧಿಕಾರಿಗಳ ವಿಚಾರಣೆಯ ಬಳಿಕ ಮಾತನಾಡಿರುವ ಅವರು, ಇ.ಡಿ. ಅಧಿಕಾರಿಗಳು ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಬೆಳಗ್ಗೆ 6.30ಕ್ಕೆ ಸರ್ಚ್ ವಾರಂಟ್ ಜತೆ ಬಂದು ತಪಾಸಣೆ ಮಾಡಿದರು. ಅವರಿಗೆ ಎಲ್ಲ ರೀತಿಯಿಂದಲೂ ಮಾಹಿತಿ ಒದಗಿಸಿದ್ದೇನೆ ಎಂದು ಹೇಳಿದ್ದಾರೆ.
ಒಟ್ಟು 6 ಅಧಿಕಾರಿಗಳನ್ನೊಳಗೊಂಡ ತಂಡ ಬಂದಿತ್ತು. ವಾಲ್ಮೀಕಿ ನಿಗಮದ ಬಗ್ಗೆ ಇಡಿ ಅಧಿಕಾರಿಗಳು ನನಗೆ ಪ್ರಶ್ನೆ ಕೇಳಿದರು. ವಾಲ್ಮೀಕಿ ನಿಗಮ ಹಗರಣಕ್ಕೂ ನನಗೂ ಸಂಬಂಧ ಇಲ್ಲ ಎಂದಿದ್ದೇನೆ. ಮಾಹಿತಿ ನೀಡಿದ್ದೇನೆ. ನಾನು ಹುಟ್ಟಿದಾಗಿನಿಂದ ಈವರೆಗೂ ಯಾರ ಭಯನೂ ಇಲ್ಲ. ಪ್ರೀತಿ, ಅಭಿಮಾನ ಇರುವುದರಿಂದಲೇ ನಾನು ಗೆಲ್ಲುತ್ತಿರುವುದು. ಜನರು ನನ್ನ ಜೊತೆ ಇರುವವರೆಗೂ ನನಗೆ ಯಾವ ಭಯನೂ ಇಲ್ಲ ಎಂದು ತಿಳಿಸಿದ್ದಾರೆ.
ನಾನು ಆಸ್ತಿನೇ ಮಾಡಿಕೊಂಡಿಲ್ಲ, ಮಕ್ಕಳೇ ನನ್ನ ಆಸ್ತಿ..
ನಾನು ಆಸ್ತಿನೇ ಮಾಡಿಲ್ಲ, ಮಕ್ಕಳನ್ನೇ ಆಸ್ತಿ ಮಾಡಿಕೊಂಡಿದ್ದೇನೆ. ನಾನು ಯಾವುದನ್ನು ಹೇಳಲ್ಲ, ದೇವರು ಎಲ್ಲವನ್ನೋ ನೋಡಿಕೊಳ್ತಾನೆ. ಸಂತೋಷ್ ಲಾಡ್ ನಮ್ಮ ಜತೆ ಇರುವಾಗ ನಮಗೇನು ಆಗುವುದಿಲ್ಲ. ಯಾವ ಉದ್ದೇಶಕ್ಕಾದ್ರೂ ಬರಲಿ ಅದನ್ನು ದೇವರು ನೋಡಿಕೊಳ್ತಾನೆ ಎಂದು ತುಕಾರಾಂ ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನೂ ಇ.ಡಿ. ಅಧಿಕಾರಿಗಳು ನಮ್ಮ ಮನೆಯಲ್ಲಿ ಯಾವುದನ್ನೂ ಕೂಡ ಜಪ್ತಿ ಮಾಡಿಲ್ಲ. ಕೆಲವು ಪ್ರಶ್ನೆ ಕೇಳಿದ್ರು, ಅಧಿಕಾರಿಗಳಿಗೆ ಸಹಕರಿಸಿದ್ದೇನೆ. ರಾಜಕೀಯ ಅಂದ್ರೆ ವಿಪಕ್ಷಗಳು ಷಡ್ಯಂತ್ರ ಮಾಡುತ್ತವೆ. ಯಾರು ಏನೇ ಮಾಡಿದ್ರೂ, ನಮ್ಮನ್ನು ಮುಟ್ಟೋಕಾಗಲ್ಲ. ನಾನು ಜನರ ಪ್ರೀತಿಯಿಂದ ಗೆದ್ದಿದ್ದೇನೆ. 40-50 ಕೋಟಿ ರೂಪಾಯಿ ಜಪ್ತಿ ಎಂದು ವದಂತಿ ಹರಿದಾಡುತ್ತಿದೆ ಆದರೆ, ಅದೆಲ್ಲ ಸುಳ್ಳು ಎಂದು ಸಂಸದ ತುಕಾರಾಂ ಸ್ಪಷ್ಟನೆ ನೀಡಿದ್ದಾರೆ.
ಒಂದು ತಂಡು ಪೇಪರ್, ಒಂದು ರೂಪಾಯಿ ಹಣವನ್ನೂ ಸೀಜ್ ಮಾಡಿಲ್ಲ..
ಅಲ್ಲದೆ ಇ.ಡಿ ಅಧಿಕಾರಿಗಳು ನನ್ನ ಮನೆಯಲ್ಲಿ ಒಂದು ತುಂಡು ಪೇಪರ್, ಒಂದು ರೂಪಾಯಿ ಹಣವನ್ನೂ ಸೀಜ್ ಮಾಡಿಲ್ಲ. ನನ್ನ ಮನೆಯಲ್ಲಿ ಅವರಿಗೆ ಏನೂ ಸಿಕ್ಕಿಲ್ಲ. ನನಗೆ ಅವರು ಹಲವಾರು ಪ್ರಶ್ನೆಗಳನ್ನು ಕೇಳಿದರು. ನಮ್ಮ ವ್ಯವಹಾರ, ವಾಲ್ಮೀಕಿ ನಿಗಮದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ಇ.ಡಿ. ದಾಳಿಗೊಳಗಾದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.
ಕೈ ನಾಯಕರನ್ನೇ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋದು ದೇಶಕ್ಕೆ ಗೊತ್ತಿದೆ..
ರಾಜಕೀಯ ಅಂದರೆ ನಮ್ಮ ವಿರೋಧ ಪಕ್ಷಗಳು ಷಡ್ಯಂತ್ರ ಮಾಡುತ್ತವೆ. ಆದರೆ ಯಾರು ಏನೇ ಮಾಡಿದರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷರು ಸೇರಿದಂತೆ ನಮ್ಮ ಎಲ್ಲ ಹಿರಿಯ ನಾಯಕರು ನಮ್ಮ ಜೊತೆಗಿದ್ದಾರೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿಲ್ಲ ಎಂದು ಎಂದು ಅವರು ತಿಳಿಸಿದ್ದಾರೆ.
ಜನರ ಪ್ರೀತಿಯಿಂದ ಗೆದ್ದಿದ್ದೇನೆ. ಜನರ ಆಶೀರ್ವಾದ, ತಾಯಿ ದುರ್ಗಮ್ಮ ಇರುವವರೆಗೂ ಈ ಭರತ್ ರೆಡ್ಡಿಯನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇದೇ ಕೈ ಶಾಸಕ ಗುಡುಗಿದ್ದಾರೆ.