Monday, June 16, 2025

Latest Posts

ಧರ್ಮ ಕೇಳಿ ಕೊಂದವ್ರನ್ನ‌, ಕರ್ಮ ನೋಡಿ ಹೊಡೆದ್ವಿ : ಮತ್ತೆ ಕೆಣಕಿದ್ರೆ ಮಣ್ಣು ಮುಕ್ಕಿಸ್ತೀವಿ ; ಕಾಶ್ಮೀರ ಕಣಿವೆಯಿಂದಲೇ ಪಾಕ್‌ಗೆ ರಾಜನಾಥ್‌ ಖಡಕ್‌ ವಾರ್ನ್..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಮೂಲಕ ಭಾರತಕ್ಕೆ ದುಖಃವನ್ನುಂಟು ಮಾಡುವ ಪ್ರಯತ್ನಕ್ಕೆ ಕೈ ಹಾಕಲಾಯಿತು. ಭಾರತದ ಸಾಮಾಜಿಕ ಏಕತೆಯನ್ನು ಮುರಿಯುವ ಪ್ರಯತ್ನ ಮಾಡಲಾಯಿತು. ಭಾರತದ ಹಣೆಯ ಮೇಲೆ ದಾಳಿ ಮಾಡಿದರು, ನಾವು ಅವರ ಎದೆಯನ್ನೇ ಬಗೆದೆವು. ಪಾಕಿಸ್ತಾನಕ್ಕೆ ತನ್ನ ಗಾಯಗಳನ್ನು ಗುಣಪಡಿಸುವ ಏಕೈಕ ಮಾರ್ಗವೆಂದರೆ ಭಾರತ ವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವುದನ್ನು ನಿಲ್ಲಿಸುವುದಾಗಿದೆ. ಅಲ್ಲದೆ ತನ್ನ ನೆಲವನ್ನು ಭಾರತದ ವಿರುದ್ಧ ಬಳಸಲು ಬಿಡದಿರುವುದು. ಒಂದು ವೇಳೆ ಮತ್ತೆ ಭಾರತವನ್ನು ಕೆಣಕಿದರೆ ಮಣ್ಣು ಮುಕ್ಕಿಸುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇರ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿಂದು ಭಾರತೀಯ ಸಶಸ್ತ್ರ ಪಡೆಗಳ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ವೀರ ಯೋಧರ ಅತ್ಯುನ್ನತ ತ್ಯಾಗಕ್ಕೆ ನಾನು ಶಿರಬಾಗುತ್ತೇನೆ. ಅವರ ಸ್ಮರಣೆಯನ್ನು ನಾನು ಗೌರವಿಸುತ್ತೇನೆ. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರಿಗೂ ನಾನು ಗೌರವ ಸಲ್ಲಿಸುತ್ತೇನೆ. ಗಾಯಗೊಂಡ ಸೈನಿಕರ ಶೌರ್ಯಕ್ಕೂ ನಾನು ನಮಸ್ಕರಿಸುತ್ತೇನೆ, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಒಬ್ಬ ಪೋಸ್ಟ್‌ಮ್ಯಾನ್ ಆಗಿ ದೇಶವಾಸಿಗಳಿಂದ ಸಂದೇಶ ತಂದಿದ್ದೇನೆ..

ಇಂದು ನಾನು ಇಲ್ಲಿಗೆ ರಕ್ಷಣಾ ಸಚಿವನಾಗಿಯೂ, ಸಂದೇಶ ಹೊತ್ತವನಾಗಿಯೂ ಬಂದಿದ್ದೇನೆ. ಇಡೀ ದೇಶದ ಶುಭ ಹಾರೈಕೆಗಳು, ಪ್ರಾರ್ಥನೆಗಳು ಮತ್ತು ಕೃತಜ್ಞತೆಯ ಜೊತೆಗೆ ನಾನು ನಿಮ್ಮ ನಡುವೆ ಬಂದಿದ್ದೇನೆ. ಒಂದು ರೀತಿಯಲ್ಲಿ, ನಾನು ನಿಮ್ಮ ನಡುವೆ ಒಬ್ಬ ಪೋಸ್ಟ್‌ಮ್ಯಾನ್ ಆಗಿ ಬಂದು ದೇಶವಾಸಿಗಳಿಂದ ಸಂದೇಶವನ್ನು ತಂದಿದ್ದೇನೆ. ನಮ್ಮ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂಬುವುದು ಇಡೀ ದೇಶದ ಜನರ ಸಂದೇಶವಾಗಿದೆ. ಭಯೋತ್ಪಾದನೆಯ ವಿರುದ್ಧ ನಮ್ಮ ಸೇನೆ ಕೈಗೊಂಡ ಆಪರೇಷನ್ ಸಿಂಧೂರ್ ಕೇವಲ ಒಂದು ಕಾರ್ಯಾಚರಣೆಯ ಹೆಸರಲ್ಲ, ಬದಲಿಗೆ ಒಂದು ಬದ್ಧತೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಭಾರತವು ಕೇವಲ ರಕ್ಷಣೆಯನ್ನಷ್ಟೇ ಮಾಡುವುದಿಲ್ಲ ಎಂದು ತೋರಿಸಿಕೊಟ್ಟ ಬದ್ಧತೆ. ಸಮಯ ಬಂದಾಗ, ನಾವು ಯಾವ ರೀತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದು ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಭಾರತವು ಕಳೆದ 35ರಿಂದ 40 ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಭಯೋತ್ಪಾದನೆಯ ವಿರುದ್ಧ ನಾವು ಯಾವುದೇ ಹಂತಕ್ಕಾದರೂ ಹೋಗಬಹುದು ಎಂಬುದನ್ನು ಇಂದು ಇಡೀ ಜಗತ್ತಿಗೆ ತೋರಿಸಿಕೊಡಲಾಗಿದೆ. ಧರ್ಮ ಕೇಳಿ ಕೊಂದವರನ್ನು ಕರ್ಮ ನೋಡಿ ಹೊಡೆಯಲಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.

