ನವದೆಹಲಿ : ಪಹಲ್ಗಾಮ್ನಲ್ಲಿ ಉಗ್ರರಿಂದ ನಡೆದ ಪ್ರವಾಸಿಗರ ಮಾರಣಹೋಮದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಭಾರತದ ತಾಳ್ಮೆ ಪರೀಕ್ಷಿಸುವ ದುಸ್ಸಾಹಸಕ್ಕೆ ಕೈ ಹಾಕಿರುವ ಪಾಕಿಸ್ತಾನ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಕಳೆದ ಮಂಗಳವಾರದಿಂದಲೂ ಪಾಪಿ ರಾಷ್ಟ್ರ ತನ್ನ ಹುಂಬತನ ಮೆರೆಯುತ್ತಿದ್ದು, ಅದಕ್ಕೆ ತಕ್ಕ ಉತ್ತರವನ್ನು ನಮ್ಮ ಭಾರತೀಯ ಸೇನೆಯ ಯೋಧರು ನೀಡುತ್ತಿದ್ದಾರೆ.
ನಿರಂತರ ಅಪ್ರಚೋದಿತ ಗುಂಡಿನ ದಾಳಿ..
ಪಹಲ್ಗಾಮ್ ಘಟನೆಯ ಬಳಿಕ ಪಾಕಿಸ್ತಾನಿ ಪಡೆಗಳು ಸತತ ಐದನೇ ರಾತ್ರಿಯೂ ಗಡಿ ನಿಯಂತ್ರಣ ರೇಖೆಯಲ್ಲಿ ಎಲ್ಒಸಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 28-29ರ ರಾತ್ರಿ, ಪಾಕಿಸ್ತಾನಿ ಸೇನೆಯು ಕುಪ್ವಾರಾ, ಬಾರಾಮುಲ್ಲಾ ಮತ್ತು ಅಖ್ನೂರ್ ಸೆಕ್ಟರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ, ಇದರಿಂದಾಗಿ ಭಾರತೀಯ ಸೇನೆಯು ಪ್ರತಿದಾಳಿ ಪಾಕಿಗಳಿಗೆ ನಡುಕ ಹುಟ್ಟಿಸಿದೆ. ಕಳೆದ ವಾರ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಎರಡೂ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಮಧ್ಯೆ, ಪಾಕಿಸ್ತಾನವು ಎಲ್ಒಸಿ ಉದ್ದಕ್ಕೂ ಶಸ್ತ್ರಾಸ್ತ್ರಗಳ ಸಮೇತ ಗುಂಡಿನ ದಾಳಿ ನಡೆಸುತ್ತಿದ್ದು, ಇದು ಸತತ ಐದನೇ ರಾತ್ರಿಯು ಮುಂದುವರೆದಿದೆ.ಇದು ಐದನೇ ಕದನ ವಿರಾಮ ಉಲ್ಲಂಘನೆಯಾಗಿದೆ.
ಕಳೆದ ಏಪ್ರಿಲ್ 27-28ರ ಮಧ್ಯರಾತ್ರಿ, ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದವು, ಎಲ್ಒಸಿ ಉದ್ದಕ್ಕೂ ತಮ್ಮ ಕದನ ವಿರಾಮ ಉಲ್ಲಂಘನೆಯನ್ನು ಮುಂದುವರೆಸಿವೆ. ಪಾಕಿಸ್ತಾನದ ಪುಂಡರಿಗೆ ಭಾರತೀಯ ಸೇನೆಯು ಪರಿಣಾಮಕಾರಿ ಹಾಗೂ ಗಟ್ಟಿತನದಿಂದ ಸರಿಯಾದ ಉತ್ತರ ನೀಡುತ್ತಿದೆ.
ನಾವು ಕೊಳಕು ಕೆಲಸ ಮಾಡುತ್ತಿದ್ದೇವೆ ಎಂದ ಖ್ವಾಜಾ..
ಪಾಕಿಸ್ತಾನಿ ಸೇನೆಯು ಕಳೆದ ಏಪ್ರಿಲ್ 25-26 ಮತ್ತು ಏಪ್ರಿಲ್ 26-27ರ ರಾತ್ರಿಗಳಲ್ಲಿ ಎಲ್ಒಸಿಯ ಉದ್ದಕ್ಕೂ ಹಲವಾರು ಭಾರತೀಯ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು, ಇದಕ್ಕೆ ಭಾರತವೂ ಸಹ ಪ್ರತಿ ಬಾರಿಯ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಲಿದೆ. ಪಾಕಿಸ್ತಾನವೂ ಭಯೋತ್ಪಾದಕತೆಯನ್ನು ಬೆಂಬಲಿಸುವುದರ ಜೊತೆಗೆ ಉಗ್ರರಿಗೆ ನೆರವಾಗುವ ಕೊಳಕು ಕೆಲಸವನ್ನು ಮಾಡುತ್ತಿದೆ, ಸುಮಾರು 3 ದಶಕಗಳಿಂದ ಈ ಹೇಸಿಗೆ ತಿನ್ನುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಅಲ್ಲಿನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಈಗಾಗಲೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಈ ಕೃತ್ಯವನ್ನು ನಾವು ಅಮೆರಿಕ ಹಾಗೂ ಬ್ರಿಟನ್ ದೇಶಗಳಿಗೋಸ್ಕರ ಮಾಡುತ್ತಿದ್ದೇವೆ ಎಂದು ಆತ ತಮ್ಮ ದೇಶ ಮಾಡುವ ನೀಚ ಕೆಲಸವನ್ನು ಬಯಲಿಗೆಳಿದಿದ್ದನು.
