ರಾಜ್ಯಾದ್ಯಂತ ನಡೆಯುತ್ತಿರುವ ಜಾತಿಗಣತಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಮೌಖಿಕ ಆದೇಶ ಹೊರಡಿಸಿದೆ. ಪಟ್ಟಿಯಲ್ಲಿದ್ದ ಕೆಲವು ಪ್ರಶ್ನೆಗಳಿಗೆ ವಿರೋಧ ಕೇಳಿ ಬಂದ ಹಿನ್ನೆಲೆ ವಿನಾಯಿತಿ ಕೊಡಲಾಗಿದೆ.
ಸಾರ್ವಜನಿಕರಿಗೆ ಇರಿಸು ಮುರಿಸಾಗೋ ಕೆಲ ಪ್ರಶ್ನೆಗಳಿಗೆ ಬ್ರೇಕ್ ಹಾಕಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ವಿ. ಸೋಮಣ್ಣ ಕೂಡ, ಜಾತಿಗಣತಿ ವೇಳೆ ಗಣತಿದಾರರ ವಿರುದ್ಧ ಗರಂ ಆಗಿದ್ರು. ಇಷ್ಟೊಂದು ಪ್ರಶ್ನೆಗಳು ಬೇಕಿತ್ತಾ ಎಂದು ಸಿಟ್ಟಾಗಿದ್ರು. ಜಾತಿಗಣತಿ ಪಟ್ಟಿಯಲ್ಲಿನ 60 ಪ್ರಶ್ನೆಗಳಲ್ಲಿ ಕೆಲವು ಪ್ರಶ್ನೆಗಳಿಗೆ, ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಲರ್ಟ್ ಆಗಿರುವ ರಾಜ್ಯ ಸರ್ಕಾರ, ಕೆಲ ಪ್ರಶ್ನೆಗಳನ್ನು ಕೈಬಿಡುವಂತೆ ಸೂಚನೆ ನೀಡಿದೆ.
ನಿಮ್ಮ ಮನೆಯಲ್ಲಿ ಎಷ್ಟು ಕುರಿ, ಕೋಳಿಗಳಿವೆ. ನಿಮ್ಮ ಬಳಿ ಎಷ್ಟು ಚಿನ್ನ, ಜಮೀನು ಇದೆ. ನಿಮ್ಮದು ಸ್ವಂತ ಮನೇನಾ? ಯಾವ ಬ್ಯಾಂಕ್ನಲ್ಲಿ ಅಕೌಂಟ್ ಇದೆ. ಹೀಗಾಗಿ ಹಲವು ಪ್ರಶ್ನೆಗಳು ಅಸಂಬದ್ಧವಾಗಿವೆ ಎಂದು ಸಾರ್ವಜನಿಕರು ಕಿಡಿಕಾರಿದ್ರು. ಹೀಗಾಗಿ ಕೊನೆಗೂ ಎಚ್ಚೆತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಈ ರೀತಿಯ ಕೆಲವು ಪ್ರಶ್ನೆಗಳನ್ನು ಕೈಬಿಡುವಂತೆ ಮೌಖಿಕ ಸೂಚನೆ ಹೊರಡಿಸಿದ್ದಾರೆ.