Tuesday, November 18, 2025

Latest Posts

ಸಿಎಂ ವಿರುದ್ಧ 500 ಕಿಕ್‌ ಬ್ಯಾಕ್‌ ಸ್ಫೋಟಕ ಆರೋಪ.. : ದಾಖಲೆ ಸಮೇತ ವಿರೋಧಿಗಳಿಗೆ ಸಿದ್ದು ತಿರುಗೇಟು

- Advertisement -

Political News: ರಾಜಕೀಯದಲ್ಲಿ ಕಳಂಕ ರಹಿತವಾಗಿದ್ದು, ಅದೇ ರೀತಿ ನಿವೃತ್ತಿ ಪಡೆಯಬೇಕೆಂದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟಗಳು ತಪ್ಪುತ್ತಿಲ್ಲ. ಮುಡಾ ಹಗರಣದ ಬಳಿಕ ಇದೀಗ ಅವರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಗಣಿ ಗುತ್ತಿಗೆ ನವೀಕರಣದ ವಿಚಾರದಲ್ಲಿ ಸಿದ್ದರಾಮಯ್ಯ 500 ಕೋಟಿ ರೂಪಾಯಿ ಕಿಕ್‌ ಬ್ಯಾಕ್ ಪಡೆದಿರುವ ಬಾಂಬ್‌ ಒಂದನ್ನು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎನ್ನುವವರು ಸಿಡಿಸಿದ್ದಾರೆ.

ಇನ್ನೂ ಈ ಕುರಿತು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಅಲ್ಲದೆ ತಾವು ಮೊದಲ ಬಾರಿ ಸಿಎಂ ಇದ್ದಾಗ ಸಿದ್ದರಾಮಯ್ಯ ಒಟ್ಟು 8 ಗಣಿ ಕಂಪನಿಗಳ ಗುತ್ತಿಗೆ ನವೀಕರಣಕ್ಕೆ ಅನುಮೋದನೆ ನೀಡಿದ್ದರಿಂದ ರಾಜ್ಯದ ಬೊಕ್ಕಸಕ್ಕೆ 6000 ಕೋಟಿ ರೂಪಾಯಿ ಹಾನಿಯಾಗುವಂತೆ ಮಾಡಿದ್ದಾರೆ. ಅಂದಹಾಗೆ ಈ ಎಂಟು ಕಂಪನಿಗಳ ಗುತ್ತಿಗೆಯನ್ನು ಹರಾಜು ಪ್ರಕ್ರಿಯೆ ಮಾಡದೆ ಅಕ್ರಮವಾಗಿ ನವೀಕರಣ ಮಾಡಿದ್ದರು ಎಂದು ತಮ್ಮ ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಉಲ್ಲೇಖಿಸಿದ್ದಾರೆ.

ರಾಜ್ಯ ಸರ್ಕಾರದ ಆದಾಯಕ್ಕೆ ಸಾಕಷ್ಟು ನಷ್ಟ ಮಾಡಿರುವ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿ ಸೆಕ್ಷನ್‌ 7, 9,11,12 ಮತ್ತು 15, ಭಾರತೀಯ ನ್ಯಾಯಸಂಹಿತೆ ಅಡಿಯ ಸೆಕ್ಷನ್‌ಗಳಾದ 59, 61,42, 201, 227,228, 229, 239, 314, 316 ಒಳಗೊಂಡಂತೆ ಹಲವು ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಒತ್ತಾಯಿಸಿದ್ದಾರೆ. ಇನ್ನೂ ಈ ಹಿಂದೆ ಇದಕ್ಕೆ ಸಂಬಂಧಿಸಿದ್ದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಆದರೆ ಆರೋಪಗಳಲ್ಲಿ ಹುರುಳಿಲ್ಲ ಎಂಬ ಕಾರಣ ನೀಡಿ ಲೋಕಾಯುಕ್ತ ಸಂಸ್ಥೆ ಪ್ರಕರಣವನ್ನು ರದ್ದುಗೊಳಿಸಿತ್ತು. ಆದರೆ ಇದೀಗ ಮತ್ತೆ ಈ ಪ್ರಕರಣದ ಕುರಿತು ದೂರು ದಾಖಲಾಗಿದ್ದು, ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸ..

