Political News: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾಗಲೇ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಡಿ.ಕೆ.ಸಹೋದರರು ಅಚ್ಚರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವುದಾಗಿ ಹೇಳಿದ್ದರು. ಆದರೆ, ಆ ಅಚ್ಚರಿ ಅಭ್ಯರ್ಥಿ ಈಗ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ನಟ ದರ್ಶನ್ ಹೆಸರನ್ನು ಪ್ರಸ್ತಾಪಿಸದೆ ಮಾತನಾಡಿರುವ ಅವರು, ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಹಾಕುತ್ತೇವೆ ಎಂದು ಡಿ.ಕೆ. ಸುರೇಶ್ ಹೇಳಿದ್ದರು. ಕಾಂಗ್ರೆಸ್ ಪರವಾಗಿ ಚಿತ್ರನಟರೊಬ್ಬರು ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ನನಗೆ ಬಂದ ಮಾಹಿತಿ ಪ್ರಕಾರ, ಅವರನ್ನೇ ಕರೆದುಕೊಂಡು ಬಂದು ನಿಲ್ಲಿಸಲು ಸಹೋದರರು ಯೋಜನೆ ಹಾಕಿದ್ದರು. ಈಗ ಬೇರೆಯವರನ್ನು ಕರೆ ತರುತ್ತಾರಾ ನೋಡಬೇಕು ಎಂದು ಹೇಳಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಂದ ಗೆಲುವು ಸಾಧಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ 14 ದಿನಗಳಲ್ಲಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಿದೆ. ಇದರ ಬೆನ್ನಲ್ಲೇ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಯಾರು? ಚನ್ನಪಟ್ಟಣದಲ್ಲಿ ಹೆಚ್ಡಿಕೆ ಅವರ ಉತ್ತರಾಧಿಕಾರಿ ಯಾರು? ಎಂಬುದರ ಕುರಿತ ಚರ್ಚೆ ಜೋರಾಗಿದೆ.
ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಯುತ್ತಿದೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ವ್ಯಕ್ತವಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಪುತ್ರ ನಿಖಿಲ್ ಅಥವಾ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸಿ ಕ್ಷೇತ್ರದ ಮೇಲೆ ಹಿಡಿತ ಉಳಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವಾಗ ನಿಖಿಲ್ ಹೆಸರು ಮುನ್ನಲೆಗೆ ಬಂತೋ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು, ತಾವು ಕ್ಷೇತ್ರದ ಆಕಾಂಕ್ಷಿ ಎಂಬುದನ್ನು ತಿಳಿಸಿದ್ದಾರೆ. ಸಿಪಿವೈ ಅವರು ಕಳೆದ ಎರಡು ದಿನಗಳಿಂದ ದೆಹಲಿಯ ನಾಯಕರನ್ನು ಭೇಟಿ ಮಾಡಿ, ಕ್ಷೇತ್ರದ ಟಿಕೆಟ್ ತಮಗೇ ನೀಡುವಂತೆ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ.
2018ರಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸಿಪಿವೈ, ಕೇಂದ್ರ ನಾಯಕರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ರಾಜ್ಯ ನಾಯಕ ಮರ್ಜಿಗಿಂತ ಹೈಕಮಾಂಡ್ ಮರ್ಜಿಗೆ ಒಳಗಾಗಿ ಕೆಲಸ ಮಾಡುವ ರಾಜಕಾರಣಿಯಾಗಿದ್ದಾರೆ. ಒಂದು ವೇಳೆ ಉಪಚುನಾವಣೆಯ ಟಿಕೆಟ್ ಸಿಗದೇ ಹೋದಾರೆ ಯೋಗೇಶ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯೋಗೇಶ್ವರ್, ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎಂಬ ಪ್ರತ್ಯೇಕತೆ ಇಲ್ಲ. ಉಪ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಬೇಕಷ್ಟೆ. ಕ್ಷೇತ್ರದಲ್ಲಿರುವ ಪಕ್ಷ ಹೊಂದಿರುವ ಬಲವನ್ನು ನಾನು ಪಕ್ಷದ ವರಿಷ್ಠರ ಗಮನಕ್ಕೇನೂ ತಂದಿಲ್ಲ. ಅದಕ್ಕಿನ್ನೂ ಕಾಲಾವಕಾಶವಿದ್ದು, ಕಾಯಿ ಹಣ್ಣಾಗುವವರೆಗೆ ಕಾಯಬೇಕಿದೆ ಎಂದು ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಅವರು 15915 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೆಚ್ಡಿಕೆ 96592 ಮತಗಳನ್ನು ಪಡೆದರೆ, ಯೋಗೇಶ್ವರ್ 80677 ಮತಗಳು ಹಾಗೂ ಕಾಂಗ್ರೆಸ್ನ ಗಂಗಾಧರ್ 15374 ಮತಗಳನ್ನು ಪಡೆದಿದ್ದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿರುವ ಡಿ.ಕೆ. ಸುರೇಶ್ ಹೆಸರು, ಚನ್ನಪಟ್ಟಣಕ್ಕೆ ಕೇಳಿ ಬರುತ್ತಿದೆ. ನಾನು ಸ್ಪರ್ಧಿಸುವುದಿಲ್ಲ ಎಂದು ಸದ್ಯ ಅವರು ಹೇಳಿದರೂ, ಕಡೆ ಗಳಿಗೆಯಲ್ಲಿ ತೀರ್ಮಾನ ಬದಲಾಗಬಹುದು. ಕ್ಷೇತ್ರದ ಸ್ಥಿತಿ ಮೈತ್ರಿ ಪರವಾಗಿದ್ದರೂ, ಕಾಂಗ್ರೆಸ್ ಚೇತರಿಕೆಯ ಹಾದಿಯಲ್ಲಿದೆ. ಒಮ್ಮತದ ಮೈತ್ರಿ ಅಭ್ಯರ್ಥಿ ಇಲ್ಲದಿದ್ದರೆ ಕ್ಷೇತ್ರ ಕೈ ತಪ್ಪುವ ಭೀತಿ ಇದ್ದೇ ಇದೆ.
ಬಿಎಸ್ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ
ಹಲವು ಒತ್ತಡಗಳ ನಡುವೆಯೇ ದರ್ಶನ್ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?