ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮೌನ ಮುರಿದಿದ್ದಾರೆ. ಹೌದು, ಈ ಹಿಂದೆ ದರ್ಶನ್ ಅವರು ಉಮಾಪತಿ ಶ್ರೀನಿವಾಸ್ ಅವರನ್ನು ತುಂಬಿದ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದ ವಿಷಯ ಎಲ್ಲರಿಗೂ ಗೊತ್ತು. ಆ ಬಗ್ಗೆ ಉಮಾಪತಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ದರ್ಶನ್ ವಿರುದ್ಧ ಸಿಡಿದೆದ್ದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಉಮಾಪತಿ ತಮ್ಮ ಮಾತೊಂದನ್ನು ಹರಿಬಿಟ್ಟಿದ್ದಾರೆ.
ಉಮಾಪತಿ ಹೇಳಿದ್ದಿಷ್ಟು.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಮನುಷ್ಯ ಅಂದಮೇಲೆ ಕೋಪ ಸಹಜ. ಆದರೆ, ಎಲ್ಲಾ ವಿಷಯಕ್ಕೂ ಕೋಪ ಮಾಡಿಕೊಂಡು ಸಿಟ್ಟನ್ನು ಕೈಗೆ ಕೊಡಬಾರದು. ತಾಳ್ಮೆಯಿಂದ ಇರಬೇಕು. ಇನ್ನೊಂದು ವಿಷಯ ಹೇಳುವುದಾದರೆ, ನನಗೂ ಕೋಪ ಜಾಸ್ತಿ. ನಮ್ಮ ತಂದೆಯವರು ಕೋಡಿಮಠದ ಶ್ರೀಗಳಿಗೆ ನಡೆದುಕೊಳ್ಳುತ್ತಿದ್ದರು. ಒಮ್ಮೆ ನಾನೂ ತಂದೆಯವರ ಜೊತೆಗೆ ಹೋಗಿದ್ದೆ.ಆಗ ನಮ್ಮ ತಂದೆಯವರು, ಮಗನಿಗೆ ಕೋಪ ಜಾಸ್ತಿ. ಯಾರು ಏನೇ ಮಾತಾಡಿದರೂ ಬೇಗ ಸಿಟ್ಟು ಮಾಡಿಕೊಳ್ಳುತ್ತಾನೆ. ತಿರುಗಿ ಮಾತಾಡ್ತಾನೆ. ನೀವೊಮ್ಮೆ ಅವನಿಗೆ ಬುದ್ಧಿ ಹೇಳಿ ಅಂದಿದ್ದರು.
ಆಗ ಕೋಡಿಮಠದ ಶ್ರೀಗಳು, ಹಾಗೆಲ್ಲ ಕೋಪ ಮಾಡಿಕೊಳ್ಳಬಾರದು. ಯಾರಾದರು ಬೈದರೆ ಬೈಯಿಸಿಕೋ, ನಿಂದಿಸಿದರೆ, ನಿಂದಿಸಲಿ ಅಂತ ಸುಮ್ಮನಿರು. ಆದರೆ, ಸಮಯ ಬಂದಾಗ ಮಾತ್ರ ಮಾತಾಡು ಅಂದಿದ್ದರಂತೆ. ಉಮಾಪತಿ ಶ್ರೀಗಳ ಮಾತನ್ನು ಚಾಚುತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ದರ್ಶನ್ ವಿಚಾರದಲ್ಲೂ ಅವರು ಮೌನವಾಗಿದ್ದರು. ಈಗ ಮೌನ ಮುರಿದು ಮಾತಾಡಿದ್ದಾರೆ. ದರ್ಶನ್ ವಿರುದ್ಧ ಧ್ವನಿ ಎತ್ತುವ ಮೂಲಕ ಡಿಚ್ಚಿ ಕೊಟ್ಟಿದ್ದಾರೆ. ಚಟ ಚಟ್ಟಕ್ಕೆ ಏರಿಸುವಂತಿರಬಾರದು. ಅವರು ಮಾಡಿದ ಕರ್ಮ ಅನುಭವಿಸಬೇಕು. ನಾನು ದರ್ಶನ್ ಕುರಿತಾಗಿಯೇ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿಲ್ಲ. ಅದೇನೆ ಇದ್ದರು, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ ಉಮಾಪತಿ.