Hubballi Political News: ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಮೀಡಿಯಾದ ಎದುರೇ, ಪೊಲೀಸ್ ಇನ್ಸ್ಪೆಕ್ಟರ್ ಗೆ ಏಕವಚನದಲ್ಲಿ ಮಾತನಾಡಿದ್ದನ್ನು, ಧಾರವಾಡ ಲೋಕಸಭಾ ಕ್ಷೇತ್ರದ, ಕಾಂಗ್ರೆಸ್ ಮುಖಂಡರಾದ, ರಜತ್ ಉಳ್ಳಾಗಡ್ಡಿ ಮಠ ಅವರು ಖಂಡಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ತನ್ನದೇ ಆದ ಘನತೆ ಗೌರವ ಹೊಂದಿದೆ. ಸಾರ್ವಜನಿಕ ಹಿತ ರಕ್ಷಣೆಗೆ ತಮ್ಮ ಜೀವ ಮತ್ತು ಜೀವನವನ್ನು ಮುಡುಪಾಗಿಟ್ಟ ನಮ್ಮ ಪೊಲೀಸರು ಹಬ್ಬ ಹರಿದಿನ ಎನ್ನದೆ ಕರ್ತವ್ಯ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಗೌರವ ನೀಡುವುದು ಜನಪ್ರತಿನಿಧಿಗಳ ಮೊದಲ ಕರ್ತವ್ಯ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹಗಲಿರುಳು ಶ್ರಮ ವಹಿಸುವ ಸಂದರ್ಭದಲ್ಲಿ, ದೀಪಾವಳಿ ಹಬ್ಬದ ಶುಭಾಶಯ ಕೋರಲು ಬಂದ ಇನ್ಸಪೆಕ್ಟರ್ ಕಾಡದೇವರಮಠ ಅವರನ್ನು ತಮ್ಮ ಕಾರ್ಯಕರ್ತರ ಮುಂದೆ ಅವಮಾನಿಸಿ ಬೆದರಿಕೆ ಒಡ್ಡಿದ ರೀತಿ ಖಂಡನೀಯ.
ಪೊಲೀಸರು ತಪ್ಪು ಮಾಡಿದ್ದಲ್ಲಿ ಕಾನೂನು ರೀತಿ ಕೈಗೊಳ್ಳಬಹುದು ಅದನ್ನು ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಂಡು ತಮ್ಮ ಹೆಸರು ಮಾಡಲು ಅಧಿಕಾರಿಗಳನ್ನು ಅವಮಾನಿಸುವುದು ತಪ್ಪು.
ಘನವೆತ್ತ ಕೇಂದ್ರ ಸಚಿವರು ಈ ಬಗ್ಗೆ ಗಮನ ಹರಿಸಿ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ರಜತ್ ಆಗ್ರಹಿಸಿದ್ದಾರೆ.