ರಾಜೀನಾಮೆ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ

ಉತ್ತರಾಖಂಡ : ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ ಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.

ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿ ಉಳಿದಿರುವ ವೇಳೆ, ತ್ರಿವೇಂದ್ರ ಸಿಂಗ್​ ರಾವತ್​ ಅವರ ಕಾರ್ಯಶೈಲಿ ಬಗ್ಗೆ ಪಕ್ಷದ ಹಲವಾರು ಸಚಿವರು ಮತ್ತು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರದಲ್ಲಿನ ಈ ಬೆಳವಣಿಗೆ ಹಿನ್ನಲೆಯಲ್ಲೇ ದೆಹಲಿಗೆ ತೆರಳಿದ್ದ ಅವರು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದರು.

ರಾಜೀನಾಮೆ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತ್ರಿವೇಂದ್ರ ಸಿಂಗ್ ರಾವತ್, ನಾಲ್ಕು ವರ್ಷಗಳ ಕಾಲ ಉತ್ತರಾಖಂಡದ ‘ದೇವ ಭೂಮಿ’ಯ ಸೇವೆ ಮಾಡಲು ಪಕ್ಷ ನನಗೆ ಅವಕಾಶ ನೀಡಿತು. ಇದು ನನ್ನ ಜೀವನದ ಸುವರ್ಣಾವಕಾಶ. ಪಕ್ಷವು ನನ್ನನ್ನು ಇಷ್ಟು ದೊಡ್ಡ ಜವಾಬ್ದಾರಿಯಿಂದ ಗೌರವಿಸುತ್ತದೆ ಎಂಬುದನ್ನು ನಾನು ಊಹಿಸಿರಲಿಲ್ಲ ಎಂದರು.

ರಾಜ್ಯದ ಮುಂದಿನ ನಾಯಕತ್ವದ ಆಯ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಎಲ್ಲ ಬಿಜೆಪಿ ಶಾಸಕರು ನಾಳೆ ಬೆಳಿಗ್ಗೆ 10 ಗಂಟೆಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಸೇರಲಿದ್ದಾರೆ.

About The Author