Movie News: ರೇಣುಕಾಸ್ವಾಮಿ ಅವರ ಹತ್ಯೆಗೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರನ್ನು ನಿತ್ಯವೂ ಹಲವು ನಟ,ನಟಿಯರು, ನಿರ್ಮಾಪಕ, ನಿರ್ದೇಶಕರು ಭೇಟಿ ಮಾಡಿ ಬರುತ್ತಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಐದು ಬಾರಿ ದರ್ಶನ್ ಅವರನ್ನು ಭೇಟಿ ಮಾಡಿ ಸಮಾಧಾನದ ಮಾತುಗಳನ್ನು ಹೇಳಿ ಬಂದಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮೀ ಅವರು ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಮಾಡಿದ್ದಾರೆ. ಅಲ್ಲಿ, ಚಂಡಿಕಾ ಯಾಗ ನಡೆಸಿದ್ದಾರೆ. ಕಳೆದ ಶುಕ್ರವಾರ ಪತಿಯನ್ನು ಸಂಕಷ್ಟದಿಂದ ಪಾರು ಮಾಡು ತಾಯೆ ಎಂದು ಮೊರೆ ಹೋಗಿ, ಚಂಡಿಕಾ ಯಾಗ ನಡೆಸಿದ್ದರು. ಹೋಮ, ಹವನ ಪೂಜೆಯ ಬಳಿಕ ಬೆಂಗಳೂರಿಗೆ ಹಿಂದಿರುಗಿದ ವಿಜಯಲಕ್ಷ್ಮಿ, ಸೋಮವಾರ ನೇರ ದೇವಿ ಪ್ರಸಾದದೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದಾರೆ. ಪತಿ ದರ್ಶನ್ ಅವರನ್ನು ಆರನೇ ಬಾರಿಗೆ ಭೇಟಿ ಮಾಡಿ, ದೇವಿ ಪ್ರಸಾದ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರೊಂದಿಗೆ ದರ್ಶನ್ ಸಹೋದರ ದಿನಕರ್ ತೂಗುದೀಪ ಹಾಗು ಗೀತರಚನೆಕಾರ ಕವಿರಾಜ್ ಕೂಡ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ್ ಅವರೊಂದಿಗೆ ಒಂದಷು ಸಮಯ ಮಾತನಾಡಿರುವ ಅವರು, ಸಮಾಧಾನದ ಮಾತುಗಳನ್ನು ಆಡಿದ್ದಾರೆ.
ಅರ್ಜಿ ಹಿಂದಕ್ಕೆ: ಈ ಮಧ್ಯೆ, ಜೂಲೂಟದಿಂದ ಆರೋಗ್ಯ ಸಮಸ್ಯೆಯಾಗುತ್ತಿದೆ. ಹಾಗಾಗಿ ಮನೆಯಿಂದ ಊಟ, ಹಾಸಿಗೆ, ಪುಸ್ತಕ ಬೇಕು ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ಬೇಡಿಕೆ ಇಟ್ಟಿದ್ದರು ದರ್ಶನ್. ಆದರೆ, ಎರಡು ಬಾರಿ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಸೋಮವಾರ ಕೂಡ ಆ ಸಂಬಂಧ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇಂದು ವಿಚಾರಣೆ ನಡೆಸಬೇಕಿತ್ತು. ಇದೀಗ ದರ್ಶನ್ ಪರ ವಕೀಲರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.