Spiritual: ಗರುಡ ಪುರಾಣದಲ್ಲಿ ಬರುವ ಎಲ್ಲ ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಯಾಕಂದ್ರೆ ಮನುಷ್ಯ ಯಾವ ಕಾರಣಕ್ಕೆ ಉದ್ದಾರವಾಗುತ್ತಾನೆ ಮತ್ತು ಯಾವ ಕಾರಣಕ್ಕೆ ಚಟ್ಟ ಸೇರುತ್ತಾನೆ ಎನ್ನುವ ವಿಷಯವನ್ನು ಇದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ ನಾವಿಂದು ಮನುಷ್ಯನಿಗೆ ಯಾವ ಚಟವಿದ್ದರೆ, ಆತ ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲವೆಂದು ತಿಳಿಯೋಣ ಬನ್ನಿ..
ಅಹಂಕಾರ: ದೇವರು ಎಲ್ಲವನ್ನೂ ಕೊಟ್ಟು ಪರೀಕ್ಷಿಸುತ್ತಾನೆ. ಹಣ, ಆಸ್ತಿ, ವಿದ್ಯೆ, ಸೌಂದರ್ಯ, ಸಂಬಂಧ ಎಲ್ಲವನ್ನೂ ನೀಡುತ್ತಾನೆ. ಬಳಿಕ ಮನುಷ್ಯ ಅವೆಲ್ಲವನ್ನೂ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆಂದು ಪರೀಕ್ಷಿಸುತ್ತಾನೆ. ಇವೆಲ್ಲವೂ ಇರುವವ ಅಹಂಕಾರದಿಂದ ಮೆರೆದರೆ, ಎಲ್ಲವನ್ನೂ ಕಿತ್ತುಕೊಂಡು, ಅಹಂಕಾರವನ್ನು ಇಳಿಸುತ್ತಾನೆ. ಆದರೆ ತಲೆಗೇರಿದ ಅಹಂಕಾರ ಇಳಿಯುವ ಸಮಯಕ್ಕೆ, ಆಸ್ತಿ ಅಂತಸ್ತು ಕೈ ತಪ್ಪಿ ಹೋಗಿರುತ್ತದೆ. ವಿದ್ಯೆ ಉಪಯೋಗಕ್ಕೆ ಬಾರದಂತಾಗಿರುತ್ತದೆ. ಸೌಂದರ್ಯ ಹಾಳಾಗಿ ಹೋಗಿರುತ್ತದೆ. ಸಂಬಂಧ ಸತ್ತು ಹೋಗಿರುತ್ತದೆ. ಹಾಗಾಗಿ ದೇವರು ಕೊಟ್ಟ ಎಲ್ಲವನ್ನೂ ಕಾಪಾಡಿಕೊಳ್ಳಬೇಕು ಅಂದ್ರೆ, ಅಹಂಕಾರ ತೊರೆದು ಬದುಕಬೇಕು.
ಆಲಸ್ಯ: ಆಲಸ್ಯದಿಂದಲೇ ಮನುಷ್ಯ ಅವನತಿಯತ್ತ ಸಾಗೋದು. ಇನ್ನು ಆಲಸ್ಯ ಹೆಚ್ಚಾಗಿ, ಹೆಚ್ಚು ನಿದ್ದೆ ಮಾಡುವುದು. ತನ್ನ ಸುತ್ತ ಮುತ್ತಲ ಸ್ಥಳವನ್ನು ಕ್ಲೀನ್ ಆಗಿ ಇರಿಸಿಕೊಳ್ಳದೇ ಇರುವುದು. ಸ್ವಚ್ಛವಾಗಿ ಇರದೇ ಇರುವುದು. ಸ್ವಚ್ಛ ಬಟ್ಟೆಯನ್ನು ಧರಿಸದೇ ಇರುವುದು. ಇವೆಲ್ಲವೂ ಮನುಷ್ಯನನ್ನು ಎಂದಿಗೂ ಉದ್ಧಾರವಾಗಲು ಬಿಡುವುದಿಲ್ಲ.
ದುರಾಸೆ: ಯಾರಿಗೆ ದುರಾಸೆ ಹೆಚ್ಚಾಗಿರುತ್ತದೆಯೋ, ಅಂಥವರು ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲ. ಏಕೆಂದರೆ, ದುರಾಸೆ ಇರುವವರಿಗೆ ದುಡಿದು ತಿನ್ನುವ ಯೋಗ್ಯತೆ ಇರುವುದಿಲ್ಲ. ಅವರು ಅಡ್ಡದಾರಿ ಹಿಡಿದೋ, ಅಥವಾ ಇನ್ನೊಬ್ಬರ ಆಸ್ತಿಗೆ ಆಸೆ ಪಟ್ಟ ಕಾರಣ, ಅವರಿಗೆ ದುರಾಸೆ ಉಂಟಾಗಿರುತ್ತದೆ. ಸ್ವಂತಿಕೆ ಬಿಟ್ಟು ಇನ್ನೊಬ್ಬರ ವಸ್ತುವಿಗೆ, ಆಸ್ತಿಗೆ ಆಸೆ ಪಡುವವರು ಎಂದಿಗೂ ಉದ್ಧಾರವಾಗುವುದಿಲ್ಲ.
ಹೊಟ್ಟೆಕಿಚ್ಚು: ಹೊಟ್ಟೆಕಿಚ್ಚು ಅನ್ನೋದು, ಮನುಷ್ಯನಿಗಿರುವ ಅತ್ಯಂತ ಕೆಟ್ಟ ಗುಣ. ಒಂದು ಮನೆಯಲ್ಲಿ ಓರ್ವ ಮನುಷ್ಯನಿಗೆ ಹೊಟ್ಟೆಕಿಚ್ಚಿನ ಗುಣ ಹೆಚ್ಚಾಗಿತ್ತೆಂದರೆ, ಆ ಮನೆಯಲ್ಲಿ ಯಾರೂ ನೆಮ್ಮದಿಯಾಗಿ, ಖುಷಿ ಖುಷಿಯಾಗಿ ಇರಲು ಸಾಧ್ಯವಾಗುವುದಿಲ್ಲ. ಹೊಟ್ಟೆಕಿಚ್ಚು ಮನುಷ್ಯನ ಜೀವನವನ್ನೇ ಸುಟ್ಟು ಹಾಕುವಷ್ಟು ಘೋರವಾಗಿರುತ್ತದೆ. ಹಾಗಾಗಿ ಹೊಟ್ಟೆಕಿಚ್ಚು ಇರುವವರು ಎಂದಿಗೂ ಉದ್ಧಾರವಾಗುವುದಿಲ್ಲ.





