ಹುಬ್ಬಳ್ಳಿ: ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರಿಗೂ ಪಕ್ಷದಿಂದ ಸಾಕಷ್ಟು ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಯಾರೋ ಬರೆದುಕೊಟ್ಟಿರುವ ಪತ್ರವನ್ನು ಬಹಿರಂಗ ಪಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಬಿಜೆಪಿ ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನನಗೆ ಆಗಿರುವ ಅನ್ಯಾಯದ ಬಗ್ಗೆ ನಿನ್ನೆಯಷ್ಟೇ ನಾನು ಮಾತನಾಡಿದ್ದೇನೆ. ಅಲ್ಲದೇ ಈ ಬಗ್ಗೆ ಬಿಜೆಪಿ ವರಿಷ್ಠರು ನನ್ನ ಜೊತೆಗೆ ಮಾತನಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಆದರೂ ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದರು.
ಕುಂದಗೋಳಮಠ ಅವರಿಗೂ ಸಾಕಷ್ಟು ಅನ್ಯಾಯವಾಗಿದೆ. ಆದ್ದರಿಂದ ಸ್ವಂತ ಬುದ್ಧಿಯಿಂದ ಅವರು ಪತ್ರವನ್ನು ಬರೆದಿಲ್ಲ. ಯಾರೋ ಬರೆದು ಅವರಿಗೆ ಕೊಟ್ಟಿದ್ದಾರೆ. ಅವರು ಕೂಡ ನನ್ನ ಜೊತೆಗೆ ಮಾತನಾಡಿ ತಮಗೆ ಆಗಿರುವ ಅನ್ಯಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಇನ್ನೂ ಹದಿನೈದು ದಿನಗಳ ಕಾಲ ಕಾದು ನೋಡುತ್ತೇನೆ. ಆಮೇಲೆ ಮತ್ತೊಂದು ತೀರ್ಮಾನದ ಬಗ್ಗೆ ಬಹಿರಂಗ ಪಡಿಸುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ ಅವರು, ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಕುಂದಗೋಳಮಠ ಅವರಿಗೆ ಹಾಗೂ ನನಗೂ ಸಾಕಷ್ಟು ಅನ್ಯಾಯವಾಗಿದೆ ಈ ಬಗ್ಗೆ ವರಿಷ್ಠರು ಗಮನ ಹರಿಸುವ ಮೂಲಕ ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಪ್ರದೀಪ್ ಶೆಟ್ಟರ್ ಹೇಳಿದರು.