ನವದೆಹಲಿ : ಶಿವಮೊಗ್ಗದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರಿಂದ ಆ ಭಾಗದ ಜನರಲ್ಲಿ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇನ್ನೂ ಈ ಉದ್ದೇಶಕ್ಕಾಗಿಯೇ 8 ರಿಂದ 10 ಸಾವಿರ ಕೋಟಿ ರೂಪಾಯಿ ಮೀಸಲಿಡುವ ಭರವಸೆ ನೀಡಿದೆ. ಈ ಕುರಿತು ಮಹತ್ವದ ಮಾಹಿತಿ ನೀಡಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಐಎಸ್ಎಲ್ ಕಾರ್ಖಾನೆಗೆ ಮರುಜೀವ ನೀಡುವ ಸಂಬಂಧ ಮುಂದಿನ ಎರಡು ತಿಂಗಳಲ್ಲಿ ಸಮಗ್ರ ಯೋಜನಾ ವರದಿ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಐತಿಹಾಸಿಕ ಕಾರ್ಖಾನೆಯನ್ನು ಪುನರಾರಂಭದ ಪ್ರತಿಜ್ಞೆಯನ್ನು ಅವರು ತೊಟ್ಟಿದ್ದಾರೆ.
ವಾರ್ಷಿಕ 300 ದಶಲಕ್ಷ ಟನ್ ಸ್ಟೀಲ್ – ಉಕ್ಕು ಉತ್ಪಾದನಾ ಗುರಿ..
ಭದ್ರಾವತಿಯ ಉಕ್ಕು ಕಾರ್ಖಾನೆಯನ್ನು ಹೊಸದಾಗಿ ಮರು ನಿರ್ಮಾಣ ಮಾಡಬೇಕಾಗಿದೆ. ಭಾರತೀಯ ಉಕ್ಕು ಪ್ರಾಧಿಕಾರವು ಮುಂದಿನ ದಿನಗಳಲ್ಲಿ ದೇಶದ ಉಕ್ಕು ಕ್ಷೇತ್ರದಲ್ಲಿ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಅದೇ ಸಂದರ್ಭದಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು 2023ರ ವೇಳೆಗೆ ದೇಶಿಯವಾಗಿ ವಾರ್ಷಿಕ 300 ದಶಲಕ್ಷ ಟನ್ ಸ್ಟೀಲ್ ಉಕ್ಕು ಉತ್ಪಾದನೆಯ ಗುರಿಯನ್ನು ನಿಗದಿ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಉಕ್ಕು ಸ್ಥಾವರಗಳನ್ನು ಬಲಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಭದ್ರಾವತಿ ಉಕ್ಕು ಕಾರ್ಖಾನೆಯಲ್ಲಿಯೂ 8 ರಿಂದ 10 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿಐಎಸ್ಎಲ್ಗೆ ಮೋದಿಯವರಿಂದಲೇ ಅಡಿಗಲ್ಲು..
ಅಲ್ಲದೆ ಪ್ರಮುಖವಾಗಿ ಈ ಕಾರ್ಯದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ. ಈ ಕಾರ್ಖಾನೆಯ ಪುನಶ್ಚೇತನ ಕಾರ್ಯ ವರ್ಷಾಂತ್ಯಕ್ಕೆ ಆರಂಭವಾಗಲಿದ್ದು, ಮೋದಿಯವರಿಂದಲೇ ಅದಕ್ಕೆ ಅಡಿಗಲ್ಲು ಪೂಜೆ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕುಮಾರಸ್ವಾಮಿಯವರ ಮೇಲೆ ಹೆಚ್ಚಿದ ಭರವಸೆ..
