ಬ್ಲಾಸ್ಟ್‌ ರೂವಾರಿಗಳನ್ನ ಸುಮ್ನೆ ಬಿಡಲ್ಲ..

ದೆಹಲಿ ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟ ಎದೆ ಝಲ್ಲೆನ್ನಿಸುವಂತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಸ್ಫೋಟದ ಹಿಂದಿರುವ ರೂವಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವಾರ್ನಿಂಗ್‌ ಕೊಟ್ಟಿದ್ದಾರೆ. ಭೂತಾನ್‌ಗೆ ದ್ವಿಪಕ್ಷೀಯ ಭೇಟಿಯಲ್ಲಿರುವ ಮೋದಿ, ರಾಜಧಾನಿ ಥಿಂಪುವಿನಲ್ಲಿ ದೆಹಲಿ ಬ್ಲಾಸ್ಟ್‌ ಬಗ್ಗೆ ಮಾತನಾಡಿದ್ದಾರೆ. ದೆಹಲಿ ಬಾಂಬ್‌ ಬ್ಲಾಸ್ಟ್‌ ಪಿತೂರಿ ಮಾಡಿದವರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಪುಲ್ವಾಮಾ ಘಟನೆ ಬಳಿಕ ಬಿಹಾರದ‌ ಕಾರ್ಯಕ್ರಮದಲ್ಲಿ ಇಂಗ್ಲೀಷ್‌ನಲ್ಲಿ ಮೋದಿ ಮಾತನಾಡಿದ್ದರು. ತಮ್ಮ ಮಾತು ಇಡೀ ವಿಶ್ವಕ್ಕೆ ಅರ್ಥವಾಗಲಿ ಎನ್ನುವ ಕಾರಣಕ್ಕೆ ಎಚ್ಚರಿಕೆ ಸಂದೇಶವನ್ನು ಇಂಗ್ಲೀಷ್‌ನಲ್ಲಿ ಹೇಳಿದ್ದರು. ಈಗ ಭೂತಾನ್‌ನಲ್ಲೂ ಕೂಡ ಇಂಗ್ಲೀಷ್‌ನಲ್ಲೇ ವಾರ್ನಿಂಗ್‌ ಕೊಟ್ಟಿದ್ದಾರೆ.

ಇಂದು ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ತೀವ್ರವಾಗಿ ದುಃಖಿತರನ್ನಾಗಿಸಿದೆ. ಸಂತ್ರಸ್ತ ಕುಟುಂಬಗಳ ದುಃಖ ನನಗೆ ಅರ್ಥವಾಗಿದೆ. ಇಂದು ಇಡೀ ರಾಷ್ಟ್ರವು ಅವರೊಂದಿಗೆ ನಿಂತಿದೆ. ನಿನ್ನೆ ರಾತ್ರಿಯಿಡೀ ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ.

ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಸಂಚುಕೋರರನ್ನು ಸುಮ್ಮನೆ ಬಿಡೋದಿಲ್ಲ. ಇದಕ್ಕೆ ಕಾರಣರಾದ ಎಲ್ಲರನ್ನೂ ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಶಪಥ ಮಾಡಿದ್ದಾರೆ.