ಪಾಕ್ಗೆ ಮರ್ಮಾಘಾತ ನೀಡಿದ್ದ ಭಾರತ..!
ಇನ್ನೂ ಇದಕ್ಕೂ ಮುನ್ನ ಭಿಕ್ಷೆ ಬೇಡಿ ದಿನಗಳನ್ನು ದೂಡುತ್ತಿದ್ದರೂ, ಭಾರತದ ಮೇಲೆ ಇಲ್ಲದ ಭಂಡತನ ತೋರುತ್ತಿರುವ ಪಾಪಿಸ್ತಾನಕ್ಕೆ ಭಾರತವು ದೊಡ್ಡ ಆಘಾತ ನೀಡಿತ್ತು. ಐತಿಹಾಸಿಕ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು, ಪಾಕಿಸ್ತಾನಿಗಳ ವೀಸಾ ರದ್ಧತಿ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿತ್ತು. ಇದರಿಂದ ಇನ್ನಷ್ಟು ಕಂಗಾಲಾಗಿ ಹೋಗಿರುವ ಉಗ್ರರ ರಾಷ್ಟ್ರ ದಿನಕ್ಕೊಂದರಂತೆ ಭಾರತಕ್ಕೆ ಗೊಡ್ಡು ಬೆದರಿಕೆಯನ್ನು ಹಾಕುತ್ತಿದೆ. ಇದಕ್ಕೆ ತಕ್ಕ ಉತ್ತರ ಹಾಗೂ ಪ್ರತಿಕ್ರಿಯೆಯನ್ನು ನೀಡಲು ಭಾರತೀಯ ಸೇನೆಯು ಸರ್ವ ಸನ್ನದ್ಧವಾಗಿ ನಿಂತಿದ್ದು, ಕೇವಲ ಇನ್ನೇನು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ರೆ ಸಾಕು ಪಾಪಿ ರಾಷ್ಟ್ರ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎನ್ನುವುದು ಸಾಕಷ್ಟು ಭಾರತೀಯರ ಅಭಿಪ್ರಾಯವಾಗಿದೆ.
48 ಪ್ರವಾಸಿ ತಾಣಗಳು ಬಂದ್..
ಕಳೆದ ವಾರ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಹೆಚ್ಚಿನ ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಾಶ್ಮೀರದಾದ್ಯಂತ 87 ಪ್ರವಾಸಿ ತಾಣಗಳಲ್ಲಿ 48 ಸ್ಥಳಗಳನ್ನು ಮುಚ್ಚಿದೆ. ಪಹಲ್ಗಾಮ್ ದಾಳಿಯ ನಂತರ ಕಣಿವೆಯಲ್ಲಿ ಕೆಲವು ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಸ್ಥಳೀಯ ಸರ್ಕಾರದ ಮೂಲಗಳು ದೃಢಪಡಿಸಿದ್ದು, ಹಾಗೂ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ದಾಳಿಯ ನಂತರ ಕಣಿವೆಯಲ್ಲಿ ಸಕ್ರಿಯ ಭಯೋತ್ಪಾದಕರ ಮನೆಗಳನ್ನು ನಾಶಪಡಿಸಿದ್ದಕ್ಕೆ ಪ್ರತೀಕಾರವಾಗಿ ಭಯೋತ್ಪಾದಕರು ದೊಡ್ಡ ಪ್ರಮಾಣದಲ್ಲಿ, ಅತಿ ಪರಿಣಾಮಕಾರಿ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ. ಇನ್ನಷ್ಟು ಜನರನ್ನು ಕೊಲ್ಲಲು ಸಂಚು ಹಾಕಿದ್ದಾರೆ ಎಂದು ನಿರಂತರ ಗುಪ್ತಚರ ವರದಿಗಳು ಹೇಳುತ್ತಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭದ್ರತಾ ಪಡೆಗಳು ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನಿಂದ ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ದಾಲ್ ಸರೋವರ ಪ್ರದೇಶಗಳು ಸೇರಿದಂತೆ ಸೂಕ್ಷ್ಮ ಪ್ರವಾಸಿ ಸ್ಥಳಗಳಿಗೆ ಫಿದಾಯಿನ್ ವಿರೋಧಿ ದಳಗಳನ್ನು ನಿಯೋಜಿಸಿವೆ. ಪಹಲ್ಗಾಮ್ ದಾಳಿಯ ಬಳಿಕ ಫುಲ್ ಅಲರ್ಟ್ ಆಗಿರುವ ಭದ್ರತಾ ಪಡೆಗಳು ಕಣಿವೆ ರಾಜ್ಯದಾದ್ಯಂತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.