ಇನ್ನೂ ಭದ್ರಾವತಿಯ ಕಬ್ಬಿನ ಮತ್ತು ಉಕ್ಕಿನ ಕಾರ್ಖಾನೆಗೆ ಪುನಶ್ಚೇತನ ನೀಡಬೇಕು ಎಂಬ ಹಕ್ಕೊತ್ತಾಯಗಳು ವರ್ಷಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಈ ಸಂಬಂಧ ಸಾಕಷ್ಟು ಬಾರಿ ಪ್ರತಿಭಟನೆಗಳೂ ಆಗಿವೆ, ಕೇಂದ್ರ ಸರ್ಕಾರದ ಅಧೀನದ ಸಾರ್ವಜನಿಕ ಉದ್ದಿಮೆಯಾಗಿರುವ ವಿಐಎಸ್ಎಲ್ ಪುನರಾರಂಭ ವಿಚಾರದಲ್ಲಿ ರಾಜ್ಯ ಸರ್ಕಾರವು ಅಸಹಾಯಕವಾಗಿತ್ತು. ಆದರೆ ಈಗ ರಾಜ್ಯದವರೇ ಆಗಿರುವ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಉಕ್ಕು ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ವಿಐಎಸ್ಎಲ್ ಪುನಶ್ಚೇತನದ ನಿರೀಕ್ಷೆ ಮೂಡಿತ್ತು. ಅದಕ್ಕೆ ಕುಮಾರಸ್ವಾಮಿಯವರು ಕೂಡ ಉತ್ತಮವಾಗಿ ಸ್ಪಂದಿಸಿರುವುದು ಹೊಸ ಭರವಸೆ ಮೂಡುವಂತೆ ಮಾಡಿದೆ.ಬ
102 ವರ್ಷದ ಇತಿಹಾಸವಿರುವ ಹೆಮ್ಮೆಯ ಕಾರ್ಖಾನೆ..
ಈ ಕಾರ್ಖಾನೆಯನ್ನು 1918- 1919 ರಲ್ಲಿ ಆರಂಭಿಸಲಾಗಿತ್ತು. ಆರಂಭದಲ್ಲಿ 19 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. 102 ವರ್ಷದ ಇತಿಹಾಸ ಇರುವ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಕಾರ್ಮಿಕರು ಸತತ 10 ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರು. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಇದರ ಕಡೆಗೆ ಗಮನ ಹರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿತ್ತು, ಹಲವಾರು ಬಾರಿ ಅಲ್ಲಿನ ಕಾರ್ಮಿಕರು ಹಾಗೂ ಸಾರ್ವಜನಿಕರು ಐತಿಹಾಸಿಕ ಕಾರ್ಖಾನೆಯ ಉಳಿವಿಗಾಗಿ ಸರ್ಕಾರಗಳಿಗೆ ಒತ್ತಾಯಿಸುತ್ತಲೇ ಬರುತ್ತಿದ್ದರು. ಆದರೆ ಇದರ ಪುನರಾರಂಭಕ್ಕೆ ತಮ್ಮಿಂದ ಆದ ಎಲ್ಲ ರೀತಿಯಿಂದಲೂ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಯತ್ನಿಸಿದ್ದರು.
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ತಯಾರಾದ ಕಬ್ಬಿಣ ಮತ್ತು ಉಕ್ಕು ದೇಶದ ರಕ್ಷಣಾ ಇಲಾಖೆಗೆ ನೀಡಲಾಗುತ್ತಿತ್ತು. ಅಷ್ಟೊಂದು ಉತೃಷ್ಠವಾದ ಕಬ್ಬಿಣ ಮತ್ತು ಉಕ್ಕು ಇಲ್ಲಿ ತಯಾರಾಗುತ್ತಿತ್ತು. ಕಾರ್ಖಾನೆ ಮತ್ತಷ್ಠು ಅಭಿವೃದ್ಧಿ ಕಾಣಲಿ ಎಂದು ರಾಜ್ಯ ಸರ್ಕಾರ 1989-90 ರಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಕೇವಲ 1 ರೂಪಾಯಿಗೆ ಕಾರ್ಖಾನೆ ಸೇರಿದಂತೆ ಅದರ ಎಲ್ಲಾ ಆಸ್ತಿಗಳನ್ನು ನೀಡಿತ್ತು. ಆದರೆ, ಈವರೆಗೂ ಯಾವುದೇ ಪ್ರಗತಿ ಕಾಣದೇ ಕಾರ್ಖಾನೆ ತುಕ್ಕು ಹಿಡಿಯುವಂತಾಗಿತ್ತು. ಆದರೆ ಕುಮಾರಸ್ವಾಮಿಯವರ ಹೆಚ್ಚಿನ ಆಸಕ್ತಿಯ ಪರಿಣಾಮ ಶೀಘ್ರದಲ್ಲೇ ಈ ಐತಿಹಾಸಿಕ ಕಾರ್ಖಾನೆಯು ಪುನರಾರಂಭವಾಗಲಿರುವುದು ಅಲ್ಲಿನ ಜನರಿಗೆ ಸಂತೋಷ ನೀಡುವ ಸಂಗತಿಯಾಗಿದೆ.