Political News: ರಾಜ್ಯದಲ್ಲಿ ಹೆಬ್ಬೆಟ್ಟು ಗೃಹ ಸಚಿವರು ಇದ್ದಾರೆ : ಹೆಚ್.ಡಿ.ಕುಮಾರಸ್ವಾಮಿ

Mandya News: ಮಂಡ್ಯ: ರಾಜ್ಯದಲ್ಲಿ ಹೆಬ್ಬೆಟ್ಟು ಗೃಹ ಸಚಿವರು ಇದ್ದಾರೆ. ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಸ್ವತಃ ಅವರಿಗೇ ಗೊತ್ತಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ದಿಶಾ ಸಭೆಗೆ ಮುನ್ನ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ರಾಜ್ಯ ಸರಕಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಪ್ರಕರಣ ನಿರ್ವಹಿಸಿದ ಬಗ್ಗೆ ಕಿಡಿಕಾರಿದರು.

ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಭೇಟಿ ಮಾಡಲು ಪೊಲೀಸ್ ಸ್ಟೇಷನ್‌ಗೆ ಬಂದ ಬಿಜೆಪಿ ನಾಯಕರಿಗೆ ಕೂತು ಮಾತನಾಡಲು ಅವಕಾಶ ಕೊಟ್ಟರು ಎಂದು ಪೊಲೀಸ್ ಅಧಿಕಾರಿಯನ್ನು ರಾಜ್ಯ ಸರಕಾರ ಸಸ್ಪೆಂಡ್ ಮಾಡಿದೆ. ಆದರೆ, ಸಿ.ಟಿ.ರವಿ ತಲೆ ಹೊಡೆದು ರಕ್ತ ಬರುವಂತೆ ಮಾಡಿದವರ ವಿರುದ್ಧ ಕ್ರಮ ಏನು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿರುವ ಗೃಹ ಸಚಿವ ಹೆಬ್ಬೆಟ್ಟು. ಅವರ ಇಲಾಖೆಯಲ್ಲಿ ಏನು ನಡೆಯುತ್ತಿದೆ ಸ್ವತಃ ಅವರಿಗೇ ಗೊತ್ತಿಲ್ಲ. ಕಳೆದ ಎರಡು ದಿನಗಳಿಂದ ಬರುತ್ತಿರುವ ಚಿನ್ನ ದೋಖಾ ಕೇಸುಗಳ ವಿರುದ್ಧ ಗೃಹ ಇಲಾಖೆಯ ಏನು ಕ್ರಮ ಕೈಗೊಂಡಿದೆ. ಇವರು ಬರೀ ಗಾಂಧೀಜಿ ಅವರ ಹೆಸರು ಹೇಳಿದರೆ ಆಗಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು ಕೇಂದ್ರ ಸಚಿವರು.

ಬೆಳಗಾವಿಯಲ್ಲಿ ಕೋಟ್ಯಂತರ ರೂಪಾಯಿ ಜನಗಳ ದುಡ್ಡು ಖರ್ಚು ಮಾಡಿ ಏನು ಸಂದೇಶ ಕೊಡುತ್ತಿದ್ದಾರೆ ಇವರು. ಇದು ನಾಗರೀಕ ಸರಕಾರವಾ? ಇಂತಹ ವಾತಾವರಣ ಹಿಂದೆಂದೂ ರಾಜ್ಯದಲ್ಲಿ ಇರಲಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಎಲ್ಲಿಗೆ ಹೋಗಿ ನಿಲ್ಲಲಿದೆ? ಎಂದು ಅವರು ಕೇಳಿದರು.

About The Author