Political News: ನಾನು ಬದುಕಿರುವವರೆಗೂ ನನ್ನ ಉತ್ತರಾಧಿಕಾರಿಯನ್ನು ಘೋಷಣೆ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಈ ಮೂಲಕ ಲಕ್ನೋದಲ್ಲಿ ನಡೆದ ತಮ್ಮ ಪಕ್ಷದ ಅಖಿಲ ಭಾರತ ಮಟ್ಟದ ಸಭೆಯಲ್ಲಿ ಅವರು ಹಲವು ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.
ನಾನು ಇರೋವರೆಗೂ ಉತ್ತರಾಧಿಕಾರಿ ಘೋಷಿಸಲ್ಲ..
ಅಳಿಯ ಔಟ್, ಸಹೋದರ ಇನ್..
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ತಮ್ಮ ಪಕ್ಷಕ್ಕೆ ಹಿನ್ನಡೆಯಾಗುವುದನ್ನು ಅರಿತು ಮಾಯಾವತಿ ತಮ್ಮ ಸಹೋದರ ಅಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಸೇರಿದಂತೆ ಎಲ್ಲ ಹುದ್ದೆಗಳಿಂದಲೂ ವಜಾಗೊಳಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಿಂದ ಗುಂಪುಗಾರಿಕೆ ಹಾಗೂ ಪಕ್ಷ ವಿರೋಧಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಆರೋಪದ ಮೇಲೆ ಆಕಾಶ್ ಆನಂದ್ ಅವರ ಮಾವ ಅಶೋಕ್ ಸಿದ್ದಾರ್ಥ್ ಅವರನ್ನು ಪಕ್ಷದಿಂದ ಮಾಯಾವತಿ ಹೊರಹಾಕಿದ್ದರು. ಆಕಾಶ್ ಆನಂದ್ ರಾಜಕೀಯದಲ್ಲಿ ಅಶೋಕ್ ಸಿದ್ದಾರ್ಥ್ ಪ್ರಭಾವ ಬೀರುತ್ತಿದ್ದಾರೆ. ಅಲ್ಲದೆ ಆಕಾಶ್ ಆನಂದ್ ಪತ್ನಿ ಪ್ರಜ್ಞಾ ಮೂಲಕ ಅಶೋಕ್ ಸಿದ್ದಾರ್ಥ್ ತಮ್ಮ ಪ್ರಾಬಲ್ಯ ಮೆರೆಯುತ್ತಿದ್ದಾರೆ ಎಂದು ಮಾಯಾವತಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಆನಂದ್ ಕುಮಾರ್, ರಾಮ್ ಜಿ ಗೌತಮ್ರಿಗೆ ನೂತನ ಹುದ್ದೆ..
ರಾಷ್ಟ್ರ ಮಟ್ಟದ ಕಾರ್ಯರ್ತರ ಸಭೆಯಲ್ಲಿ ಮಹತ್ವದ ಘೋಷಣೆ..
ಮಾಯಾವತಿ ನಿರ್ಧಾರಕ್ಕೆ ಬಿಎಸ್ಪಿಯಲ್ಲಿ ಸಂಚಲನ..
ಇನ್ನೂ ಪ್ರಮುಖವಾಗಿ ಕಳೆದ ವರ್ಷ ಆಕಾಶ್ ಆನಂದ್ ಅವರನ್ನು ಮಯಾವತಿ ಅವರ ರಾಜಕೀಯ ಉತ್ತರಾಧಿಕಾರಿ ಎನ್ನಲಾಗುತ್ತಿತ್ತು. ಆದರೆ ಇದೀಗ ಮುಂಬರುವ ಚುನಾವಣೆಗಳು, ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಅಲ್ಲದೆ ಅಳಿಯನಿಂದ ತೆರವಾದ ಸ್ಥಾನಕ್ಕೆ ತಮ್ಮ ಸಹೋದರ ಆನಂದ್ ಕುಮಾರ್ ಮತ್ತು ರಾಮ್ಜಿ ಗೌತಮ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ಮಾಯಾವತಿ ನೇಮಕ ಮಾಡಿರುವುದು ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.