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅಲ್ಲಗಳೆದಿದ್ದಾರೆ. ಅಲ್ಲದೆ ಗಣಿ ಗುತ್ತಿಗೆ ನವೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ. ಇಂತಹ ಅಪ ಪ್ರಚಾರಗಳು ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವು ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. 2015 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಎಂಎಂಡಿಆರ್‌-1957 ಕಾಯ್ದೆಯಲ್ಲಿ ನವೀಕರಣವು 20 ವರ್ಷಗಳ ಅವಧಿಗೆ ಅನ್ವಯವಾಗುತ್ತಿತ್ತು. ಅದರ ಪ್ರಕಾರ ಸರ್ಕಾರವು ಗಣಿ ಗುತ್ತಿಗೆಯ ನವೀಕರಣಕ್ಕೆ ಫಾರೆಸ್ಟ್‌ ಕ್ಲಿಯರೆನ್ಸ್‌ನ್ನು ಪಡೆದುಕೊಳ್ಳುವ ಸಲುವಾಗಿ ಮಾತ್ರ ಷರತ್ತುಬದ್ಧ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಅಲ್ಲದೆ ದಿನಾಂಕ: 12.01.2015 ರಂದು ಕೇಂದ್ರ ಸರ್ಕಾರವು ಎಂಎಂಡಿಆರ್‌ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಯನ್ನು ತಂದ ಕಾರಣ ವಿವಿಧ ಹಂತದ ಪರಿಶೀಲನೆಗಳನ್ನು ನಡೆಸಿ, ದಿನಾಂಕ: 09.02.2015 ರಂದು ಗಣಿ ಗುತ್ತಿಗೆ ನವೀಕರಣಕ್ಕಾಗಿ ನೀಡಿದ್ದ ಷರತ್ತುಬದ್ಧ 8 ಕಂಪನಿಗಳ ತಾತ್ವಿಕ ಅನುಮತಿ ಪತ್ರಗಳು ಊರ್ಜಿತವಲ್ಲ ಎಂದು ತೀರ್ಮಾನಿಸಿ ಅವುಗಳನ್ನು ರದ್ದುಪಡಿಸಿ, ತಿದ್ದುಪಡಿ ಕಾಯ್ದೆಯಂತೆ ಕ್ರಮವಹಿಸಲು ಸೂಚಿಸಲಾಯಿತು. ನಂತರ, ಗಣಿ ಇಲಾಖೆಯು ಸಲ್ಲಿಸಿದ ಡೀಮ್ಡ್‌ ಅವಧಿ ವಿಸ್ತರಣೆ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ರಾಜ್ಯ ಸರ್ಕಾರವು ಒಂದು ಪ್ರಕರಣವನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಡೀಮ್ಡ್‌ ಅವಧಿ ವಿಸ್ತರಣೆಗೆ ಪರಿಗಣಿಸದೆ ರದ್ದುಪಡಿಸಲಾಗಿದೆ. ಉಳಿದ 7 ಪ್ರಕರಣಗಳಿಗೆ ಶಾಸನಬದ್ಧವಾದ ಅರಣ್ಯ, ಪರಿಸರ ಮುಂತಾದ ತೀರುವಳಿ ಪತ್ರಗಳನ್ನು ಹಾಜರುಪಡಿಸುವ, ಬೇಬಾಕಿ ಪತ್ರ ಸಲ್ಲಿಸುವ ಹಾಗೂ ಸಿಬಿಐ, ಎಸ್‌ಐಟಿ ಸೇರಿದಂತೆ ವಿವಿಧ ಸಂಸ್ಥೆಗಳ ತನಿಖೆಯ ಅಂತಿಮ ವರದಿಯನ್ನು ಆಧರಿಸಿ ಸರ್ಕಾರದ ಕ್ರಮಕ್ಕೆ ಬದ್ಧರಾಗಲು ಷರತ್ತು ವಿಧಿಸಿ ಡೀಮ್ಡ್‌ ಅವಧಿ ವಿಸ್ತರಣೆ ಪತ್ರ ನೀಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಕ್ಕೆ ನಯಾಪೈಸೆಯಷ್ಟೂ ನಷ್ಟವಾಗಿಲ್ಲ..!