ನಿಮ್ಮ ಪರಾಕ್ರಮವನ್ನ ಶತ್ರುಗಳು ಎಂದೆಂದೂ ಮರೆಯಲು ಸಾಧ್ಯವಿಲ್ಲ..

ಈ ಕಾರ್ಯಾಚರಣೆಯು ಪ್ರತಿಯೊಬ್ಬ ಸೈನಿಕನ ಕಣ್ಣಲ್ಲಿ ಕಂಡ ಕನಸಾಗಿತ್ತು, ನಾವು ಪ್ರತಿಯೊಂದು ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚುತ್ತೇವೆ, ಅದು ಕಣಿವೆಗಳಲ್ಲಿ ಅಡಗಿರಲಿ ಅಥವಾ ಬಂಕರ್‌ಗಳಲ್ಲಿರಲಿ ಬಿಡುವುದಿಲ್ಲ. ಶತ್ರುಗಳ ಎದೆಯನ್ನು ಬಗೆದಾದರೂ ಸರಿ ಆ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ ನಂತರವೇ ನಾವು ಹಿಂತಿರುಗುತ್ತೇವೆ ಎಂದು ಭಾರತೀಯ ಸೇನೆಯ ಪರಾಕ್ರಮವನ್ನು ಕೊಂಡಾಡಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ನಿಮ್ಮೊಂದಿಗೆ ಇರಲು ನನಗೆ ಹೆಮ್ಮೆಯಾಗುತ್ತಿದೆ. ಆಪರೇಷನ್‌ ಸಿಂದೂರ್‌ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದಲ್ಲಿ ನೀವು ಮಾಡಿದ ಕಾರ್ಯದ ಬಗ್ಗೆ ಇಡೀ ದೇಶ ಗರ್ವ ಪಡುತ್ತಿದೆ ಎಂದಿದ್ದಾರೆ

ನಾನು ರಕ್ಷಣಾ ಸಚಿವನಾಗುವ ಮೊದಲು ಈ ದೇಶದ ನಾಗರಿಕ. ಕೇವಲ ಒಬ್ಬ ರಕ್ಷಣಾ ಸಚಿವನಾಗಿ ಮಾತ್ರವಲ್ಲದೆ ಒಬ್ಬ ಭಾರತೀಯ ಪ್ರಜೆಯಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಶತ್ರುಗಳನ್ನು ನಿರ್ನಾಮಗೊಳಿಸುವ ನಿಮ್ಮ ಶಕ್ತಿಯನ್ನು ಅನುಭವಿಸಲು ಬಂದಿದ್ದೇನೆ. ಗಡಿಯಾಚೆಗಿನ ಪಾಕಿಸ್ತಾನದ ಪೋಸ್ಟ್‌ಗಳು ಮತ್ತು ಬಂಕರ್‌ಗಳನ್ನು ನೀವು ಧ್ವಂಸ ಮಾಡಿದ ರೀತಿಯನ್ನು ಶತ್ರುಗಳು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಪಾಕ್ ಉಗ್ರರು ಇನ್ನು ಮುಂದೆ ಎಲ್ಲಿಯೂ ಸುರಕ್ಷಿತವಾಗಿರಲ್ಲ..

