ಯತ್ನಾಳ್​ಗೆ ಬೆಂಬಲ: ಜಯ ಮೃತ್ಯುಂಜಯ ಸ್ವಾಮೀಜಿಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ

Hubli News: ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಪರವಾಗಿ ಮತ್ತು ಒಂದು ಪಕ್ಷದ ಪರವಾಗಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಮಾತನಾಡಬಾರದು. ಸ್ವಾಮೀಜಿಯವರು ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳಬೇಕು. ಮಾತನಾಡಿದರೆ ಅವರ ವಿರುದ್ಧ ಅನಿವಾರ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನೀಡಿದೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್​ನ ಸದಸ್ಯರು, ಯಾವುದೇ ರಾಜಕೀಯ ಪಕ್ಷದ ಪರವಾಗಿ, ವ್ಯಕ್ತಿ ಪರವಾಗಿ ಮಾತನಾಡದಂತೆ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಮಾತನಾಡಿದರೆ, ಪೀಠದಿಂದ ಸ್ವಾಮೀಜಿ ಉಚ್ಛಾಟನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಹೇಳಿದ್ದೆವು ಎಂದು ತಿಳಿಸಿದರು.

ಮುಂದಿನ ವಾರದಲ್ಲಿ ಮತ್ತೆ ಸಭೆ ನಡೆಸುತ್ತೇವೆ. ಅಷ್ಟರಲ್ಲಿ ಸ್ವಾಮೀಜಿಯವರ ವರ್ತನೆ ಬದಲಾವಣೆಯಾಗದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಟ್ರಸ್ಟ್​ನ ನಿಯಮಗಳ ವಿರುದ್ಧ ನಡೆದುಕೊಂಡರೆ ಅವರನ್ನು ಪೀಠದಿಂದ ಕೆಳಗೆ ಇಳಿಸುವ ಅಧಿಕಾರ ಟ್ರಸ್ಟ್​ಗೆ ಇದೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಅವರು ಟ್ರಸ್ಟ್ ಬಗ್ಗೆ ಬೇಜವಬ್ದಾರಿತನದಿಂದ ಮಾತನಾಡಿದ್ದಾರೆ. ಇದು ಟ್ರಸ್ಟ್ ಮತ್ತು ಸಮಾಜದವರಿಗೆ ನೋವು ತರಿಸಿದೆ. ಯಾವುದೇ ಪದಾಧಿಕಾರಿಗಳು ಸಮಾಜದ ಆಸ್ತಿ ಕಬಳಿಕೆ ಮಾಡಿಲ್ಲ. ಸಾರ್ವಜನಿಕವಾಗಿ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ. ಇದಕ್ಕೆ ಬಸನಗೌಡ ಪಾಟೀಲ್​ ಯತ್ನಾಳ್ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ವಾಮೀಜಿ ಯತ್ನಾಳ ಬೆಂಬಲಿಸುವುದು ಸರಿಯಲ್ಲ: ಕಾಶಪ್ಪನವರ
ಸಮಾಜದವರು ಗುರುತಿಸಿ ಸ್ವಾಮೀಜಿಯವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದೆ. ವ್ಯಯಕ್ತಿಕವಾಗಿ ಯತ್ನಾಳ ಮತ್ತು ಬಿಜೆಪಿ ಬೆಂಬಲಿಸೋದು ಖಂಡನೀಯವಾಗಿದೆ. ಓರ್ವ ವ್ಯಕ್ತಿ ಹಿಂದೆ‌ ನಿಲ್ಲುವದು ಸರಿಯಲ್ಲ ಹಂದಿ, ನರಿ, ನಾಯಿ ಅಂತಾರೆ. ಅವರ ಸಂಸ್ಕಾರ ನೋಡಿಯೇ ಅವರನ್ನು ಅವರ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ ಅವರೊಬ್ಬ ಸ್ವಯಂ ಘೋಷಿತ ನಾಯಕ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಯತ್ನಾಳ್​ ವಿರುದ್ಧ ವಾಗ್ದಾಳಿ ಮಾಡಿದರು.

About The Author