Dubai: ಯಶಸ್ವಿಯಾಗಿ ನಡೆದ ಒಕ್ಕಲಿಗರ ಸಂಘದ Dubai UAE ‘ಸ್ನೇಹ ಸಮ್ಮಿಲನ’!

International News: ಒಕ್ಕಲಿಗರ ಸಂಘ ದುಬೈ ವತಿಯಿಂದ ಅನಿವಾಸಿ ಗೌಡ ಕುಲ ಬಾಂಧವರು ಸೇರಿಕೊಂಡು ನಡೆಸಿದ ಸ್ನೇಹ ಸಮ್ಮಿಲನ ಕಾರ್ಯಕ್ರಮ, ಡಿಸೆಂಬರ್ 2ರಂದು ದುಬೈ ಬಸೇರ ಫಾರ್ಮ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಯುಎಇ ಒಕ್ಕಲಿಗರ ಅಧಿಕೃತ ವೇದಿಕೆಯಾಗಿರುವ ಒಕ್ಕಲಿಗರ ಸಂಘ ದುಬೈನ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಗುರುದೇವ ನಿರ್ಮಲಾನಂದ ಸ್ವಾಮೀಜಿಯವರ ಆಶಿರ್ವಾದೊಂದಿಗೆ ಪ್ರಾರಂಭವಾಯಿತು. ಸಮುದಾಯ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮಗಳು, ಮಕ್ಕಳ ಮನೋರಂಜನಾ ಕಾರ್ಯಕ್ರಮಗಳು ತುಂಬಾ ಆಕರ್ಷಕವಾಗಿ ನಡೆದವು. ಸಮುದಾಯದ ಹಲವು ಪ್ರತಿಭಾನ್ವಿತ ಮಕ್ಕಳ ಕೌಶಲ್ಯಗಳ ಅನಾವರಣಕ್ಕೆ ಇದು ಸುಂದರ ವೇದಿಕೆಯಾಯಿತು‌.

ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕಲಿಗರ ಸಂಘ ದುಬೈ ಅಧ್ಯಕ್ಷ ಕಿರಣ್ ಗೌಡ, ‘ಮರುಭೂಮಿ ನಾಡು ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಗೌಡ ಕುಲ ಬಾಂಧವರು ಒಂದೇ ಕುಟುಂಬದ ರೀತಿ ಒಗ್ಗಟ್ಟಿನಿಂದ ಪರಸ್ಪರ ಪ್ರೀತಿ ಗೌರವದಿಂದ, ಗೌಡ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಾ, ಗೌಡರ ಗತ್ತನ್ನು ಎತ್ತಿಹಿಡಿಯುವ’ ಎಂದರು. ಒಕ್ಕಲಿಗರ ಸಂಘ ದುಬೈ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯಲಿರುವ ಹಲವು ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು, ಕುಟುಂಬ ಸಮೇತರಾಗಿ ಬಂದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಘದ ಪೋಷಕರಾದ ಹರೀಶ್ ಕೋಡಿ, ಉಪಾಧ್ಯಕ್ಷರಾದ ಪುಟ್ಟರಾಜು ಗೌಡ ಹಾಗೂ ಇತರ ಕೋರ್ ಕಮಿಟಿ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದರು.

About The Author