Hubli News: ಹುಬ್ಬಳ್ಳಿ: ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಕೊಟ್ಟ ಹೇಳಿಕೆ ಬಗ್ಗೆ ಕಾಂಗ್ರೆಸ್ ಆಕ್ರೋಶ ಹೊರಹಾಕಿ, ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಜಗದೀಶ್ ಶೆಟ್ಟರ್, ಅರ್ಧಂಬರ್ಧ ಹೇಳಿಕೆ ಕೇಳಿ ಅಮಿತ್ ಶಾ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನ ಸಂಪೂರ್ಣವಾಗಿ ಕೇಳಿ ನಿರ್ಧಾರ ಮಾಡಬೇಕು. ಅರ್ಧಂಬರ್ಧ ಹೇಳಿಕೆ ಕೇಳಿ ಅವರ ವಿರುದ್ಧ ಆರೋಪ ಮಾಡೋದು ಸರಿಯಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಕಾಂಗ್ರೆಸ್ ನವರು. ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸೋಲುವುದಕ್ಕೆ ಕಾಂಗ್ರೆಸ್ ಕಾರಣ. ಅಂಬೇಡ್ಕರ್ ವಿಚಾರದಲ್ಲಿ ನೆಗೆಟಿವ್ ಆಗಿ ನಡೆದುಕೊಳ್ಳೋದು ಕಾಂಗ್ರೆಸ್ ಎಂದು ಶೆಟ್ಟರ್ ಆರೋಪಿಸಿದ್ದಾರೆ.
ಎಂ ಎಲ್ ಸಿ ಸಿಟಿ ರವಿ ಬಂಧನ ವಿಚಾರದ ಬಗ್ಗೆ ಮಾನಾಡಿರುವ ಶೆಟ್ಟರ್, ಈ ವಿಚಾರದಲ್ಲಿ ನಾವು ಈಗಾಗಲೇ ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದೇವೆ. ಸರ್ಕಾರದ ಈ ನಡೆಯನ್ನ ನಾವು ಖಂಡಿಸಿದ್ದೇವೆ. ಈ ಹಿನ್ನೆಲೆ ಸರ್ಕಾರಕ್ಕೆ ಮುಖಭಂಗ ಆದಂತಾಗಿದೆ. ಸಿಎಂ ಹಾಗೂ ಡಿಸಿಎಂ ಈ ಬಗ್ಗೆ ಕ್ಷಮಾಪಣೆ ಕೇಳಬೇಕು ಎಂದು ಶೆಟ್ಟರ್ ಹೇಳಿದ್ದಾರೆ.
ಅಲ್ಲದೇ, ರಾಜ್ಯ ಸರ್ಕಾರ ಷಂಡ ಸರ್ಕಾರ. ಈ ಸರ್ಕಾರದ ಕೈಯಲ್ಲಿ ಏನೂ ಆಗಲ್ಲ ಎಂದು ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ಇದೊಂದು ಅಸಂಸ್ಕೃತಿ ಪದ ಅಂತಾ ನನ್ನ ಮೇಲೆ ಕೇಸ್ ಹಾಕಿದ್ರೂ ಪರ್ವಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಾಜ್ಯದಲ್ಲಿ ಮಹಿಳೆಯರಿಗಾಗಲಿ ಯಾರಿಗೂ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹಮಂತ್ರಿಗಳು ಅವರದ್ದೇ ಆದ ಹೇಳಿಕೆ ಕೊಡುತ್ತಾ ಹೊರಟಿದ್ದಾರೆ. ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ತನ್ನ ಹಗರಣಗಳನ್ನ ಮುಚ್ಚಿ ಹಾಕೋಕೆ ಕಾಂಗ್ರೆಸ್ ಸರ್ಕಾರ ವಿಷಯಾಂತರ ಮಾಡುತ್ತಿದೆ.
ಸಿಎಂ ಐದು ವರ್ಷ ಆಡಳಿತ ಹೇಗೆ ಮಾಡಬೇಕು ಅನ್ನೋ ಪ್ರಯತ್ನದಲ್ಲಿದ್ದಾರೆ. ಆದ್ರೆ ಡಿಕೆಶಿ ಅದನ್ನ ಹೇಗೆ ನಿಲ್ಲಿಸಬೇಕು ಅನ್ನೋ ಪ್ರಯತ್ನದಲ್ಲಿದ್ದಾರೆ. ಕಂದಾಯ ಇಲಾಖೆಯಲ್ಲಿ ಯಾವುದೇ ನೋಂದಣಿ ಕಾರ್ಯ ನಡೆಯುತ್ತಿಲ್ಲ. ಕಂದಾಯ ಇಲಾಖೆಯಲ್ಲಿ ಈ ಸ್ವತ್ತು ಸಮಸ್ಯೆ ಮುಂದುವರೆದಿದೆ. ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಕೆಲಸಗಳಾಗುತ್ತಿಲ್ಲ. ಇಂತಹ ವಿಚಾರಗಳಲ್ಲಿಯೇ ಸರ್ಕಾರ ಕಾಲಹರಣ ಮಾಡ್ತಿದೆ ಎಂದು ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ.