ದಳಪತಿಗಳ ಭೇಟಿಯ ಬಗ್ಗೆ ಸತೀಶ್‌ ಹೇಳಿದ್ದೇನು..? ಸಿಎಂ ರೇಸ್‌ ಬಗ್ಗೆ ಜಾರಕಿಹೊಳಿ ನಿಗೂಢ ನಡೆ ಏನು..?

Political News: ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಸಚಿವ ಸತೀಶ್‌ ಜಾರಕಿಹೊಳಿ ಅವರ ದೆಹಲಿ ಭೇಟಿಯು ಅನೇಕ ಊಹಾಪೋಹಗಳು, ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ ಅಂತಿಮವಾಗಿ ಈ ಎಲ್ಲದರ ಬಗ್ಗೆ ಜಾರಕಿಹೊಳಿ ಬೋಲ್ಡ್‌ ಆಗಿಯೇ ಉತ್ತರಿಸಿದ್ದಾರೆ.

ಇನ್ನೂ ದೆಹಲಿಯ ಪ್ರವಾಸದ ಬಳಿಕ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಸಿಎಂ ಹುದ್ದೆಯ ಮೇಲೆ ಕ್ಲೈಂ ಮಾಡುವವರೇ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂತ ಹೇಳಿದ್ದಾರೆ. ಡಿಸಿಎಂ ಹಾಗೂ ಸುರೇಶ್‌ ಅವರೇ ಹೇಳಿದ್ದಾರೆ ಅಂದ ಮೇಲೆ ಆ ಚರ್ಚೆಯೇ ಈಗ ಇಲ್ಲ. ಆದರೆ ಎಲ್ಲರಿಗೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕ್ಲೈಂ ಮಾಡಲು ಅವಕಾಶವಿದೆ. ಎಲ್ಲರೂ ಆರ್‌ಎಸಿ ಅಂದರೆ ರಿಸರ್ವೇಶನ್‌ ಅಗೆನ್ಸ್ಟ್‌ ಕ್ಯಾನ್ಸಲೇಷನ್‌ ಟಕೆಟ್‌ ಅನ್ನು ಇಟ್ಟುಕೊಂಡೇ ಸಿಎಂ ಪೋಸ್ಟ್‌ಗಾಗಿ ಎದುರು ನೋಡುತ್ತಿದ್ದಾರೆ. ಅಂದಹಾಗೆ ಆ ಟಿಕೆಟ್‌ ನಮ್ಮ ಕಡೆಯೂ ಇದೆ, 2028ರ ವೇಳೆಗೆಯೂ ಆರ್‌ಎಸಿ ಆಗಬಹುದು. ಹಾಗೆಂದ ಮಾತ್ರಕ್ಕೆ ಆರ್‌ಎಸಿಯಲ್ಲಿ ಟಿಕೆಟ್‌ ಸಿಕ್ಕರೂ ಅದು ಕನ್ಫರ್ಮ್‌ ಆಗಿರುವುದಿಲ್ಲ ಎಂದು ಮುಖ್ಯಮಂತ್ರಿಯ ಹುದ್ದೆಯ ಬಗ್ಗೆ ಮಾರ್ಮಿಕವಾಗಿಯೇ ನುಡಿದಿದ್ದಾರೆ.

ನನಗೆ ಸಿಎಂ ಸ್ಥಾನ ಬೇಗನೇ ಸಿಗಬಹುದು..

ಅಲ್ಲದೆ ಒಂದು ವೇಳೆ ಟ್ರಾಫಿಕ್‌ ಜಾಮ್‌ನಿಂದ ಮೆಜೆಸ್ಟಿಕ್‌ನಲ್ಲಿ ಕುಳಿತು ಬಿಟ್ಟರೆ ಸ್ಟೇಷನ್‌ಗೆ ಬರುವುದು ಲೇಟ್‌ ಆಗುತ್ತದೆ. ಜಾಮ್‌ ಆದರೆ ನಮಗೂ ಚಾನ್ಸ್‌ ಸಿಕ್ಕರೂ ಸಿಗಬಹುದು ಅದರ ಬಗ್ಗೆ ಏನಂತ ಹೇಳುವುದಕ್ಕೆ ಆಗುವುದಿಲ್ಲ. ಆದರೆ ನನಗೆ ಸ್ವಲ್ಪ ಬೇಗನೇ ಸಿಗಬಹುದು ಎಂದು ನಿಗೂಢ ಹೇಳಿಕೆ ಹೇಳಿದ್ದಾರೆ. ಇನ್ನೂ ನಮ್ಮದೇ ಗಾಡಿ ಫುಲ್ ಇದೆ. ಜೆಡಿಎಸ್‌ನ 18 ಶಾಸಕರನ್ನು ತೆಗೆದುಕೊಂಡು ನಾವೇನು ಮಾಡೋಣ, ನಮ್ಮ ಗಾಡಿ ಓವರ್ ಲೋಡೆಡ್ ಇದ್ರೂ ಸಹ ಇಲ್ಲಿಯೇ ಸಿಎಂ ಆಗಬೇಕು, ಅಧ್ಯಕ್ಷನೂ ಇಲ್ಲಿಯೇ ಆಗಬೇಕು ‌‌ಹೀಗಾಗಿ ಸದ್ಯಕ್ಕೆ ವೇಯ್ಟಿಂಗ್ ಲಿಸ್ಟ್ ನಲ್ಲಿ ಇದ್ದೇವೆ ಎಂದು ಅವರು ಪರೋಕ್ಷವಾಗಿ ಸಿಎಂ ಕುರ್ಚಿಯ ಬಗ್ಗೆ ಒಲವು ತೋರಿದ್ದಾರೆ.

ಹೆಚ್‌.ಡಿ.ಕೆ ಭೇಟಿ ಅನಿರೀಕ್ಷಿತವಾದದ್ದು..

ಅಂದಹಾಗೆ ನಾನು 4 ದಿನಗಳ ಕಾಲ ದೆಹಲಿಗೆ ಹೋಗಿದ್ದೆ ಆ ಭೇಟಿಯು ರಾಜ್ಯದಲ್ಲಿ ಭಾರೀ ಸದ್ದು ಮಾಡಿದೆ. ಅಲ್ಲಿ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣು ಗೋಪಾಲ್‌ ಅವರನ್ನು ಭೇಟಿಯಾಗಿದ್ದೇನೆ. ಆದರೆ ನಮ್ಮ ಭೇಟಿಯಲ್ಲಿ ರಾಜ್ಯದ ಹನಿ ಟ್ರ್ಯಾಪ್‌ ವಿಚಾರವನ್ನು ಪ್ರಸ್ತಾಪಿಸಿಲ್ಲ, ಅಲ್ಲದೆ ಅದರ ಬಗ್ಗೆ ದೂರನ್ನೂ ಸಹ ನೀಡಿಲ್ಲ. ಇನ್ನೂ ಸಚಿವ ಕೆ. ಎನ್. ರಾಜಣ್ಣ ಹನಿಟ್ರ್ಯಾಪ್ ಕೇಸ್ ಬೇರೆ, ರಾಜೇಂದ್ರ ಕೇಸ್ ಬೇರೆಯಾಗಿದೆ. ಈ ಎರಡೂ ಒಂದಕ್ಕೊಂದು ಸಂಬಂಧ ಇಲ್ಲ. ರಾಜೇಂದ್ರ ಕೇಸ್ ಸ್ವಲ್ಪ ಹಳೆಯದಾಗಿದೆ ಎರಡು ತಿಂಗಳು ಮೊದಲಿನದು. ಅವರಿಗೆ ಯಾರೋ ಕರೆ ಮಾಡಿ ಬೆದರಿಕೆ ಹಾಕ್ತಿದ್ರು ಅನ್ನೋದು ಅವರ ದೂರು. ಹನಿ ಟ್ರ್ಯಾಪ್‌ಗೂ ಇದಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ಇನ್ನೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅದೊಂದು ಅನಿರೀಕ್ಷಿತ ಭೇಟಿಯಾಗಿದೆ, ನಮ್ಮ ರಾಜ್ಯಕ್ಕೆ ಹಾಗೂ ನಮ್ಮ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ದಿ ಯೋಜನೆಗಳ ಕುರಿತು ಚರ್ಚೆ ಮಾಡಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ರಾಜಕೀಯ ಚರ್ಚೆಗಳಿಗೆ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

About The Author