Friday, September 20, 2024

Latest Posts

ಹುಚ್ಚ ವೆಂಕಟ್‌ಗೆ ಥಳಿಸಿದ ಬಗ್ಗೆ ನಟ ದುನಿಯಾ ವಿಜಿ ಹೇಳಿದ್ದೇನು..?

- Advertisement -

ಮಂಡ್ಯದಲ್ಲಿ ಹುಚ್ಚವೆಂಕಟ್‌ಗೆ ಥಳಿಸಿರುವ ಬಗ್ಗೆ ನಟ ದುನಿಯಾ ವಿಜಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹುಚ್ಚ ವೆಂಕಟ್‌ಗೆ ಒಳ್ಳೆಯ ಚಿಕಿತ್ಸೆ ಕೊಡಿಸಲು ಮನವಿ ಮಾಡಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಜಿ, ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ‌ಹೊಡೆಯುವ ವಿಡಿಯೋಗಳು ಕಳೆದ ಎರಡು ದಿನಗಳಿಂದ ವೈರಲ್ ಆಗಿವೆ. ‘ಹುಚ್ಚ’ ಎಂದು ಸ್ವತಃ ಹೇಳಿಕೊಂಡು‌ ಚಿತ್ರರಂಗಕ್ಕೆ ಪ್ರವೇಶಿಸಿದರೂ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕಾಣಿಸಿಕೊಂಡ ಚಿತ್ರಗಳ‌ ಮೂಲಕ ನಾನು ವೃತ್ತಿಯಲ್ಲಿರುವ ಇಂಡಸ್ಟ್ರಿಯಲ್ಲೇ ಗುರುತಿಸಿಕೊಂಡ ವ್ಯಕ್ತಿ ಎನ್ನುವ ಕಾರಣಕ್ಕಾಗಿ ಹಾಗೂ ಮಾನವೀಯತೆಯ ದೃಷ್ಟಿಯಿಂದ ‌ಮಾಧ್ಯಮಗಳಲ್ಲಿ‌‌ ಒಂದು ಮನವಿ ಮಾಡುತ್ತಿದ್ದೇನೆ.

ಈ ವಿಚಾರದಲ್ಲಿ ಮಾಧ್ಯಮಗಳಲ್ಲಿ ವಿನಂತಿಸಲು‌ ಕಾರಣ ಒಂದೇ.‌ ಆತನನ್ನು ಇಂದು ರಾಜ್ಯದ ಜನತೆ ನಟನಾಗಿ ಗುರುತಿಸುವುದಕ್ಕಿಂತ ಹೆಚ್ಚು ಮಾಧ್ಯಮಗಳಲ್ಲಿನ ಚರ್ಚೆಗಳ ಮೂಲಕ ಗುರುತಿಸಿದ್ದಾರೆ. ಆದರೆ ಇಂದು ಆತನಿಗೆ ಹೊಡೆದು ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡಲಾಗುತ್ತಿದೆ.

ಇದುವರೆಗೆ ಆತನ ವರ್ತನೆಯನ್ನು ಕಂಡಿರುವ ನಮಗೆ ಮತ್ತು ವೈದ್ಯರು ಕೂಡ ಈಗಾಗಲೇ ನೀಡಿರುವ ಹೇಳಿಕೆಗಳ ಪ್ರಕಾರ ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆಯ ಅಗತ್ಯ ಇದೆಯೇ ಹೊರತು, ಹೊಸ ಚರ್ಚೆ, ಮಾತುಕತೆ, ಹೊಡೆದಾಟಗಳಲ್ಲ. ಇದನ ಚೆನ್ನಾಗಿ ಅರಿಯಬಲ್ಲ ಮಾಧ್ಯಮಗಳೇ ಈ‌ ಬಾರಿ ಕೂಡ ಆತನಿಗೆ ದಯಮಾಡಿ ಸಹಾಯ ಮಾಡಿ. ಆತನ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯಿಂದ ಜಾರಿಕೊಳ್ಳದ ಹಾಗೆ ಕಾಳಜಿ ವಹಿಸಿ ಎಂದು ನನ್ನ ಮನವಿ.

ಇದೇ ಸಂದರ್ಭದಲ್ಲಿ ಆತನಿಗೆ ಹಲ್ಲೆಗೈದು ವಿಡಿಯೋ‌ ಮಾಡುವವರಲ್ಲಿ ಕೂಡ ಒಂದು ಮನವಿ. ಬದುಕು ಯಾರ ಕೈಯ್ಯಲ್ಲಿಯೂ ಇಲ್ಲ. ಇಂದು ಒಬ್ಬ ರಾಜ ಭಿಕ್ಷೆ ಬೇಡಬಹುದು. ಅದೇ ಭಿಕ್ಷುಕ ನಾಳೆ ರಾಜನಾಗಬಹುದು. ನಾವು ಅವರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವುದು ಮಾನವೀಯತೆಯಲ್ಲ. ಹಾಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಯಲ್ಲಿ ದಯವಿಟ್ಟು ಯಾರೂ ಹಲ್ಲೆ ಮಾಡಬೇಡಿ ಎಂದು ವಿಜಿ ವಿನಂತಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಜ್ಯೂಸ್ ಕುಡಿದು ಹಣ ಕೊಟ್ಟಿಲ್ಲವೆಂದು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲದೇ, ಮಂಡ್ಯದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಯುವಕರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಕ್ಕೆ ಯುವಕರು ಥಳಿಸಿದ್ದರು.

- Advertisement -

Latest Posts

Don't Miss