ಸಚಿವ ಸ್ಥಾನಕ್ಕೆ ಬ್ರೇಕ್ – ಡಿಕೆಶಿ ಕೊಟ್ರು ಹೊಸ ಲೆಕ್ಕಾಚಾರ!

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಅಥವಾ ಸರ್ಜರಿ ಇಲ್ಲ ಎಂಬುದು ಖಚಿತವಾಗಿದೆ. ವಾಲ್ಮೀಕಿ ಹಗರಣದ ವಿವಾದದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿ ಬಿದ್ದಿರುವ ಎರಡು ಸಚಿವ ಸ್ಥಾನಗಳ ಭರ್ತಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದ್ಯಕ್ಕೆ ತಡೆಹಿಡಿದಿದ್ದಾರೆ.

ಹೌದು, ದೆಹಲಿಗೆ ತೆರಳಿ ಉನ್ನತ ನಾಯಕರನ್ನು ಭೇಟಿ ಮಾಡಿ ಬಂದಿರುವ ಡಿ.ಕೆ. ಶಿವಕುಮಾರ್, ಈಗ ಸಚಿವ ಸಂಪುಟಕ್ಕೆ ಕೈಹಾಕಿದರೆ ಪಕ್ಷದೊಳಗೆ ಮತ್ತಷ್ಟು ಅಸಮಾಧಾನ ಹಾಗೂ ಗೊಂದಲಗಳು ಭುಗಿಲೇಳುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ಒಂದಿಬ್ಬರು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಟ್ಟರೆ ವಿರೋಧ ಎದುರಾಗಬಹುದು ಎಂಬ ಲೆಕ್ಕಾಚಾರದಲ್ಲಿ, ಸದ್ಯಕ್ಕೆ ಸಂಪುಟ ಸರ್ಜರಿಯನ್ನು ಸ್ವಲ್ಪ ಕಾಲ ಮುಂದೂಡಲು ತಂತ್ರ ರೂಪಿಸಿದ್ದಾರೆ ಎಂದು ಕೇಳಿ ಬರ್ತಾ ಇದೆ.

ಆದರೆ, ಖಾಲಿ ಇರುವ ಸ್ಥಾನಗಳನ್ನು ಹಾಗೇ ಬಿಡುವುದಕ್ಕೂ ಸಾಧ್ಯವಿಲ್ಲ. ಹಾಗಾಗಿ, ಸಂಪುಟ ವಿಸ್ತರಣೆಗೂ ಮುನ್ನ ಒಂದು ಹೊಸ ಯೋಜನೆ ರೂಪಿಸಿರುವ ಡಿ.ಕೆ. ಶಿವಕುಮಾರ್, ಮೊದಲು ನಿಗಮ-ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಹಾಗೂ ವಿಧಾನ ಪರಿಷತ್ತಿನ ಐದು ನಾಮನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಿದ್ದಾರೆ.

ಹೌದು, ವಿಧಾನ ಪರಿಷತ್ತಿನ 5 ನಾಮನಿರ್ದೇಶನ ಸ್ಥಾನಗಳಿಗೆ ಈಗ ಬಲವಾದ ಪೈಪೋಟಿ ಶುರುವಾಗಿದೆ. ಬರೋಬ್ಬರಿ ಇಪ್ಪತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇದರಲ್ಲಿ ಡಿ.ಕೆ. ಶಿವಕುಮಾರ್ ಅವರ ಬಾಲ್ಯ ಸ್ನೇಹಿತ ವಿ. ರವಿಚಂದ್ರನ್ ಹಾಗೂ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ. ಪ್ರಭಾಕರ್ ಅವರ ಹೆಸರುಗಳು ಸದ್ಯ ಪ್ರಮುಖವಾಗಿ ಕೇಳಿಬರುತ್ತಿವೆ.

ಇವರ ಜೊತೆಗೆ ರಮೇಶ್ ಬಾಬು ಅವರಿಗೆ ಮತ್ತೊಮ್ಮೆ ಪರಿಷತ್ ಪ್ರವೇಶ ಕಲ್ಪಿಸುವ ಸಾಧ್ಯತೆಯಿದೆ. ಯಾಕೆಂದರೆ ಈ ಹಿಂದೆ ಅವಧಿ ಮುಗಿದ ನಂತರ ಮತ್ತೆ ಮುಂದುವರಿಸುವ ಬಗ್ಗೆ ಅವರಿಗೆ ಭರವಸೆ ನೀಡಲಾಗಿತ್ತು. ಇವರಷ್ಟೇ ಅಲ್ಲದೆ ಯು.ಬಿ. ವೆಂಕಟೇಶ್, ರಾಣಿ ಸತೀಶ್, ಕಾಂತಾ ನಾಯಕ್ ಹಾಗೂ ವಿಜಯ್ ಮುಳಗುಂದ್ ಅವರ ಹೆಸರುಗಳು ಕೂಡ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿವೆ ಅಂತ ಹೇಳಲಾಗ್ತಿದೆ. ಕಲೆ, ಸಾಹಿತ್ಯ, ಸಮಾಜ ಸೇವೆ ಹಾಗೂ ಸಹಕಾರ ಕ್ಷೇತ್ರಗಳ ಗಣ್ಯರಿಗೆ ಈ ಐದು ಸ್ಥಾನಗಳಲ್ಲಿ ಅವಕಾಶ ಕಲ್ಪಿಸಲು ಉನ್ನತ ವಲಯದಿಂದ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.

ನಿಗಮ ಮಂಡಳಿ ಹಾಗೂ ಪರಿಷತ್ ನೇಮಕಾತಿಗಳ ಮೂಲಕ ಅಸಮಾಧಾನಿತರನ್ನು ಸಮಾಧಾನಪಡಿಸಿ, ಆ ಬಳಿಕ ಸಚಿವ ಸಂಪುಟಕ್ಕೆ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ರಾಜಕೀಯದ ಈ ನಡೆಗಳ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ!

About The Author