ಹಾಸನ : ಹಾಸನದಲ್ಲಿ ಫುಡ್ ಕೋರ್ಟ್ ಉದ್ಘಾಟನೆ ಮಾಡಿದ ಶಾಸಕ ಪ್ರೀತಂಗೌಡ, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಯೋಜನೆಗಳ ಉದ್ಘಾಟನೆ ಶಂಕುಸ್ಥಾಪನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವುದು ಕಾಮಗಾರಿ ಮುಗಿದಿದೆ ಅದರ ಉದ್ಘಾಟನೆ ಆಗಿದೆ. ಕಾಮಗಾರಿ ಆರಂಭ ಆಗಿರುವ ಯೋಜನೆ ಶಂಕುಸ್ಥಾಪನೆ ಆಗಿದೆ. ಏರ್ ಪೋರ್ಟ್ ಗುದ್ದಲಿ ಪೂಜೆ ಆಗಿದೆ, ಆಸ್ಪತ್ರೆ ಹಾಗೂ ಕೆಲ ಕಟ್ಟಡಗಳ ಉದ್ಘಾಟನೆ ಆಗಿದೆ. ತರಾತುರಿಯಲ್ಲಿ ಯಾವುದನ್ನು ಮಾಡಿಲ್ಲ ಎಂದಿದ್ದಾರೆ.
ಕಾಮಗಾರಿಯೇ ಆಗದೆ ಉದ್ಘಾಟನೆ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಮತ್ತು ಅವರು ಉದ್ಘಾಟನೆ ಶಂಕುಸ್ಥಾಪನೆ ಮಾಡಲಿ ಅವರ ಕಲ್ಲನ್ನು ನದಿಗೆ ಎಸೆಯುತ್ತೇವೆ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ ಪ್ರೀತಂ ಪರೋಕ್ಷ ತಿರುಗೇಟು ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಮಾಡಿದ್ದನ್ನ ನಾನು, ನಾನು ಮಾಡಿದ್ದನ್ನ ಅವರು ನದಿಗೆ ಎಸೆಯಬಾರದು. ಅದು ಸಭ್ಯ ವರ್ತನೆ ಅಲ್ಲ. ಬಹುಶಃ ರೇವಣ್ಣ ಅವರು ಚುನಾವಣೆ ಒತ್ತಡ ರಾಜಕೀಯ ಒತ್ತಡದಿಂದ ಮಾತನಾಡಿರಬಹುದು. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. ಬಹಳ ಹಿರಿಯರಿದ್ದಾರೆ. ಮೂರು ಬಾರಿ, ನಾಲ್ಕುಬಾರಿ ಸಚಿವರು, ಐದುಬಾರಿ ಶಾಸಕರಾಗಿರುವವರು. ಯಾವುದೊ ಒತ್ತಡದಲ್ಲಿ ಮಾತಾಡಿರಬಹುದು. ಬಾಯಿತಪ್ಪಿ ಹಾಗೆ ಮಾತಾಡಿರಬಹುದು. ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳೋದು ಬೇಡ. ಹಿರಿಯರಿದ್ದಾರೆ ಅವರ ಬಗ್ಗೆ ಗೌರವ ಇದೆ ಎಂದು ಪ್ರೀತಂಗೌಡ ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಶಂಕುಸ್ಥಾಪನೆ ಮಾಡಿದ ವಿಮಾನ ನಿಲ್ದಾಣ ಯೋಜನೆಗೆ ಮತ್ತೆ ಅಡಿಗಲ್ಲು ಹಾಕಿರುವ ವಿಚಾರದ ಬಗ್ಗೆ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರೀತಂಗೌಡ ಸ್ಪಷ್ಟನೆ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಅನುದಾನ ಕೊಟ್ಟಿದ್ದು ಯಡಿಯೂರಪ್ಪ ಅವರು. ಹಾಸನಕ್ಕೆ ಬಂದ ವೇಳೆಯೇ ಇನ್ನೂರು ಕೋಟಿ ಅನುದಾನ ಕೊಡೊದಾಗಿ ಹೇಳಿದ್ರು. ಅದರಂತೆ ಹಣ ಕೊಟ್ಟು ಟೆಂಡರ್ ಕರೆದು ಕೆಲಸ ಆರಂಭ ಆಗಿ ಈಗ ಗುದ್ದಲಿ ಪೂಜೆ ಆಗಿದೆ. ಹಣ ಯಾವತ್ತು ಬಿಡುಗಡೆ ಆಗಿದೆ, ಯಾವತ್ತು ಟೆಂಡರ್ ಕರೆಯಲಾಗಿದೆ, ಯಾವಾಗ ಕಾಮಗಾರಿ ಆರಂಭವಾಗಿದೆ ಎಂದು ಪರಿಶೀಲಿಸಲಿ ಎಂದು ಪ್ರೀತಂಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಉರಿಗೌಡ ನಂಜೇಗೌಡ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಪ್ರೀತಂಗೌಡ, ನೀವು ಪ್ರೀತಂಗೌಡ ಬಗ್ಗೆ ಕೇಳಿದ್ರೆ ಹೇಳ್ತಿನಿ, ಶಿವಲಿಂಗೇಗೌಡ ಬಗ್ಗೆ ಕೇಳಿದ್ರೆ ಅರಸೀಕೆರೆ ಅವರು, ಪಕ್ಕದ ಕ್ಷೇತ್ರದವರು ಎಂದು ಅವರ ಬಗ್ಗೆ ಹೇಳಬಹುದು. ಬಾಕಿ ವಿಚಾರ ರಾಜ್ಯದ ನಾಯಕರು ಹಾಗೂ ಪಕ್ಷ ಮಾತಾಡುತ್ತೆ. ನಾನೊಬ್ಬ ಸಾಮಾನ್ಯ ಶಾಸಕ. ನನಗೆ ಕೊಟ್ಟಿರುವ ಜವಾಬ್ದಾರಿ ಹಾಸನ ವಿಧಾನಸಭಾ ಕ್ಷೇತ್ರ. ಈ ವಿಚಾರದ ಬಗ್ಗೆ ಮಾತನಾಡಲು ನಾನು ಬಹಳ ಚಿಕ್ಕ ವ್ಯಕ್ತಿ ಎಂದು ಪ್ರೀತಂಗೌಡ ಹೇಳಿದ್ದಾರೆ.
ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕಾಲು ಜಾರಿ ಬೀಳುತ್ತಿದ್ದವನನ್ನ ಕಾಪಾಡಿದ RPF : ವೀಡಿಯೋ ವೈರಲ್..
‘ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬರಲು ಕಾರಣ ಇಂತಹ ಸುಳ್ಳು ಭರವಸೆಗಳು..’