ಶಾಲೆ ಆರಂಭಿಸುವ ಬಗ್ಗೆ ಸಚಿವ ಸುರೇಶ್ ಕುಮಾರ್ ಫೇಸ್ಬುಕ್ ಲೈವ್ನಲ್ಲಿ ಬಂದು ಸ್ಪಷ್ಟನೆ ನೀಡಿದ್ದು, ವಿದ್ಯಾರ್ಥಿಗಳ ಮತ್ತು ಪೋಷಕರ ಆತಂಕಕ್ಕೆ ತೆರೆ ಎಳೆದಿದ್ದಾರೆ.
ಪೋಷಕರ ವ್ಯಾಪಕ ಒತ್ತಾಯಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ತರಾತುರಿಯಲ್ಲಿ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಜುಲೈ ಒಂದರಿಂದ ಯಾವುದೇ ಶಾಲೆ ಆರಂಭಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪೋಷಕರ ಅಭಿಪ್ರಾಯ ನೀಡುವಂತೆ ಕೇಂದ್ರ ನಿರ್ದೇಶನ ನೀಡಿದ್ದು, ಕೊರೊನಾ ಭೀತಿ ಹಿನ್ನೆಲೆ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಲೈವ್ನಲ್ಲಿ ಬಂದು ಮಾತನಾಡಿದ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಯಾವ ಶಾಲೆಯನ್ನೂ ಕೂಡ ತರಾತುರಿಯಾಗಿ ಓಪನ್ ಮಾಡಬೇಕೆಂದು ನಿರ್ಧಾರ ಮಾಡಿಲ್ಲ, ಮಾಡೋದು ಇಲ್ಲ. ರಾಜ್ಯದಲ್ಲಿ ಶಿಕ್ಷಣ ಇಲಾಖೆ ಕುರಿತಾದ ಒಂದು ಹೊಸ ಚರ್ಚೆ ಇವತ್ತು ಪ್ರಾರಂಭವಾಗಿದೆ. ಶಾಲೆಗಳನ್ನ ಯಾವಾಗ ಪ್ರಾರಂಭಿಸಬೇಕು, ಹೇಗೆ ತರಗತಿ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.
ಇಂದು ಬೆಳಿಗ್ಗೆ ಮಹನ್ಯಾ ಎಂಬ ಮೊದಲನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ನನ್ನ ಬಳಿ ಬಂದು ಕೊರೊನಾ ಹೋಗುವವರೆಗೂ ಶಾಲೆ ತೆರೆಯಬೇಡಿ ಎಂದು ಹೇಳಿದಳು. ಇದೊಂದು ಚಿಕ್ಕ ಘಟನೆ. ಆದ್ರೆ ಮಕ್ಕಳಿಗೆ, ಪೋಷಕರಿಗೆ ಶಾಲೆ ತೆರೆಯುವ ಬಗ್ಗೆ ಆತಂಕವಿದೆ ಎಂದಿದ್ದಾರೆ.
ಅಲ್ಲದೇ ಈ ಬಗ್ಗೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಸುತ್ತೋಲೆಯಲ್ಲಿ ಏನೇನಿದೆ, ಶಾಲೆ ತೆರೆಯುವ ಬಗ್ಗೆ ಯಾವಾಗ ಸಭೆ ನಡೆಸಲಾಗುತ್ತದೆ ಎಂಬುದರ ಬಗ್ಗೆ ಫೇಸ್ಬುಕ್ ಲೈವ್ನಲ್ಲಿ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.