Tumakuru News: ಸರ್ಕಾರಿ ಶಾಲೆಯೊಂದರ ಬಾಲಕಿಯರ ಶೌಚಾಲಯದ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಇದನ್ನು ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ ಘಟನೆ, ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಹುಳಿಯಾರು ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಹಬೂಬ್ ಷರೀಫ್, ಶಮ್ಶುದ್ದೀನ್, ಇರ್ಫಾನ್, ಮುಬಾರಕ್, ಮುದಸ್ಸೀರ್, ಯಾಸಿನ್, ತಾಝೀಮ್ ಕಲ್ಲು ತೂರಿ ಹಲ್ಲೆ ಮಾಡಿರುವ ಆರೋಪಿಗಳಾಗಿದ್ದಾರೆ.
ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರು ಕೆಪಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ತೆರಳಿದ್ದ. ಈ ವೇಳೆ ಈ ಪುಂಡರು ಹುಡುಗಿಯರ ಶೌಚಾಲಯದ ಮೇಲೆ ಕಲ್ಲು ತೂರಾಟ ನಡೆಸುವುದನ್ನು ಯಶ್ವಂತ್ ಕಂಡಿದ್ದಾನೆ. ಬಳಿಕ ಅವರ ಕೆಲಸವನ್ನು ಪ್ರಶ್ನಿಸಿದ್ದಾನೆ.
ಇಷ್ಟಕ್ಕೆ ಸಿಟ್ಟಾದ ಪುಂಡರು, ಯಶ್ವಂತ್ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಕ್ಷಣ ವಿಷಯ ತಿಳಿದ ಮುಖ್ಯೋಪಾಧ್ಯಾಯಕರು ಸ್ಥಳಕ್ಕೆ ಆಗಮಿಸಿ, ಜಗಳ ನಿಲ್ಲಿಸಿದ್ದಾರೆ. ಘಟನೆಯಲ್ಲಿ ಯಶ್ವಂತ್ ತಲೆ, ಕಾಲು, ಬೆನ್ನಿಗೆ ಪೆಟ್ಟಾಗಿದೆ. ಆತನನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಸಂಬಂಧ ಶಾಲೆ ಆಡಳಿತ ಮಂಡಳಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.