Political News: ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಬಗ್ಗೆ ಯತ್ನಾಳ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ಬಾರಿ ಅಧಿವೇಶನಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ಬಗ್ಗೆ, ಕುರುಬ ಸಮಾಜವನ್ನು ಎಸ್ಎಸ್ಟಿ ಲೀಸ್ಟ್ಗೆ ಸೇರಿಸುವ ಬಗ್ಗೆ, ವಕ್ಫ್ ಸೇರಿ ಹಲವು ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ಅಲ್ಲದೇ ನಾನು ನಮ್ಮ ಸ್ಪೀಕರ್ಗೆ ಪತ್ರ ಬರೆದಿದ್ದು, ಅಧಿವೇಶನದ ಮೊದಲ ದಿನವೇ ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಮನವಿ ಮಾಡಿದ್ದೇನೆ. ಪ್ರತೀ ಸಲ ವ್ಯವಸ್ಥಿತವಾಗಿ ವಿಧಾನಮಂಡಲದಲ್ಲಿ ಉತ್ತರಕರ್ನಾಟವನ್ನು ಕೊನೆಗಿಡಲಾಗುತ್ತದೆ. ಹೀಗಾದಾಗ ಹಲವು ಶಾಸಕರು ಗೈರಾಗಿರುತ್ತಾರೆ. ನಮ್ಮನ್ನು ಬೆಂಬಲಿಸುವಷ್ಟು ಶಾಸಕರೂ ಇರುವುದಿಲ್ಲ. ಹಾಗಾಗಿ ಉತ್ರಕರ್ನಾಟಕದಲ್ಲಿ ನಾಮಕಾವಾಸ್ತೆ ಚರ್ಚೆಯಾಗುತ್ತದೆ. ಅದಕ್ಕಾಗಿ ನಾನು ಸ್ಪೀಕರ್ಗೆ ಮೊದಲ ದಿನವೇ ಉತ್ತರಕರ್ನಾಟಕದ ಬಗ್ಗೆ ಚರ್ಚೆಯಾಗಬೇಕು ಎಂದು ಪತ್ರ ಬರೆದಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಅಲ್ಲದೇ, ನಮ್ಮ ಗುರುಗಳು ನಮಗೆ ಕರೆ ನೀಡಿದ್ದಾರೆ. ನಾಳೆ ನಾವು ಬೆಳಗಾವಿಯಲ್ಲಿ ಸಭೆ ಸೇರಲಿದ್ದೇವೆ. ನಾವು ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲಿದ್ದೇವೆ. ಸರ್ಕಾರ ಏನಾದರೂ ನಮ್ಮ ಹೋರಾಟಕ್ಕೆ ತೊಂದರೆಯುಂಟು ಮಾಡಿದರೆ, 24 ತಾಸಿನಲ್ಲಿ ಸರ್ಕಾರ ಈ ರಾಜ್ಯದಲ್ಲಿ ಇರೋದಿಲ್ಲವೆಂದು ಯತ್ನಾಳ್ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಾಂಗ್ರೆಸ್ಸಿನಲ್ಲೂ ನಮ್ಮ ಸಮಾಜದ ಶಾಸಕರಿದ್ದಾರೆ. ನಾನು ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ, ಅವರು ನನ್ನ ಹೋರಾಟಕ್ಕೆ ಬೆಂಬಲ ನೀಡದೇ ಇದ್ದಲ್ಲಿ, ನಮ್ಮ ಸಮಾಜದ ಪ್ರತಿಭಟನೆಯಲ್ಲಿ ಭಾಗವಹಿಸದೇ ಇದ್ದರೆ, ಮುಂದಿನ ಚುನಾವಣೆಯಲ್ಲಿ ಜನ ಅವರಿಗೆ ಉತ್ತರಿಸಲಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.