ಉಗ್ರರ ದಾಳಿ ಬಳಿಕ ಜನರು ಸಾಮಾನ್ಯವಾಗಿ ಆಕ್ರೋಶದಲ್ಲಿದ್ದರು. ಆದರೆ, ನಿಮ್ಮ ಉತ್ಸಾಹ, ಅವರನ್ನು ತಿಳಿಗೊಳ್ಳುವಂತೆ ಕಾಯ್ದುಕೊಂಡಿತ್ತು. ಬುದ್ಧಿವಂತಿಕೆಯಿಂದ ಶತ್ರುಗಳ ಅಡಗುತಾಣಗಳನ್ನು ನಾಶಮಾಡಿದ್ದೀರಿ ನಿಮ್ಮ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಶ್ಲಾಘಿಸಿದ್ದಾರೆ. ಪಾಕಿಸ್ತಾನದ ಉಗ್ರರು ಇನ್ನು ಮುಂದೆ ಎಲ್ಲಿಯೂ ಸುರಕ್ಷಿತವಾಗಿರಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಆ ಉಗ್ರರು ಈಗ ಭಾರತೀಯ ಸಶಸ್ತ್ರ ಪಡೆಗಳ ಕಣ್ಣಿಗೆ ಬಿದ್ದಿದ್ದಾರೆ. ನಮ್ಮ ಪಡೆಗಳು ದಿಟ್ಟವಾಗಿಯೇ ಕೆಲಸ ಮಾಡುತ್ತಿವೆ ಎಂದು ಜಗತ್ತಿಗೆ ತಿಳಿದಿದೆ. ಅಲ್ಲದೆ ನಮ್ಮ ಸೇನೆಯು ದಾಳಿ ಮಾಡುತ್ತದೆ, ಆದರೆ ಅದರಿಂದಾದ ಹಾನಿಯನ್ನು ಎಣಿಸುವ ಜವಾಬ್ದಾರಿಯನ್ನು ನಾವು ಶತ್ರುಗಳಿಗೆ ಬಿಡುತ್ತೇವೆ ಎಂದು ಸಿಂಗ್‌ ಪಾಕಿಸ್ತಾನದ ವಿರುದ್ಧ ಅಬ್ಬರಿಸಿದ್ದಾರೆ.

ಅಟಲ್‌ ಜೀ ಮುಂದೆ ಪಾಕ್‌ ಥಂಡಾ ಹೊಡೆದಿತ್ತು..

ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆಯೇ, ಇದೇ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮುಂದೆ ಥಂಡಾ ಹೊಡೆದು ತನ್ನ ನೆಲದಲ್ಲಿ ಇನ್ನು ಮುಂದೆ ಭಯೋತ್ಪಾದನೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿತ್ತು. ಆದರೆ, ಪಾಕಿಸ್ತಾನ ಭಾರತಕ್ಕೆ ದ್ರೋಹ ಬಗೆದಿದೆ. ಇಂದಿಗೂ ದ್ರೋಹವನ್ನು ಮಾಡುತ್ತಲೇ ಬರುತ್ತಿದೆ. ಈಗ ಇದಕ್ಕಾಗಿ ಅವರು ಭಾರೀ ಬೆಲೆ ತೆರಬೇಕಾಗಿದೆ. ಈ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇರುತ್ತದೆ ಎಂದು ಪಾಕಿಸ್ತಾನದ ವಿರುದ್ಧ ರಾಜನಾಥ್‌ ಸಿಂಗ್‌ ವಾಗ್ದಾಳಿ ನಡೆಸಿದ್ದಾರೆ.

ಈಗಿರುವ ಇರುವ ವ್ಯವಸ್ಥೆಯು ಹಿಂದೆಂದೂ ಇರಲಿಲ್ಲ..!

