Political News: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದುಕೊಂಡಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಮಾಹಿತಿಗಳು ಹರಿದಾಡುತ್ತಿವೆ. ಅಲ್ಲದೆ ಇದೇ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕೆಸರೆರಚಾಟವೂ ನಡೆಯುತ್ತಿದೆ. ಇದರ ನಡುವೆಯೇ ರನ್ಯಾ ರಾವ್ ಕುರಿತು ಅಸಭ್ಯ ಪದ ಬಳಕೆಯ ಆರೋಪದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಕುರಿತು ರನ್ಯಾ ರಾವ್ ಆಪ್ತೆಯಾಗಿರುವ ವೈದ್ಯೆ ಅಕುಲಾ ಅನುರಾಧ ಎನ್ನುವವರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಬಿಎನ್.ಎಸ್. ಸೆಕ್ಷನ್ 79ರ ಅಡಿಯಲ್ಲಿ ದೂರು ನೀಡಿದ್ದಾರೆ.
ಅಲ್ಲದೆ ಮಾರ್ಚ್ 17ರಂದು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಯತ್ನಾಳ್, ರನ್ಯಾ ರಾವ್ ಯಾರ ಜೊತೆ ಸಂಬಂಧ ಹೊಂದಿದ್ದಾರೆ, ಎಲ್ಲಿಂದ ಚಿನ್ನ ತಂದಿದ್ದಾರೆ ಎಂಬ ಮಾಹಿತಿ ಪಡೆದಿದ್ದೇನೆ. ಅಲ್ಲದೇ, ಅವರು ಎಲ್ಲೆಲ್ಲಿ ಚಿನ್ನ ಇರಿಸಿಕೊಂಡು ಬಂದಿದ್ದಾರೆ ಎನ್ನುವ ಮೂಲಕ ಅಶ್ಲೀಲ ಪದ ಬಳಸಿದ್ದಾರೆ. ಇದು ರನ್ಯಾ ರಾವ್ ಗೌರವಕ್ಕೆ ಧಕ್ಕೆ ತಂದಿದೆ. ಕನ್ನಡ, ತಮಿಳು, ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ನಟಿಯ ಗೌರವ ಮತ್ತು ಚಾರಿತ್ರ್ಯಕ್ಕೆ ಹಾನಿ ಆಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಕುಲಾ ಅನುರಾಧ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
14 ಕೆಜಿ ಚಿನ್ನ ಕಳ್ಳಸಾಗಣೆ ಕೇಸ್ನಲ್ಲಿ ಲಾಕ್ ಆಗಿದ್ದ ರನ್ಯಾ ರಾವ್..
ದುಬೈನಿಂದ 12.56 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ರನ್ಯಾ ರಾವ್ ಅವರನ್ನು ಮಾರ್ಚ್ 3, 2025 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬಳಿಕ ಮಾರ್ಚ್ 4 ರಂದು, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಪ್ಸ್ಕೇಲ್ ನಂ. 62, ನಂದ್ವಾನಿ ಮ್ಯಾನ್ಷನ್ ಅಪಾರ್ಟ್ ಮೆಂಟಿನಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆಸಿ ಡಿಆರ್ಐ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತ್ತು. ಪ್ರಕರಣದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ 4.73 ಕೋಟಿ ರೂಪಾಯಿಗಳ ಆಸ್ತಿ ಸೇರಿದೆ. ಈ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ, ಬೆಂಗಳೂರಿನ ಡಿಆರ್ಐನ ಹೆಚ್ಚುವರಿ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ತನ್ನನ್ನು ವಿನಾಕಾರಣ ಬಂಧಿಸಲಾಗಿದೆ ಎಂದಿದ್ದಾರೆ. ಡಿಆರ್ಐ ತಮ್ಮ ಬಂಧನ ಜ್ಞಾಪಕ ಪತ್ರದಲ್ಲಿ, ರನ್ಯಾ ಅವರ ನವೆಂಬರ್ 13, 2024 ಮತ್ತು ಡಿಸೆಂಬರ್ 20, 2024 ರಂದು ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವರ ನಿವಾಸದಿಂದ ಎರಡು ದುಬೈ ಕಸ್ಟಮ್ಸ್ ಘೋಷಣೆಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿತ್ತು.