12 ರಾಶಿಗಳಲ್ಲಿ ಭಾವುಕ ಸ್ವಭಾವದ, ಸಹಾಯ ಗುಣವುಳ್ಳ, ಹೆಚ್ಚು ಸಿಟ್ಟೂ ಉಳ್ಳ ರಾಶಿ ಅಂದ್ರೆ ಕರ್ಕಾಟಕ ರಾಶಿ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರ ಮನಸ್ಕಾರಕನಾಗಿದ್ದು, ಕರ್ಕ ರಾಶಿಯವರ ಮನಸ್ಸು ಚಂಚಲವಾಗಿರುತ್ತೆ. ಅಲ್ಲದೇ ಇವರು ಮೃದು ಸ್ವಭಾವದವರಾಗಿರುತ್ತಾರೆ. ಹಾಗಾಗಿ ಇವರು ಶಕ್ತಿವಂತರಾಗಬೇಕು. ಯುಕ್ತಿವಂತರಾಗಬೇಕು ಅಂದ್ರೆ ಯಾವ ದೇವರನ್ನು ಪೂಜಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕರ್ಕ ರಾಶಿಯವರ ತತ್ವ ಜಲ ತತ್ವ. ಹೀಗಾಗಿ ಇವರು ಭಾವುಕ ಸ್ವಭಾವದವರಾಗಿರ್ತಾರೆ. ಯಾವುದಾದರೂ ಎಮೋಷನಲ್ ಸೀನ್ ನೋಡಿ, ತಾವು ಕಣ್ಣೀರು ಹಾಕ್ತಾರೆ. ಅಂಥ ಗುಣವುಳ್ಳ ರಾಶಿಯವರಾದ ಕರ್ಕ ರಾಶಿಯವರಿಗೆ ಸಿಟ್ಟೂ ಜಾಸ್ತಿ ಎನ್ನಬಹುದು. ಇವರ ಸಿಟ್ಟು ಕಡಿಮೆಯಾಗಬೇಕು, ಇವರು ಜೀವನದಲ್ಲಿ ಯಶಸ್ಸು ಕಾಣಬೇಕು. ತಾಳ್ಮೆ ಮೈಗೂಡಬೇಕು ಅನ್ನೋದಾದ್ರೆ ದೇವಿಯ ಆರಾಧನೆ ಮಾಡಬೇಕು. ದುರ್ಗಾದೇವಿ, ಸರಸ್ವತಿ, ಲಕ್ಷ್ಮೀ ಈ ದೇವಿಯರ ಆರಾಧನೆ ಮಾಡಬೇಕು.
ಸರಸ್ವತಿಯನ್ನ ಪೂಜಿಸಿದ್ರೆ, ವಿದ್ಯೆ ಪ್ರಾಪ್ತಿಯಾಗತ್ತೆ. ಲಕ್ಷ್ಮೀಯನ್ನ ಪೂಜಿಸಿದ್ರೆ ಸಂಪತ್ತು ಪ್ರಾಪ್ತಿಯಾಗತ್ತೆ. ಅಂತೆಯೇ ದುರ್ಗೆಯನ್ನ ಪೂಜಿಸಿದ್ರೆ ಧೈರ್ಯ ಪ್ರಾಪ್ತಿಯಾಗತ್ತೆ. ಮತ್ತು ಕರ್ಕ ರಾಶಿಯವರಿಗೆ ಧೈರ್ಯದ ಅವಶ್ಯಕತೆ ತುಂಬಾ ಇದೆ. ಯಾಕಂದ್ರೆ ಇವರದ್ದು ಮೃದು ಸ್ವಭಾವ. ಇವರು ಭಾವುಕ ಜೀವಿ. ಸಿಕ್ಕ ಸಿಕ್ಕವರನ್ನ ಥಟ್ ಅಂತಾ ನಂಬಿಬಿಡ್ತಾರೆ. ಮೋಸ ಹೋಗ್ತಾರೆ. ಹಾಗಾಗಿ ಇವರಿಗೆ ಯುಕ್ತಿ ಮತ್ತು ಶಕ್ತಿಯ ಅವಶ್ಯಕತೆ ಹೆಚ್ಚು. ಹಾಗಾಗಿ ಕರ್ಕ ರಾಶಿಯವರು ಶಕ್ತಿ ದೇವತೆಯ ಪೂಜೆ ಮಾಡುವುದು ಮುಖ್ಯ.
ಇನ್ನು ಕರ್ಕ ರಾಶಿಯ ಅಧಿಪತಿಯಾಗಿರುವ ಚಂದ್ರನಿಗೆ ಯಾರೂ ಶತ್ರುಗಳಿಲ್ಲ. ಚಂದ್ರ ಬುಧನಿಗೆ ಶತ್ರು. ಆದ್ರೆ ಚಂದ್ರನಿಗೆ ಯಾರೂ ಶತ್ರುಗಳಿಲ್ಲ. ರಾಹು ಕೇತುಗಳಿಂದ ಚಂದ್ರನಿಗೆ ಸಮಸ್ಯೆ ಹೆಚ್ಚು. ಆದ್ದರಿಂದ ಕರ್ಕ ರಾಶಿಯವರು ಸಮಸ್ಯೆಯಿಂದ ಪಾರಾಗಲು ನಾಯಿಗಳಿಗೆ ಆಹಾರ ನೀಡಬೇಕು. ಅವುಗಳಿಗೆ ಹಿಂಸೆ ನೀಡಬಾರದು. ನಾಯಿಯ ಜೊತೆ ಬೇರೆ ಪ್ರಾಣಿಗಳಿಗೂ ಆಹಾರ ನೀಡಬಹುದು. ಆದ್ರೆ ನಾಯಿಗಳಿಗೆ ಆಹಾರ ನೀಡಿದ್ರೆ, ಕರ್ಕ ರಾಶಿಯವರಿಗೆ ಉತ್ತಮ.