ನಮ್ಮ ಸೇನಾಪಡೆಗಳು ಯಾವುದೇ ಪರಿಸ್ಥಿತಿ ಎದುರಾದರೂ ಎದುರಿಸಲು ಸನ್ನದ್ದವಾಗಿವೆ. ಇದಕ್ಕಾಗಿ ನಾವು ನಮ್ಮ ಸೇನೆಗಳಿಗೆ ವಿಶ್ವ ದರ್ಜೆಯ ಮತ್ತು ಉತ್ತಮ ಗುಣಮಟ್ಟದ ಉಪಕರಣಗಳನ್ನು ಒದಗಿಸುತ್ತಿದ್ದೇವೆ. ಇಂದು, ಆಧುನಿಕ ರೈಫಲ್‌ಗಳು, ಕ್ಷಿಪಣಿ ರಕ್ಷಣಾ ಗುರಾಣಿಗಳು ಮತ್ತು ಡ್ರೋನ್‌ಗಳಂತಹ ಅನೇಕ ಹೊಸ ಪೀಳಿಗೆಯ ಉಪಕರಣಗಳು ಭಾರತದಲ್ಲಿ ವೇಗವಾಗಿ ತಯಾರಿಸಲ್ಪಡುತ್ತಿವೆ. ಇದಲ್ಲದೆ, ಗಡಿ ಪ್ರದೇಶಗಳಲ್ಲಿ ನಾವು ಮಾಡಿದ ಕೆಲಸವನ್ನು ನೀವೆಲ್ಲರೂ ನೋಡುತ್ತಿರಬೇಕು. ಎಲ್‌ಎಸಿ ಮತ್ತು ಎಲ್‌ಒಸಿ ಯಲ್ಲಿ ಈಗಿರುವ ಇರುವ ವ್ಯವಸ್ಥೆಯು ಹಿಂದೆಂದೂ ಇರಲಿಲ್ಲ. ನಮ್ಮ ಸೇನಾ ಪಡೆಗಳು ಮತ್ತು ಸೈನಿಕರನ್ನು ದೇಶಾದ್ಯಂತ ಗೌರವದಿಂದ ನೋಡಲಾಗುತ್ತದೆ. ಸಶಸ್ತ್ರ ಪಡೆಗಳಿಗೆ ಗೌರವ ನೀಡುವುದರ ಜೊತೆಗೆ, ಅವರಿಗೆ ಅಗತ್ಯವಿರುವ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಒದಗಿಸುವ ರಾಷ್ಟ್ರವೇ ಬಲಿಷ್ಠ ರಾಷ್ಟ್ರ. ಇಂದು ಸರ್ಕಾರ ನಮ್ಮ ಪಡೆಗಳಿಗಾಗಿ ಇದನ್ನೆಲ್ಲಾ ಮಾಡುತ್ತಿದೆ ಎಂಬುದು ನನಗೆ ಹೆಮ್ಮೆ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಟೆರರಿಸಂ ಆಂಡ್ ಟಾಕ್‌ ಒಟ್ಟಿಗೆ ನಡೆಯುವುದಿಲ್ಲ..

ಇನ್ನು ಮುಂದೆ ಭಾರತದ ನೆಲದಲ್ಲಿ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ. ಗಡಿಯುದ್ದಕ್ಕೂ ಯಾವುದೇ ಅನುಚಿತ ಕ್ರಮ ಕೈಗೊಳ್ಳಬಾರದು ಎಂಬ ಅಂಶದ ಬಗ್ಗೆ ಎರಡೂ ದೇಶಗಳ ನಡುವೆ ಇದೀಗ ರೂಪುಗೊಂಡಿರುವ ತಿಳುವಳಿಕೆಯಾಗಿದೆ. ಹೀಗೆ ಮಾಡಿದರೆ ವಿಷಯ ತುಂಬಾ ದೊಡ್ಡದಾಗುತ್ತದೆ, ಈಗಾಗಲೇ ನಮ್ಮ ಪ್ರಧಾನಿ ಕೂಡ ಹೇಳಿದ್ದಾರೆ, ಅದು ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯುವುದಿಲ್ಲ. ಮಾತುಕತೆ ನಡೆದರೆ ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪಾಕಿಸ್ತಾನಕ್ಕೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ಜಗತ್ತಿಗೆ ರಾಜನಾಥ್ ಸಿಂಗ್ ಬಲವಾದ ಸಂದೇಶ..

ಇಂದು, ಶ್ರೀನಗರದ ಮಣ್ಣಿನಿಂದ, ನಾನು ಇಡೀ ಜಗತ್ತಿನ ನಾಯಕರಿಗೆ ಒಂದು ಪ್ರಶ್ನಿಸುತ್ತೇನೆ, ಪಾಕಿಸ್ತಾನದಂತಹ ಬೇಜವಾಬ್ದಾರಿ ಮತ್ತು ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವಾಗಿವೆಯೇ? ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಇಂತಹ ದುಷ್ಟ ದೇಶದಲ್ಲಿ ಪರಮಾಣು ಶಸ್ತಾಸ್ತ್ರಗಳಿರುವುದು ಅಂತರಾಷ್ಟ್ರೀಯ ಸಮುದಾಯ ಗಮನಿಸಬೇಕಿದೆ. ಪರಮಾಣು ಬ್ಲ್ಯಾಕ್ಮೇಲ್‌ನಂತಹ ಬೆದರಿಕೆಗಳಿಗೆ ಭಾರತ ಯಾವತ್ತೂ ಹೆದರುವುದಿಲ್ಲ, ಈ ಬೆದರಿಕೆಯ ತಂತ್ರಗಳು ನಮ್ಮೆದುರು ನಡೆಯುವುದಿಲ್ಲ ಎನ್ನುವ ಮೂಲಕ ಅವರು ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ.

- Advertisement -

Latest Posts

Don't Miss