‘ಲಾಲ್‌ಬಾಗ್‌ ರಾಜ’ನ ದರ್ಶನದ ವೇಳೆ ಬೇಧ-ಭಾವ: ನೆಟ್ಟಿಗರಿಂದ ಆಕ್ರೋಶ

Mumbai News: ಮುಂಬೈನಲ್ಲಿ ಗಣೇಶ ಚತುರ್ಥಿಯನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಅದರಲ್ಲೂ ಲಾಲ್‌ಭಾಗ್‌ ಚಾ ರಾಜಾ ಅಂತಲೇ ಒಂದು ದೊಡ್ಡ ಗಣಪತಿಯನ್ನು ಇರಿಸಲಾಗುತ್ತದೆ. ಇದು ಶ್ರೀಮಂತರ ಗಣಪತಿ ಅಂತಲೇ ಪ್ರಸಿದ್ಧಿ ಪಡೆದಿದೆ. ಯಾಕಂದ್ರೆ, ಅಂಬಾನಿಯಂಥ ಶ್ರೀಮಂತರು ಸೇರಿ, ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಈ ಗಣಪತಿಯ ದರ್ಶನ ಪಡೆದು, ದೊಡ್ಡ ದೊಡ್ಡ ದೇಣಿಗೆ ನೀಡುತ್ತಾರೆ.

ಪ್ರತೀ ವರ್ಷ ಇಲ್ಲಿ ದೇವರ ದರ್ಶನಕ್ಕೆ ಬರುವವರ ವೀಡಿಯೋ ವೈರಲ್ ಆಗುತ್ತದೆ. ಅದೇ ರೀತಿ ಟ್ರೋಲ್ ಮತ್ತು ವಿರೋಧಕ್ಕೆ ಕಾರಣವಾಗುತ್ತದೆ. ಯಾಕಂದ್ರೆ ಇಲ್ಲಿ ಬರುವ ಸಾಮಾನ್ಯ ಭಕ್ತರು ದೇವರ ದರ್ಶನ ಮಾಡಿ, ಕಾಲಿಗೆ ಅಡ್ಡ ಬೀಳಲು ಪುರುಸೊತ್ತು ಇರುವುದಿಲ್ಲ, ಆಗಲೇ ಅಲ್ಲಿರುವ ಸಿಬ್ಬಂದಿಗಳು ಭಕ್ತರು ತಳ್ಳಿ ತಳ್ಳಿ ಹಾಕುತ್ತಾರೆ. ಅದೇ ಗಣ್ಯರು, ಶ್ರೀಮಂತರು ಮತ್ತು ಸೆಲೆಬ್ರಿಟಿಗಳು ಬಂದರೆ, ಅಲ್ಲೇ ಎಷ್ಟು ಹೊತ್ತು ಬೇಕಾದರೂ ನಿಂತು, ದರ್ಶನ ಪಡೆದು, ಗಣಪನ ಕಾಲಿಗೆ ಅಡ್ಡಬಿದ್ದು, ಫೋಟೋ ತೆಗೆಸಿಕೊಳ್ಳಲು ಕೂಡ ಅವಕಾಶವಿದೆ.

ಇಂಥ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತೆ, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಬಡವ-ಶ್ರೀಮಂತ ಅನ್ನುವ ಬೇಧ ಭಾವ ಎಂದೆಂದಿಗೂ ಹೋಗುವುದಿಲ್ಲ. ದುಡ್ಡಿದ್ದವರಿಗೆ ಒಂದು ನ್ಯಾಯ, ದುಡ್ಡು ಇಲ್ಲದವರಿಗೆ ಒಂದು ನ್ಯಾಯವೆಂದು ಆಕ್ರೋಶ ಹೊರಹಾಕಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಕೊರಳಪಟ್ಟಿ ಹಿಡಿದು ನೂಕುತ್ತಿರುವುದು ಎಲ್ಲರ ಸಿಟ್ಟಿಗೆ ಕಾರಣವಾಗಿದೆ.

About The Author