Chikkamagaluru News: ಚಿಕ್ಕಮಗಳೂರಿನ ಮನೆಯೊಂದರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ರಾತ್ರೋ ರಾತ್ರಿ ಯುವಕರ ಗುಂಪೊಂದು ಮನೆಯೊಂದರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅನ್ಯಕೋಮಿನ ಯುವಕರೆಂದು ಹೇಳಲಾಗಿತ್ತು.
ಇದೀಗ ಅನ್ಯಕೋಮಿನ 9 ಅಪ್ರಾಪ್ತ ಬಾಲಕರು ಮತ್ತು ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ವಿಜಯಪುರ ಬಡಾವಣೆಯ, ಇಲೆಕ್ಟ್ರಿಕ್ ಕೆಲಸ ಮಾಡುವ ಉಮೇಶ್ ಎಂಬುವವರ ಮನೆಯ ಮೇಲೆ ಈ ಯುವಕರು ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜು ಒಡೆದಿದ್ದರು. ಬಳಿಕ ಎಸ್ಕೇಪ್ ಆಗಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ, ಅದರ ಆಧಾರದ ಮೇಲೆ ಬಾಲಕರನ್ನು ಮತ್ತು ಯುವಕರನ್ನು ಬಂಧಿಸಲಾಗಿದೆ. ಬಂಧಿಸಿ ವಿಚಾರಣೆ ನಡೆಸಿದಾಗ, ತಾವು ಧರ್ಮಕ್ಕೆ ಸಂಬಂಧಿಸಿದ ಕೆಲಸಕ್ಕೆ ಹೋಗಿ ಬರುವಾಗ, ಪರಸ್ಪರ ಕಲ್ಲೆಸೆದುಕೊಂಡಿದ್ದೆವು. ಅದು ಅವರ ಮನೆ ಮೇಲೆ ಬಿದ್ದು, ಕಿಟಕಿ ಗಾಜು ಒಡೆದು ಹೋಗಿದೆ. ಇದರಿಂದ ನಾವು ಹೆದರಿ ಅಲ್ಲಿಂದ ಎಸ್ಕೇಪ್ ಆಗಿದ್ದೆವು. ಅದು ಬೇಕಂತಲೇ ಮಾಡಿದ ಕೃತ್ಯವಲ್ಲವೆಂದು ಬಾಲಕರು ಹೇಳಿದ್ದಾರೆ.
ಇನ್ನು ಪೊಲೀಸರು ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ಪರಿಶೀಲನೆಯಿಂದ ಒಬ್ಬರಿಗೊಬ್ಬರು ಕಲ್ಲು ಹೊಡೆಯಲು ಹೋಗಿ, ಅಪ್ಪಿತಪ್ಪಿ ಕಿಟಕಿ ಗಾಜು ಒಡೆದಿದೆ ಎಂದು ಗೊತ್ತಾಗಿದೆ. ಹೀಗಾಗಿ ಸ್ಥಳೀಯ ಪೊಲೀಸರು, ಕೋಮು ಪ್ರಚೋದನೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.