Political News: ಐಪಿಎಲ್ ಕಪ್ ಗೆದ್ದಿರುವ ಆರ್ಸಿಬಿ ತಂಡದ ವಿಜಯೋತ್ಸವಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ನಡುವೆಯೇ ಘಟನೆಗೆ ಹಾಗೂ ಅದರ ಹಿಂದಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊರಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
ಸ್ವಾರ್ಥ ರಾಜಕೀಯಕ್ಕಾಗಿ ಕಾಂಗ್ರೆಸ್ ಸರ್ಕಾರ ಅಮಾಯಕರನ್ನ ಬಲಿಪಡೆಯುತ್ತಿದೆ..
ಇನ್ನೂ ಈ ದುರ್ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿಯು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸ್ವಾರ್ಥಕ್ಕಾಗಿ ಮತ್ತು ರಾಜಕೀಯ ಪ್ರಯೋಜನಕ್ಕಾಗಿ ಅಮಾಯಕರ ಬಲಿ ಪಡೆಯುತ್ತಲೇ ಇದೆ ಎಂದು ರಾಜೀವ್ ಕಿಡಿ ಕಾರಿದ್ದಾರೆ.
ಸಿಎಂ, ಡಿಸಿಎಂ ರಾಜಕೀಯದ ಲಾಭ ಪಡೆಯೋಕೆ ಮುಂದಾಗಿದ್ದರು..
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಕಾಲ್ತುಳಿತ ದುರಂತದಲ್ಲಿ ಮೊದಲ ಆರೋಪಿ ಸಿದ್ದರಾಮಯ್ಯ ಮತ್ತು ಎರಡನೇ ಆರೋಪಿ ಡಿ.ಕೆ. ಶಿವಕುಮಾರ್ ಆಗಿದ್ದಾರೆ. ಆರ್ಸಿಬಿ ಗೆಲುವಿನ ಬಳಿಕ ಇಬ್ಬರೂ ರಾಜಕೀಯ ಲಾಭ ಪಡೆಯುವ ಉದ್ದೇಶ ಇಟ್ಟುಕೊಂಡಿದ್ದರು. ಅಲ್ಲದೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದು, ಅವರಿಂದಲೇ ಸಾವುಗಳು ಸಂಭವಿಸಿವೆ. ನಾನು ಜಿ. ಪರಮೇಶ್ವರ್ ಅವರನ್ನು ಮೂರನೇ ಆರೋಪಿ ಎಂದು ಉಲ್ಲೇಖಿಸಿದ್ದೇನೆ. ನನ್ನ ಪ್ರಕಾರ, ಅವರಿಗೆ ಯಾವುದೇ ಉದ್ದೇಶವಿಲ್ಲ. ಆದರೆ ಅವರು ನಿರ್ಲಕ್ಷ್ಯ ವಹಿಸಿದ್ದರು ಮತ್ತು ಗೃಹ ಸಚಿವರಾಗಿ ವಿಫಲರಾಗಿದ್ದಾರೆ ಎಂದು ರಾಜೀವ್ ಆರೋಪಿಸಿದ್ದಾರೆ.
ಸರ್ಕಾರಕ್ಕೂ ಆರ್ಸಿಬಿಗೂ ಏನು ಸಂಬಂಧ..?
ಈ ದುರಂತಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೈತಿಕ ಹೊಣೆ ಹೊರಬೇಕಾಗುತ್ತದೆ. ನಾನು ದೂರಿನ ಪ್ರತಿಯನ್ನು ಎಸಿಪಿ ಅವರಿಗೆ ನೀಡಿದ್ದೇನೆ. ಅದನ್ನು ಎಫ್ಐಆರ್ ಆಗಿ ಬದಲಾಯಿಸಬೇಕು. ಇಲ್ಲದಿದ್ದರೆ, ನಾನು ನ್ಯಾಯಾಲಯಕ್ಕೆ ಹೋಗಿ ಪಿಸಿಆರ್ ದಾಖಲಿಸುತ್ತೇನೆ. ಪಾರದರ್ಶಕ ಕಾನೂನು ಪ್ರಕ್ರಿಯೆಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಮತ್ತು ಇತರ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಕ್ಕಾಗಿ ರಾಜೀವ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರ್ಸಿಬಿಯ ಐಪಿಎಲ್ ಗೆಲುವಿನಿಂದ ರಾಜಕೀಯ ಲಾಭ ಪಡೆಯುವ ಉದ್ದೇಶ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗಿದೆ. ಸರ್ಕಾರಕ್ಕೂ ಆರ್ಸಿಬಿಗೂ ಏನು ಸಂಬಂಧ? ಆರ್ಸಿಬಿಯ ವಿಜಯೋತ್ಸವಕ್ಕೆ ಸಾರ್ವಜನಿಕ ಹಣವನ್ನು ಏಕೆ ಖರ್ಚು ಮಾಡಲಾಯಿತು? ಎಂದು ಮಾಜಿ ಶಾಸಕ ಪಿ. ರಾಜೀವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಧಿಕ ಜನರು ಬರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ಧೋರಣೆ..!
