ಸ್ಲೀಪರ್ ಬಸ್‌ನಲ್ಲಿದ್ದ 20 ಮಂದಿ ಸಜೀವ ದಹನ

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಐಷಾರಾಮಿ ಸ್ಲೀಪರ್‌ ಬಸ್‌ ಬೆಂಕಿ ಅನಾಹುತಕ್ಕೆ ತುತ್ತಾಗಿದೆ. ಡ್ರೈವರ್‌, ಕಂಡಕ್ಟರ್‌ ಸೇರಿ 42 ಪ್ರಯಾಣಿಕರಲ್ಲಿ, 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ.

ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಡಿಡಿ01 ಎನ್ 9490 ವೋಲ್ವೋ ಬಸ್, ಕರ್ನೂಲು ಜಿಲ್ಲೆಯ ಚಿನ್ನಟೇಕೂರು ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಬಸ್‌ನ ಅಡಿಗೆ ಹೋಗಿದೆ. ಆದರೂ ಬಸ್‌ ನಿಲ್ಲಿಸದ ಚಾಲಕ, ಸುಮಾರು 400 ಮೀಟರ್‌ ದೂರ ಎಳೆದೊಯ್ದಿದ್ದಾನೆ. ಬೈಕ್‌ನಿಂದ ಪೆಟ್ರೋಲ್‌ ಸೋರಿಕೆಯಾಗಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ಬಸ್‌ಗೂ ಆವರಿಸಿದೆ.

ಬಸ್ಸಿನ ಡೋರ್‌ ಕೂಡ ಜಾಮ್‌ ಆಗಿದ್ರಿಂದ ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಎಮರ್ಜೆನ್ಸಿ ಡೋರ್‌ ಮತ್ತು ಕಿಟಕಿ ಗಾಜುಗಳನ್ನು ಹೊಡೆದು ಹೊರಗೆ ಹಾರಿ, 12 ಮಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಉಳಿದವರು ಸಜೀವ ದಹನವಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಈವರೆಗೆ 11 ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು, ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ರು. ಅಷ್ಟರಲ್ಲಿ, ಗುರುತಿಸಲು ಸಾಧ್ಯವಾಗದಷ್ಟು ಮೃತದೇಹಗಳು ಸುಟ್ಟು ಕರಕಲಾಗಿವೆ. ಮೃತರ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆಗೆ ನಿರ್ಧರಿಸಲಾಗಿದೆ. ಸ್ಥಳದಲ್ಲಿ ಎಫ್‌ಎಸ್‌ಎಲ್‌ ಟೀಮ್‌ ಪರಿಶೀಲನೆ ನಡೆಸುತ್ತಿದೆ. ಇನ್ನು ಬೈಕ್‌ ಸವಾರ ಕೂಡ ಮೃತಪಟ್ಟಿರುವ ಸಾಧ್ಯತೆ ಇದೆ.

About The Author