ಬೆಂಗಳೂರು : 26ನೇ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ, ಸೈನಿಕರ ಶೌರ್ಯ ಮತ್ತು ತ್ಯಾಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಭಾರತೀಯ ಸೇನೆಯು ಮುಂದಾಗಿದೆ. ದೇಶದ ನಾಗರಿಕರು ಹುತಾತ್ಮರಿಗೆ ಇ-ಶ್ರದ್ದಾಂಜಲಿ ಸಲ್ಲಿಸುವ ವಿಶೇಷ ಪೋರ್ಟಲ್ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಸೇನೆಯು ಇಂದು ಪ್ರಾರಂಭಿಸಲಿದೆ.
1999ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಗೆಲುವಿನ ಸವಿನೆನಪಿಗಾಗಿ ಆಚರಿಸಲಾಗುವ ವಿಜಯ್ ದಿನಕ್ಕೆ ಸೇನೆಯು ದೇಶದ ಜನರಿಗೆ ಸಿಹಿ ಸುದ್ದಿ ನೀಡಿದೆ. ಶ್ರದ್ದಾಂಜಲಿ ಪೋರ್ಟಲ್ ಜೊತೆಯಾಗಿಯೇ ಕಾರ್ಗಿಲ್ ಯುದ್ಧದ ರಣ ರೋಚಕ ಕಥೆಗಳನ್ನು ಕೇಳಲು ಸಾರ್ವಜನಿಕರಿಗೆ ಅನುಕೂಲವಾಗಬೇಕು. ಇದಕ್ಕಾಗಿ ಕ್ಯುಆರ್ ಕೋಡ್ ಆಧಾರಿತ ಆಡಿಯೋ ಆಪ್ ಬಿಡುಗಡೆ ಮಾಡಲು ಸೇನೆಯು ಸಜ್ಜಾಗಿದೆ.
ಇನ್ನೂ ಮೂರನೇಯದಾಗಿ ಕಾರ್ಗಿಲ್ ವಿಜಯದ ನೆನಪಿನಲ್ಲಿಯೇ ಇಂಡಸ್ ಪಾಯಿಂಟ್ ವ್ಯೂವ್ ಅಡಿಯಲ್ಲಿ ಬಟಾಲಿಕ್ ಸೆಕ್ಟರ್ ವರೆಗೆ ಹೋಗಿ, ಗಡಿ ರೇಖೆಯನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಭಾರತ – -ಪಾಕಿಸ್ತಾನದ ಗಡಿಯಲ್ಲಿ ನಮ್ಮ ಯೋಧರು ಎಂಥ ಕಠಿಣ ಸ್ಥಿತಿಯಲ್ಲಿ ದೇಶ ಸೇವೆ ಮಾಡುತ್ತಾರೆ ಎನ್ನುವುದು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ ಉದ್ದೇಶದಿಂದ ಸೇನೆಯು ಮೂರು ಮಹತ್ವದ ಯೋಜನೆಗಳಿಗೆ ಇಂದು ಚಾಲನೆ ನೀಡಲಿದೆ.
ಇನ್ನೂ ಆಪರೇಷನ್ ಸಿಂಧೂರ್ ಕುರಿತು ಮಾತನಾಡಿರುವ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಆಪರೇಷನ್ ಸಿಂಧೂರದ ಮೂಲಕ ಭಾರತ ನೀಡಿದ ಏಟಿಂದ ಸುಧಾರಿಸಿಕೊಳ್ಳಲು ಪಾಕಿಸ್ತಾನ ಕಷ್ಟಪಡುತ್ತಿರುವ ಹೊತ್ತಿನಲ್ಲೇ, ನಮ್ಮ ಸಿಂಧೂರ ಕಾರ್ಯಾಚರಣೆ ಇನ್ನೂ ನಿಂತಿಲ್ಲ ಎಂದು ಪಾಕ್ಗೆ ಎಚ್ಚರಿಸಿದ್ದಾರೆ.
ಭಾರತೀಯ ಸೇನೆ ವರ್ಷದ ಎಲ್ಲಾ 365 ದಿನ ಹಾಗೂ 24 ತಾಸು ಎಚ್ಚರಿಕೆಯಿಂದ ಸಮರಕ್ಕೆ ಸಿದ್ದವಾಗಿರಬೇಕು ಎಂದು ಕರೆ ನೀಡಿದ್ದಾರೆ. ಇನ್ನೂ ಈ ಯುದ್ಧದಲ್ಲಿ ರನ್ನರ್ – ಅಪ್ ಎಂಬ ಎರಡನೇಯ ಸ್ಥಾನ ಇರುವುದಿಲ್ಲ. ಹೀಗಾಗಿ ಸೇನೆಯು ಸದಾ ಎಚ್ಚರದಿಂದ ಯುದ್ಧಸನ್ನದ್ಧವಾಗಿರಬೇಕು. ಇದಕ್ಕೆ ಆಪರೇಷನ್ ಸಿಂಧೂರ ಸೂಕ್ತ ಉದಾಹರಣೆ ಎಂದು ಹೇಳಿದ್ದಾರೆ. ಈ ಮೂಲಕ ಸೋತ ಪಾಕ್ ಮತ್ತೆ ಯಾವಾಗಲಾದರೂ ದಾಳಿ ಮಾಡಬಹುದೆಂದು ಪರೋಕ್ಷವಾಗಿ ಅನಿಲ್ ಚೌಹಾಣ್ ಎಚ್ಚರಿಸಿದ್ದಾರೆ.