ಬಂದೋಬಸ್ತ್ ಮಾಡಲಾಗದು ಎಂದು ಪೊಲೀಸ್ ಇಲಾಖೆ ತಿಳಿಸಿದ್ದರೂ ಕಾರ್ಯಕ್ರಮ ನಡೆಸಿದ ಸರ್ಕಾರದಿಂದ ಅಧಿಕಾರ ದುರ್ಬಳಕೆ ಆಗಿದೆ. ಅಧಿಕ ಜನರು ಬರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕೊಟ್ಟರೂ, ನಡೆದು ಹೋಗಲಿ ಎಂಬ ಧೋರಣೆಯಿಂದಾಗಿ ಅನುಮತಿ ನೀಡಲು ಸೂಚಿಸಿದ್ದಾರೆ. ಲಕ್ಷಾಂತರ ಜನರು ಬಂದಾಗ ಆಗಬಹುದಾದ ಅನಾಹುತ, ಅವಘಡಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಸಾವಿರಾರು ಜನ ವೈದ್ಯರನ್ನು ಕರೆಸಬೇಕಿತ್ತು. ಆಮ್ಲಜನಕ, ಆ್ಯಂಬುಲೆನ್ಸ್ ಹಾಗೂ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸರ್ಕಾರ ಪೊಲಿಟಿಕಲ್ ಕ್ರೆಡಿಟ್ಗಾಗಿ ಅಮಾಯಕರ ಕೊಲೆ ಮಾಡಿದೆ, ಈ ಮಾನವ ಹತ್ಯೆಗೆ ಆರೋಪಿ ನಂಬರ್ 1 ಸಿದ್ದರಾಮಯ್ಯನವರೇ ಆಗಿದ್ದಾರೆ. ಆರೋಪಿ ನಂಬರ್ 2 ಡಿ.ಕೆ.ಶಿವಕುಮಾರ್. ಇವು ಇವರ ರಾಜಕೀಯ ತೆವಲಿಗಾಗಿ ನಡೆದ ಸಾವುಗಳು ಎಂದು ರಾಜೀವ್ ಟೀಕಿಸಿದ್ದಾರೆ.
ಇಡೀ ಘಟನೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಕಾರಣ..
ಇನ್ನೂ ಏನೂ ತಪ್ಪು ಮಾಡದ ಪೊಲೀಸರ ಬಲಿ ತೆಗೆದುಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಹಾಗೂ ಆಯುಕ್ತ ಬಿ.ದಯಾನಂದ್ ಅವರು ಕಾರ್ಯಕ್ರಮ ಬೇಡ ಎಂದಿದ್ದರು. 3-4 ದಿನ ಬಿಟ್ಟು ಮಾಡುವಂತೆ ಹೇಳಿದರೂ ಕೇಳಲಿಲ್ಲ. ಆದರೂ ಒತ್ತಡ ಹಾಕಿ ಕಾರ್ಯಕ್ರಮ ಮಾಡಿದ್ದಾರೆ. ಎಲ್ಲ ಅವ್ಯವಸ್ಥೆ, 11 ಜನರ ಬಲಿ, 50-60 ಜನರು ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಬಂದಿರುವುದಕ್ಕೆ ಈ ಸರ್ಕಾರ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕಾರಣ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿ. ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಸರ್ಕಾರವಾದರೂ ಮೂರು ಮೂರು ತನಿಖೆ ಮಾಡಿಸಲು ಸಾಧ್ಯವೇ? ಡಿಸಿ, ಸಿಐಡಿ ಮಾತ್ರವಲ್ಲದೆ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದಾರೆ. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ, ನೈತಿಕತೆ ಎನ್ನುವ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿದೆ. ರಾಹುಲ್ ಗಾಂಧಿಯವರು ಸಂವಿಧಾನದ ಪ್ರತಿ ಹಿಡಿದು ಓಡಾಡುತ್ತಾರೆ. ಆ ಸಂವಿಧಾನದ ಬಗ್ಗೆ ಡಿ.ಕೆ.ಶಿವಕುಮಾರ ಅವರಿಗೆ ಗೌರವ ಇದ್ದರೆ ಮೊದಲು ರಾಜೀನಾಮೆ ಕೊಡಲಿ ಎಂದು ರವಿಕುಮಾರ್ ಆಗ್ರಹಿಸಿದ್ದಾರೆ.