ಗುಂಡ್ಲುಪೇಟೆ : ಕರ್ನಾಟಕ ಕೇರಳ ಹೆದ್ದಾರಿಯಲ್ಲಿರುವ ಚಾಮರಾಜನಗರ (chamarajanagara) ಜಿಲ್ಲೆಯ ಗುಂಡ್ಲುಪೇಟೆ (Gundlupete) ಪಟ್ಟಣಕ್ಕೆ ಹೊಂದಿಕೊಂಡಿರುವ ಮಡಹಳ್ಳಿ ಗುಮ್ಮನಗುಡ್ಡ ಕುಸಿದ ಪರಿಣಾಮ ಬಿಳಿಕಲ್ಲು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು ಹಲವಾರು ಮಂದಿಗೆ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಗ್ರಾಮದ ಗುಮ್ಮನಗುಡ್ಡದಲ್ಲಿ ಶುಕ್ರವಾರ ಪೂರ್ವಾಹ್ಮ ಗುಡ್ಡ ಕುಸಿದ ಪರಿಣಾಮ ಆರುಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಕೆಲವರನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಂದ್ರ ರವರಿಗೆ ಸೇರಿದ ಕಲ್ಲುಗಣಿಯಲ್ಲಿ ಕೇರಳದ ಹಕೀಂ ರವರು ಸಬ್ ಲೀಸ್ ಪಡೆದು ಗಣಿಗಾರಿಕೆ ನಡೆಸುತ್ತಿದ್ದರು. ಹಲವಾರು ವರ್ಷಗಳಿಂದ ಗುಮ್ಮನಗುಡ್ಡದಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕಳೆದ ವರ್ಷ ಗಣಿಗಾರಿಕೆ ಮಿತಿ ಮೀರಿದಾಗ ಮಡಹಳ್ಳಿ ಗ್ರಾಮಸ್ಥರು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಮಡಹಳ್ಳಿ ಗುಮ್ಮನಗುಡ್ಡ ಬಿಳಿಕಲ್ಲು ಗಣಿಗಾರಿಕೆ ದುರಂತ ಸ್ಥಳಕ್ಕೆ ಭೇಟಿಕೊಟ್ಟ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್ (Superintendent of Police TP Sivakumar) ಮಾಹಿತಿ ಕಲೆ ಹಾಕಿ ಮಾತನಾಡಿ, ಬಿಳಿಕಲ್ಲು ಗಣಿಗಾರಿಕೆ ವೇಳೆ ಬಂಡೆಕಲ್ಲುಗಳಿರುವ ಗುಡ್ಡ ಕುಸಿತಗೊಂಡ ಹಿನ್ನಲೆ ಟಿಪ್ಪರ್,ಟ್ಯ್ರಾಕ್ಟರ್, ಹಿಟಾಚಿಗಳೆವೂ (Tipper, Tractor, Hitachi) ನಾಶವಾಗಿದೆ. ಇದರಲ್ಲಿ ಇದ್ದ ಕಾರ್ಮಿಕರು ಬಡಂಡೆಯಡಿ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಬಹುತೇಕ ನೆರೆ ಜಿಲ್ಲೆಯ ಕಾರ್ಮಿಕರೇ ಆಗಿದ್ದಾರೆ ಎಂದರು. ಗ್ರಾಮಸ್ಥರು ಹೇಳುವಂತೆ ಪ್ರಕೃತಿ ವಿರುದ್ದವಾಗಿ ಯಾವುದೇ ಕೆಲಸ ಕಾರ್ಯ ಮಾಡಿದರೆ ಪ್ರಕೃತಿಯೇ ಪಾಠ ಕಲಿಸಲಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎನ್ನುವರು. ಬಿಳಿ ಕಲ್ಲು ಗಣಿಗಾರಿಕೆಯಲ್ಲಿ ಗುಡ್ಡ ಕುಸಿತದ ಪರಿಣಾಮ ಆರು ಮಂದಿ ಕಾರ್ಮಿಕರ ಸಾವೀಗೀಡಾಗಿದ್ದು ಉಳಿದವರನ್ನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು. ಒಟ್ಟಿನಲ್ಲಿ ಶ್ರೀಮಂತರ ಅಟ್ಟಹಾಸಕ್ಕೆ ಪ್ರಕೃತಿಯ ಒಡಲು ಬಗೆದು ವಿನಾಶ ಮಾಡಿದಕ್ಕೆ ಕಾರ್ಮಿಕರ ಪ್ರಾಣ ಬಲಿಯಾಯಿತು.ಈ ಬಗ್ಗೆ ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕಾಗಿದೆ.