Political News: ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಿಗಳ ಪೋಸ್ಟಿಂಗ್ ಗೆ ರೇಟ್ ಫಿಕ್ಸ್ ಮಾಡಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ವಿದೇಶಿ ಪ್ರವಾಸದಲ್ಲಿರುವ ಸಚಿವರೊಬ್ಬರ ಇಲಾಖೆಗೆ ವರ್ಗ ಆಗಿರುವ ಹಿರಿಯ ಅಧಿಕಾರಿ ಒಬ್ಬರಿಗೆ ಅಧಿಕಾರ ವಹಿಸಿಕೊಳ್ಳಲು ಸ್ವತಃ ಸಚಿವರೇ ಅವಕಾಶ ನೀಡಿಲ್ಲ, ಯಾಕೆ? ಎಂದು ನೇರವಾಗಿ ಪ್ರಶ್ನಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದಾಗ ಎದುರಾದ ಪ್ರಶ್ನೆಗೆ ಉತ್ತರ ನೀಡಿದ ಅವರು; ವಿದೇಶಿ ಪ್ರವಾಸದಲ್ಲಿರುವ ಆ ಸಚಿವರು ಯಾರು? ಆ ಸಚಿವರ ಗಮನಕ್ಕೆ ಬಾರದೆಯೇ ಅವರ ಇಲಾಖೆಗೆ ಪೋಸ್ಟಿಂಗ್ ಅದ ಆ ಅಧಿಕಾರಿ ಯಾರು? ಎನ್ನುವುದನ್ನು ಬಹಿರಂಗ ಮಾಡಲಿ. ಮೊದಲು ಇವರು ನನ್ನ ಬಗ್ಗೆ ಬಗ್ಗೆ ಲಘುವಾಗಿ ಮಾತಾನಾಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು.
ಸಿಎಂ ಅವರೇ ಆ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ಮಂತ್ರಿ ವಿದೇಶದಲ್ಲಿ ಇದ್ದಾರೆ. ಸಿಎಂ ಆದೇಶ ಮಾಡಿದ್ದರೂ, ನಾನು ಬರುವವರೆಗೂ ಅಧಿಕಾರ ತೆಗೆದುಕೊಳ್ಳಬೇಡಿ ಅಂತ ತಾಕೀತು ಮಾಡಿದ್ದಾರಂತೆ. ಹಾಗಾದರೆ ಎಷ್ಟು ಹಣ ಕೊಟ್ಟು ಬಂದರು ಈ ಅಧಿಕಾರಿ? ಈಗ ‘ವರ್ಗಾವಣೆ ಜ್ಯೋತಿ’ ಕಾರ್ಯಕ್ರಮ ನಡೆಯುತ್ತಿದೆ. ಈ ದಂಧೆ ಬಗ್ಗೆ ಏನು ಹೇಳ್ತಾರೆ ಇವರು. ಎಸಿಬಿ ದಾಳಿಗೆ ಒಳಗಾಗಿದ್ದ ಇನ್ನೊಬ್ಬ ಅಧಿಕಾರಿಯನ್ನು ಸಿಎಂ ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.
ಬಿಜೆಪಿ ಸರಕಾರದ ಬಗ್ಗೆ 40 ಪರ್ಸೆಂಟ್ ಬಗ್ಗೆ ಮಾತಾಡಿದ್ದರು ಇವರು. ಹಾದಿಬೀದಿಯಲ್ಲಿ ಜಾಗಟೆ ಹೊಡೆದುಕೊಂಡು ಪ್ರಚಾರ ಮಾಡಿದರು. ಈಗ ನೋಡಿದರ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ಶುರು ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಎಂದು ಪುಂಗಿ ಬಿಟ್ಟ ಇವರು ಆ ಆರೋಪವನ್ನು ಸಾಬೀತು ಮಾಡಿದ್ರ? ಎಂದು ಅವರು ಪ್ರಶ್ನಿಸಿದರು.
ರಾಜಕೀಯ ನಿವೃತ್ತಿಯ ಸವಾಲು:
ನಾನು ಮುಖ್ಯಮಂತ್ರಿ ಆಗಿದ್ದಾಗ ಹಣ ಪಡೆದು ಪೋಸ್ತಿಗ್ ಮಾಡಿದ್ದೆ ಎನ್ನುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೆನೆ ಎಂದ ಅವರು; ಈಗ ಅಧಿಕಾರಿಗಳ ಪೋಸ್ಟಿಂಗ್ ಗೆ ಯಾರು? ಎಲ್ಲಿ ಕೂತು ರೇಟ್ ಫಿಕ್ಸ್ ಮಾಡುತ್ತಿದ್ದಾರೆ? ಎನ್ನುವುದನ್ನು ಅಧಿಕಾರಿಗಳೇ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಹಾರ ನಡೆಸಿದರು.
ಕಾಂಗ್ರೆಸ್ ಜತೆ ನಾನು ಸರ್ಕಾರ ಮಾಡಿದ್ದಾಗ ಕಾಂಗ್ರೆಸ್ ನವರು ಹೇಳಿದ ಮೇಲೆ ವರ್ಗಾವಣೆ ಮಾಡಬೇಕು ಎನ್ನುವ ಪರಿಸ್ಥಿತಿ ಇತ್ತು. 2018ರಲ್ಲಿ ಸಿಎಂ ಆಗಿದ್ದಾಗ ಅಮೆರಿಕಕ್ಕೆ ಹೋಗಿದ್ದೆ. ಆಗ ಶಾಸಕ ಭೈರತಿ ಬಸವರಾಜ್ ಮುನಿಸಿಕೊಂಡು ಬಿಜೆಪಿಗೆ ಹೋದರು. ನನ್ನ ಸಂಪುಟದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ಸೋಪ್ ಅಂಡ್ ಡಿಟರ್ಜಂಟ್ ಕಾರ್ಖಾನೆಗೆ ಅಧಿಕಾರಿ ಒಬ್ಬರನ್ನು ವರ್ಗ ಮಾಡುವ ವಿಷಯದಲ್ಲಿ ನಡೆದ ಗಲಾಟೆ ನನ್ನ ಸರಕಾರವನ್ನು ಬಲಿ ತೆಗೆದುಕೊಂಡಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡುತ್ತಿದೆ’
‘ಗ್ಯಾರಂಟಿಗಳ ಆಸೆ ತೋರಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ, ಮಸೀದಿಗಳ ಸೌಂಡ್ ಹೆಚ್ಚಾಗಿದೆ’
ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಇಂದಿನಿಂದ ಕಾನೂನು ಸಹಾಯವಾಣಿ- ತೇಜಸ್ವಿ ಸೂರ್ಯ