ಆದರೆ, ಈ 7 ಕಂಪನಿಗಳ ಪೈಕಿ 2 ಕಂಪನಿಗಳು ಶಾಸನಬದ್ಧವಾದ ತಿರುವಳಿಗಳನ್ನು ಸಲ್ಲಿಸದ ಕಾರಣ, ಯಾವುದೇ ಗಣಿಗಾರಿಕೆ ಹಕ್ಕುಗಳನ್ನು ನೀಡಿರುವುದಿಲ್ಲ. ಉಳಿದ 5 ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಬಿಜೆಪಿ ಆಡಳಿತದ ಅವಧಿಯಲ್ಲಿ ಅಂದರೆ 2020 ಹಾಗೂ 2021 ರಲ್ಲಿ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ. ಉಳಿದ ಎರಡು ಪ್ರಕರಣಗಳನ್ನು 2016 ಮತ್ತು 2018 ರಲ್ಲಿ ಪೂರಕ ಕರಾರು ಪತ್ರದ ಮುಖಾಂತರ ಷರತ್ತುಬದ್ಧ ಡೀಮ್ಡ್‌ ವಿಸ್ತರಣೆಯ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ. ಹಾಗಾಗಿ, ಈ ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ನಷ್ಟವಾಗಲಿಲ್ಲ. ಈ ಅವಧಿಯಲ್ಲಿ ಒಂದು ಹಿಡಿಯಷ್ಟೂ ಅದಿರು ತೆಗೆದಿಲ್ಲ ಎಂದು ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಈ ಕುರಿತಂತೆ ಈ ಹಿಂದೆ ಕೂಡ ವಿರೋಧ ಪಕ್ಷಗಳವರು ಹಾಗೂ ಕೆಲವು ವ್ಯಕ್ತಿಗಳು ಹಲವು ಸಂಸ್ಥೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲವೆಂದು ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ. ವಿರೋಧ ಪಕ್ಷಗಳವರು ಸದರಿ ವಿಚಾರವನ್ನು ಸದನದಲ್ಲೂ ಪ್ರಶ್ನಿಸಿದ್ದರು. ಈಗಿನ ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಮಂತ್ರಿಯಾಗಿರುವ ಕುಮಾರಸ್ವಾಮಿಯವರು ದಿನಾಂಕ: 14.01.2018 ರಂದು ಪತ್ರಿಕಾ ಗೋಷ್ಠಿಯನ್ನೂ ಮಾಡಿದರು. ಆದರೆ, ಈ ಯಾವುದೇ ಪ್ರಕರಣಗಳಲ್ಲಿ ಹುರುಳೆ ಇರಲಿಲ್ಲ. ಏಕೆಂದರೆ, ಈ ಎಲ್ಲಾ 8 ಪ್ರಕರಣಗಳನ್ನು ಹೊಸ ಸುಗ್ರೀವಾಜ್ಞೆಯ ನಿಯಮಾವಳಿಗಳಿಗೆ ಅನುಗುಣವಾಗಿ ಕ್ರಮವಹಿಸಲಾಗಿದೆ. ಅವಧಿ ಮುಗಿದ ಗಣಿ ಗುತ್ತಿಗೆಗಳನ್ನು ನಂತರ ನಿಯಮಾನುಸಾರ ಹರಾಜಿಗೆ ಒಳಪಡಿಸಿ ವಿಲೇವಾರಿ ಮಾಡಲಾಗಿದೆ. ಸುಮಾರು 10 ವರ್ಷಗಳ ನಂತರ ಈ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ಜಗಿಯಲು ಪ್ರಾರಂಭಿಸಿದ್ದಾರೆ. ಹುರುಳಿಲ್ಲದ ವಿಷಯಕ್ಕೆ ವಿಷ ತುಂಬಿ ನಾಡಿನ ಜನರ ಮೆದುಳನ್ನು ಕಲುಷಿತಗೊಳಿಸಲು ಹೊರಟಿರುವ ದುಷ್ಟ ರಾಜಕೀಯ ಪಿತೂರಿಗಳನ್ನು ನಾಡಿನ ಪ್ರಜ್ಞಾವಂತ ಜನ ನಂಬಬಾರದು ಅಂತ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಟ್ವಿಟ್‌ ಮೂಲಕ ತಿಳಿಸಿದ್ದಾರೆ.

- Advertisement -

Latest Posts

Don't Miss