Political News: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಭೂ ಕಬಳಿಕೆಯ ಆರೋಪ ಮಾಡಿದ್ದರು. ಅಲ್ಲದೆ ಈ ವಿಚಾರ ಸದನದಲ್ಲಿ ಗದ್ದಲಕ್ಕೂ ಕಾರಣವಾಗಿತ್ತು. ಸ್ಫೀಕರ್ ನಿರ್ದೇಶನದ ಮೇರೆಗೆ ಠಾಕೂರ್ ಖರ್ಗೆ ಹೆಸರನ್ನು ವಾಪಸ್ ಪಡೆದಿದ್ದರು.
ಸಾಬೀತು ಪಡಿಸಲಿ.. ಖರ್ಗೆ ಸವಾಲು..
ಆದರೆ ಈ ಆರೋಪದಿಂದ ಕೆರಳಿ ಕೆಂಡವಾಗಿರುವ ಮಲ್ಲಿಕಾರ್ಜುನ ಖರ್ಗೆ ತಮ್ಮ ಮೇಲಿನ ಆರೋಪವನ್ನು ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆ, ಇಲ್ಲವಾದರೆ ತಮ್ಮ ಸ್ಥಾನಕ್ಕೆ ಅನುರಾಗ್ ಠಾಕೂರ್ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದಾರೆ. ರಾಜ್ಯಸಭೆಯಲ್ಲಿಂದು ವಕ್ಫ್ ಮಸೂದೆ ಚರ್ಚೆಯ ಶೂನ್ಯ ವೇಳೆಯಲ್ಲಿ ಮಾತನಾಡಿರುವ ಅವರು, ಲೋಕಸಭೆಯಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದ್ದು, ಇದರಿಂದ ನನ್ನ ಗೌರವ, ಘನತೆಗೆ ಧಕ್ಕೆಯಾಗಿದೆ. ಇದು ಮಾನನಷ್ಟದ ಹೇಳಿಕೆಯಾಗಿದೆ ಈ ಕೂಡಲೇ ಹೇಳಿಕೆಗೆ ಕಾರಣವಾಗಿರುವ ಅನುರಾಗ್ ಠಾಕೂರ್ ಹಾಗೂ ಜೆ.ಪಿ. ನಡ್ಡಾ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಸಿದ್ದಾರೆ.
ನನ್ನ ರಾಜಕೀಯ ಜೀವನಕ್ಕೆ ಕಳಂಕ ತಂದಿದೆ..
ಇನ್ನೂ ನಾನು ಬಿಜೆಪಿಯವರ ರಾಜಕೀಯ ದಾಳಿಗೆ ಶರಣಾಗುವವನಲ್ಲ, ವಕ್ಫ್ ಆಸ್ತಿಯನ್ನು ಕಬಳಿಸಿರೋದನ್ನು ಸಾಬೀತು ಪಡಿಸಿ, ನಾನು ಈ ರೀತಿಯ ಹೆದರಿಕೆಗಳಿಗೆ ಬಗ್ಗುವವನಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಅನುರಾಗ್ ಠಾಕೂರ್ ಒಬ್ಬ ಜವಾಬ್ದಾರಿಯುತ ಸಂಸದರಾಗಿದ್ದಾರೆ, ಅವರು ಆರೋಪ ಮಾಡುವ ಮುನ್ನ ಯೋಚಿಸಿ ನೋಡಲಿ. ಠಾಕೂರ್ ಮಾಡಿರುವ ಆರೋಪ ನನ್ನ ರಾಜಕೀಯ ಜೀವನಕ್ಕೆ ಕಳಂಕ ತಂದಿದೆ. ನಾನು ಇಂತಹ ಟೊಳ್ಳು ಆರೋಪಕ್ಕೆ ಬೆದರುವವನಲ್ಲ. ಹೋರಾಟದಿಂದಲೇ ಜೀವನವನ್ನು ಕಳೆದಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಈಗಾಗಲೇ ನನ್ನ ಇಮೇಜ್ಗೆ ಹಾನಿಯಾಗಿದೆ..
ಅಲ್ಲದೆ ಆಗಲೇ ನನ್ನ ಸಹೊದ್ಯೋಗಿಗಳು ಅನುರಾಗ್ ಅವರ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಅರವತ್ತು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಳಂಕವನ್ನು ಎಂದಿಗೂ ಎದುರಿಸಿದವನಲ್ಲ. ಈ ಆರೋಪ ಈಗಾಗಲೇ ನನ್ನ ಇಮೇಜ್ಗೆ ಹಾನಿಯನ್ನು ಮಾಡಿಬಿಟ್ಟಿದೆ. ವಕ್ಫ್ ಭೂಮಿಯ ಒಂದು ಸಣ್ಣ ಜಾಗವನ್ನು ನಾನಾಗಲಿ ಅಥವಾ ನನ್ನ ಮಕ್ಕಳಾಗಲಿ ಆಕ್ರಮಿಸಿಕೊಂಡಿರುವುದನ್ನು ಅನುರಾಗ್ ಠಾಕೂರ್ ಸಾಬೀತು ಮಾಡಲಿ. ಬಿಜೆಪಿಯವರು ಕ್ಷಮೆಯಾಚಿಸಬೇಕು, ನನ್ನ ಅರವತ್ತು ವರ್ಷಗಳ ರಾಜಕೀಯ ಜೀವನ ತೆರೆದ ಪುಟ ಇದ್ದಂತೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಅನುರಾಗ್ ಠಾಕೂರ್ ಹೇಳಿದ್ದೇನು..?
2012ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಸಹ ವಕ್ಫ್ ಹಗರಣದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಕರ್ನಾಟಕ ಸರ್ಕಾರ ಆ ವೇಳೆ 4.5 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಇದನ್ನು ಕಾಂಗ್ರೆಸ್ನವರು ಖರ್ಚು ಮಾಡಿದ್ದೀರಿ. ಈ ಹಣವನ್ನು ಮಸೀದಿ ಅಥವಾ ವಕ್ಫ್ ಮಂಡಳಿಯಿಂದ ಪಡೆದುಕೊಳ್ಳಲಾಗಿತ್ತೇ? ಎಂದು ಪ್ರಶ್ನಿಸಿದ್ದರು. ಅಲ್ಲದೆ ಖರ್ಗೆ ಹೆಸರು ಉಲ್ಲೇಖಿಸಿ ಅರಣ್ಯ ಭೂಕಬಳಿಕೆಯ ಆರೋಪ ಮಾಡಿದ್ದರು. ಸದನದಲ್ಲಿ ಈ ಬಗ್ಗೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆಯೇ ಸ್ಪೀಕರ್ ಈ ಹೆಸರನ್ನು ವಾಪಸ್ ಪಡೆಯುವಂತೆ ನಿರ್ದೇಶನ ಮಾಡಿದ್ದರು. ಅದರಂತೆ ಅನುರಾಗ್ ಠಾಕೂರ್ ತಮ್ಮ ಹೇಳಿಕೆಯಲ್ಲಿನ ಹೆಸರನ್ನು ಹಿಂಪಡೆದಿದ್ದರು.