Sandalwood: ಇಂದು ಹಿರಿಯ ಹಾಸ್ಯ ನಟ ಉಮೇಶ್ ಅವರು ನಿಧನರಾಗಿದ್ದು, ಸ್ಯಾಂಡಲ್ವುಡ್ ಗಣ್ಯರು, ರಾಜಕೀಯ ಗಣ್ಯರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ಉಮೇಶ್ ಅವರ ನಿವಾಸಕ್ಕೆ ತೆರಳಿ ಅವರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯನವರು ಕೂಡ ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಅವರು, ಕನ್ನಡ ಚಿತ್ರರಂಗದ ಹಿರಿಯ ನಟ ಉಮೇಶ್ರವರು ನಿಧನರಾಗಿದ್ದಾರೆ. ಮೈಸೂರಿನವರಾದ ಉಮೇಶ್ರವರು ತಮ್ಮ ಕಿರಿಯ ವಯಸ್ಸಿನಲ್ಲಿಯೇ ರಂಗಭೂಮಿಯ ನಟರಾಗಿ, ನಂತರ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 900 ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ಉಮೇಶ್ರವರು ಹಾಸ್ಯನಟರಾಗಿ ಎಲ್ಲರನ್ನು ರಂಜಿಸಿದ್ದರು. 80 ವರ್ಷ ವಯಸ್ಸಿನ ಉಮೇಶ್ ರವರು ಕ್ಯಾನ್ಸರ್ ಕಾಯಿಲೆಗೆ ತುತ್ತಾದ ವೇಳೆ ಅವರ ಕೋರಿಕೆ ಮೇರೆಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡಲಾಗಿತ್ತು. ದುರಾದೃಷ್ಟವಶಾತ್ ಆದರೂ ಅವರು ಬದುಕುಳಿಯಲಿಲ್ಲ ಎಂದಿದ್ದಾರೆ.
ಉಮೇಶ್ ರವರ ಶ್ರೀಮತಿಯವರು ಅನಾರೋಗ್ಯದಿಂದ ಬಳಲುತ್ತಿದ್ದು, ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ. ಕನ್ನಡ ಚಿತ್ರರಂಗ ಮೇರುನಟನನ್ನು ಕಳೆದುಕೊಂಡಿರುವುದು ಅತೀವ ದು:ಖ ತಂದಿದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

