ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಮಂಡ್ಯದ ದೊಡ್ಡರಸಿಕೆರೆ ಗ್ರಾಮದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಸುಮಲತಾಾ, ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ. ಅಮೂಲ್ಯವಾದ ಮತದಾನ ಮಾಡುವ ಮೂಲಕ ಪ್ರಜ್ಞಾವಂತ ಅಭ್ಯರ್ಥಿಯ ಆಯ್ಕೆಯಲ್ಲಿ ಭಾಗಿಯಾಗಿರುವೆ. ತಾವೂ ಕೂಡ ಸಂಜೆ 6 ಗಂಟೆ ಒಳಗೆ ಬಂದು ಮತದಾನ ಮಾಡಿ ಎಂದು ಹೇಳಿದ್ದಾರೆ.
ರಾಮನಗರ: ಬಿಡದಿ ಪುರಸಭೆ ವ್ಯಾಪ್ತಿಯ ಕೇತಗಾನಹಳ್ಳಿ ವ್ಯಾಪ್ತಿಯ ಮತಗಟ್ಟೆಗೆ ಬಂದು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಅವರ ಕುಟುಂಬಸ್ಥರು ಮತದಾನ ಮಾಡಿದ್ದಾರೆ. ಕುಮಾರಸ್ವಾಮಿಯೊಂದಿಗೆ, ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಕುಮಾರಸ್ವಾಮಿ, ನಿಖಿಲ್ ಪತ್ನಿ ರೇವತಿ ಬಂದು ವೋಟ್ ಮಾಡಿದ್ದಾರೆ.
ಕನಕಪುರ: ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ ಚಲಾಯಿಸಿದ್ದು, ಮತ ಚಲಾವಣೆಗೂ ಮುನ್ನ ಇಲ್ಲಿನ, ಕಂಕೇರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಡಿಕೆಶಿ, ಇಂದು ನಿಮ್ಮ ಮತವನ್ನು ಚಲಾಯಿಸಲು ನೀವು ನಿಮ್ಮ ಮನೆಯಿಂದ ಹೊರಬರುತ್ತಿರುವಾಗ, ನಿಮ್ಮ ಮತವು ನಮ್ಮ ರಾಜ್ಯದ ಭವಿಷ್ಯವನ್ನು ಪುನಃ ಬರೆಯುವ ಶಕ್ತಿಯನ್ನು ನೆನಪಿಸಿಕೊಳ್ಳಿ. ಪ್ರಗತಿಗಾಗಿ ಮತ ಚಲಾಯಿಸಲು ಮರೆಯದಿರಿ. ಭ್ರಷ್ಟಾಚಾರ ಮುಕ್ತ ಭವಿಷ್ಯಕ್ಕಾಗಿ ಮತ ಚಲಾಯಿಸಲು ಮರೆಯದಿರಿ. ಸದೃಢ, ಸುಭದ್ರ ಕರ್ನಾಟಕಕ್ಕಾಗಿ ಮತ ಹಾಕಲು ಮರೆಯದಿರಿ- ನಾನು ಮಾಡಿದಂತೆ! ಎಂದು ಹೇಳಿದ್ದಾರೆ.
ವರುಣಾ: ಮಾಜಿ ಸಿಎಂ ಸಿದ್ದರಮಾಯ್ಯ ಕೂಡ, ತಮ್ಮ ಕ್ಷೇತ್ರವಾದ ವರುಣಾದ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮತದಾನ ಗಣತಂತ್ರದ ಹಬ್ಬ, ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಸದೃಢಗೊಳಿಸೋಣ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಕೋಮುವಾದ, ಬೆಲೆ ಏರಿಕೆಗಳ ವಿರುದ್ಧ ವರುಣಾ ವಿಧಾನಸಭಾ ಕ್ಷೇತ್ರದ ನನ್ನ ಹುಟ್ಟೂರು ಸಿದ್ದರಾಮನಹುಂಡಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ನೀವೂ ತಪ್ಪದೆ ಮತದಾನ ಮಾಡಿ, ಕರ್ನಾಟಕವನ್ನು ಗೆಲ್ಲಿಸಿ ಎಂದಿದ್ದಾರೆ.