Political News: 2 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಪೋಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಪೋಲೀಸರಿಂದ ಯಾವುದೇ ಲೋಪ ನಾವು ಸಹಿಸುವುದಿಲ್ಲ. ಕೆಲ ಕೇಸ್ಗಳಲ್ಲಿ ಪೋಲೀಸರದ್ದೇ ತಪ್ಪು ಕಂಡುಬರುತ್ತಿದೆ ಎಂದು ಎಚ್ಚರಿಕೆ ನೀಡಿದ್ದರು. ಅದಾಗ 24 ಗಂಟೆ ಕಳೆಯಲಿಲ್ಲ. ಆಗಲೇ ಡಿಜಿಪಿ ರಾಮ್ಚಂದ್ರ ರಾವ್ ರಾಸಲೀಲೆ ಪ್ರಕರಣದಲ್ಲಿ ಅಮಾನತಾಗಿದ್ದಾರೆ.
ಈ ವಿಷಯದ ಬಗ್ಗೆ ಕಿಡಿಕಾರಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ನಿನ್ನೆಯಷ್ಟೇ ಮುಖ್ಯ ಮಂತ್ರಿಗಳು ಪೊಲೀಸರು ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಳುತ್ತಿರುವ ಬಗ್ಗೆ ಮಾತನಾಡಿದ್ದರು. ಸುಮಾರು 88 ಪ್ರಕರಣಗಳಲ್ಲಿ ಪೊಲೀಸರು ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಕೆಂಡಕಾರಿದ್ದರು. ಇದಾದ 24 ಗಂಟೆಗಳ ಒಳಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯ ಸಮಯದಲ್ಲಿ ಮಾಡಿರುವ ಎನ್ನಲಾದ ಘನ ಕಾರ್ಯವು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳೇ ಈ ರೀತಿ ಕೃತ್ಯದಲ್ಲಿ ಪಾಲ್ಗೊಂಡರೆ ಇನ್ನು ಅವರ ಕೆಳಗೆ ಕೆಲಸ ಮಾಡುವ ಸಿಬ್ಬಂದಿಯ ಮನೋಸ್ಥೈರ್ಯ ಏನೆಂಬುದನ್ನು ಊಹಿಸಿಕೊಳ್ಳಬಹುದು. ತಮ್ಮ ನಡವಳಿಕೆ, ಶಿಸ್ತು, ಬದ್ಧತೆ, ಕಾರ್ಯವೈಖರಿಯ ಮೂಲಕ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದ್ದ ಅಧಿಕಾರಿಗಳೇ ಈ ರೀತಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಲಾಖೆಯನ್ನು ದಕ್ಷವಾಗಿ ಮುನ್ನೆಡೆಸಬೇಕಾಗಿದ್ದ ಸಚಿವರೇ ಜವಾಬ್ದಾರಿಯಿಂದ ನುನುಂಚಿಕೊಂಡು ‘ನನಗೆ ಗೊತ್ತಿಲ್ಲ’ ಎಂಬ ಉತ್ತರ ಕೊಡುತ್ತ ಇರುವುದು ಹಾಸ್ಯಾಸ್ಪದವಾಗಿದೆ ಎಂದು ಯತ್ನಾಳ್ ಕಾಂಗ್ರೆಸ್ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಡ್ರಗ್ಸ್ ಜಾಲದ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ಇರುತ್ತದೆ ಆದರೆ ನಮ್ಮ ಕರ್ನಾಟಕ ಪೊಲೀಸರಿಗೆ ‘ಗೊತ್ತಿಲ್ಲ’. ಬಾಂಗ್ಲಾದೇಶದವರು ಆಧಾರ್ ಕಾರ್ಡ್ ಪಡೆದು ಬ್ಯಾಂಕ್ ಲೋನ್ ಗಿಟ್ಟಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದರೂ ಅವರ ಮೇಲೆ ಕ್ರಮವಿಲ್ಲ. ಕಾಟಾಚಾರಕ್ಕೆ ಸಭೆ ಸೇರಿಸಿ ಕ್ರಮ ಕೈಗೊಳ್ಳುತ್ತೇನೆಂದು ಹೇಳುವ ಮೂಲಕ ರಾಜ್ಯದ ಹಾಗೂ ರಾಷ್ಟ್ರದ ಸುರಕ್ಷತೆಗೆ ಸ್ವತಃ ಗೃಹ ಮಂತ್ರಿಗಳೇ ಧಕ್ಕೆ ತರುತ್ತಿದ್ದಾರೆ. ತಮ್ಮ ಸಂಪುಟದ ‘ಮುಕುಟಮಣಿಗಳಿಗೆ’ ಕೆಲಸ ಮಾಡುವ ಉತ್ಸಾಹ, , ಚಾಣಾಕ್ಷತನ, ಧೈರ್ಯ ಇಲ್ಲದಿದ್ದರೆ ಅವರನ್ನು ಸಂಪುಟದಿಂದ ಕೈ ಬಿಟ್ಟು ಬೇರೆಯವರಿಗೆ ಅವಕಾಶವನ್ನು ಮುಖ್ಯ ಮಂತ್ರಿಗಳು ನೀಡಲಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.




