ಸಿದ್ಧರಾಮಯ್ಯನವರೇ.. ನಿಮ್ಮ ನೈಜ ದಲಿತ ಪ್ರೇಮ ಸಾಬೀತು ಪಡಿಸಲು ಧೈರ್ಯವಿದೆಯೇ.?- ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್ ಪ್ರಶ್ನೆ

ಬೆಂಗಳೂರು: ಮುಂದಿನ ಚುನಾವಣೆಗೆ ದಲಿತ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ನಿಮ್ಮ ಪಕ್ಷದ ಅನಧಿಕೃತ ಮಾಲೀಕರಾದ ರಾಹುಲ್ ಗಾಂಧಿ ಕಡೆಯಿಂದ ಇಂದೇ ಘೋಷಣೆ ಮೊಳಗಿಸಿ, ಮುಖ್ಯಮಂತ್ರಿಯನ್ನಾಗಿಸಿಯೇ ತೀರುತ್ತೇನೆ ಎನ್ನುವ ವಾಗ್ದಾನ ನಾಡಿನ ದಲಿತ ಬಾಂಧವರಿಗೆ ನೀಡಿ,ನಿಮ್ಮ ನೈಜ ದಲಿತ ಪ್ರೇಮ ಸಾಬೀತು ಪಡಿಸಲು ಧೈರ್ಯವಿದೆಯೇ ? ಎಂಬುದಾಗಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್, ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಇಂದು ಅವರು ಈ ಸಂಬಂಧ ಸರಣಿ ಟ್ವಿಟ್ ಮಾಡಿದ್ದು, ಮಾನ್ಯ ಬಾದಾಮಿ ಶಾಸಕರಾದ ಸಿದ್ಧರಾಮಯ್ಯನವರೇ, ಅನೇಕ ದಲಿತ ಮುಖಂಡರನ್ನು ನಿಮ್ಮ ರಾಜಕೀಯ ಉನ್ನತಿಗೋಸ್ಕರ ಮೆಟ್ಟಿಲಾಗಿಸಿಕೊಂಡು, ಬಳಿಕ ಅವರೆಲ್ಲರನ್ನೂ ತುಳಿದೇ ಮೇಲೆ ಬಂದ ನೀವು ಕಳೆದ 2,3 ದಿನಗಳಿಂದ ಮಾತ್ರ ದಲಿತ ಜಪ ಮಾಡುತ್ತಿರುವ ನಿಮ್ಮ ಢೋಂಗಿತನ, ಆಷಾಢಭೂತಿತನಕ್ಕೆ ಪುರಾವೆ ಒದಗಿಸುತ್ತದೆ ಎಂದಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರನ್ನು ಕಾಂಗ್ರೆಸ್ ಯಾವ ರೀತಿ ಅವಮಾನ ಮಾಡಿತ್ತು ಎನ್ನುವುದು ಜಗಜ್ಜಾಹೀರು. ದಲಿತರಾದ ಜಿ ಪರಮೇಶ್ವರ್ ರನ್ನು ಸೋಲಿಸಲು ನೀವು ಮಾಡಿದ ಕುತಂತ್ರ, ಮಲ್ಲಿಕಾರ್ಜುನ ಖರ್ಗೆ ರವರನ್ನು ತುಳಿದ ರೀತಿ ಕುರಿತು ನಿಮ್ಮದೇ ಪಕ್ಷದ ಹಲವರು ನೀಡಿರುವ ಹೇಳಿಕೆಗಳನ್ನು ಬಿಡುವಿದ್ದಾಗ ಒಮ್ಮೆ ಪರಿಶೀಲಿಸಿ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷ ರಾಷ್ಟ್ರಪತಿ ಹುದ್ದೆಯನ್ನೇ ದಲಿತ ವ್ಯಕ್ತಿಗೆ ನೀಡಿ ತನ್ನ ಸರ್ವ ಸ್ಪರ್ಶಿ,ಸಮಭಾವ ನೀತಿ ಪ್ರದರ್ಶಿಸಿದೆ. ಹಲವಾರು ಶತಮಾನಗಳಿಂದ ಒಂದೇ ಕುಟುಂಬದ ವೈಯುಕ್ತಿಕ ಆಸ್ತಿಯಾಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಿರಿಯನ್ನು ದಲಿತರಾದ ಮಲ್ಲಿಕಾರ್ಜುನ ಖರ್ಗೆಯರವರಿಗೆ ಕೊಡಿಸಿ,ನಂತರ ನಿಮ್ಮ ದಲಿತ ಪ್ರೇಮವನ್ನು ಸಾಬೀತುಪಡಿಸಿ ಎಂದು ಒತ್ತಾಯಿಸಿದ್ದಾರೆ.

ದಲಿತ ಶಾಸಕ ಶ್ರೀ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ನಿಮ್ಮ ಓಲೈಕೆಯ ಬಾಂಧವರು ಬೆಂಕಿ ಹಚ್ಚಿ,ಧ್ವಂಸ ಮಾಡಿದ್ದಾಗ ಸೌಜನ್ಯಕ್ಕೂ ವಿರೋಧ ವ್ಯಕ್ತಪಡಿಸದ್ದು ನಿಮ್ಮ ಆಷಾಢ ಭೂತಿತನಕ್ಕೆ ಸಾಕ್ಷಿ. ಆಗ ನಿಮ್ಮ ಢೋಂಗಿ ದಲಿತ ಕಾಳಜಿ ಎಲ್ಲಿ ಮಲಗಿತ್ತು ಎಂಬ ಪ್ರಶ್ನೆಗೆ ಉತ್ತರಿಸುವಿರಾ? ಎಂದಿದ್ದಾರೆ.

ನಿಮ್ಮ ಏಳಿಗೆಗೆ ಹಗಲಿರುಳು ಶ್ರಮಿಸಿದ ದಲಿತ ನಾಯಕರಾದ ವಿ.ಶ್ರೀನಿವಾಸ ಪ್ರಸಾದ್ ನವರ ರಾಜಕೀಯ ಅಂತ್ಯಕ್ಕೆ ನೀವು ವಹಿಸಿದ ಕಾಳಜಿ,ಪರಿಶ್ರಮ ದಲಿತ ಬಾಂಧವರು ಮರೆಯಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಕರ್ನಾಟಕ ದಲಿತ ಸಮುದಾಯಕ್ಕೆ ಸೇರಿದ ನನ್ನಂಥ ಸಾಮಾನ್ಯ ಯುವಕನನ್ನು ಯುವ ಮೋರ್ಚಾದ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಗೌರವಿಸಿದೆ.ನಿಮ್ಮ ಷಡ್ಯಂತ್ರ, ಅಲ್ಪಸಂಖ್ಯಾತರ ಓಲೈಕೆಗಾಗಿ ದಲಿತ ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸಿ, ರಿಜ್ವಾನ್ ಅರ್ಷದ್ ರನ್ನು ಕಾಂಗ್ರೆಸ್ ಯುವ ಘಟಕದ ಚುನಾವಣೆಯಲ್ಲಿ ಗೆಲ್ಲಿಸಿದ್ದು ನಿಮ್ಮ ಢೋಂಗಿ ದಲಿತ ಪ್ರೇಮಕ್ಕೆ ಮತ್ತೊಂದು ನಿದರ್ಶನ ಎಂದು ಹೇಳಿದ್ದಾರೆ.

About The Author