Hubballi : ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಮ್ಮತಿ: ಮೂರು ದಿನದ ಷರತ್ತು ಬದ್ಧ ಅನುಮತಿ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯಭಾಗದಲ್ಲಿ ಇರುವ ಚೆನ್ನಮ್ಮ ವರ್ತುಲದ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ- ಧಾರವಾಡ ಪಾಲಿಕೆ ಇಂದು ಅಧಿಕೃತವಾಗಿ ಅನುಮತಿ ನೀಡಿದ್ದು, ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾ ಮಂಡಳಿಗೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ನೀಡಿದ್ದಾರೆ.

ಮೂರು ದಿನಗಳ ಕಾಲ ಪಾಲಿಕೆ ಒಡೆತನದ (ಸಿಟಿಎಸ್ ನಂ.174) ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಕೆಲ ಷರತ್ತು ಹಾಕಲಾಗಿದೆ. ಹೌದು..ಕಳೆದ ವರ್ಷ ಅನುಮತಿ ವಿಚಾರದಲ್ಲಿ ಸಾಕಷ್ಟು ಹೋರಾಟ ನಡೆದಿದ್ದು, ಮಾತ್ರವಲ್ಲದೆ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಅಲ್ಲದೇ ಈದ್ಗಾ ಮೈದಾನದ ಗಣಪತಿ ವರ್ಚಸ್ಸು ದೇಶಾದ್ಯಂತ ಹಬ್ಬಿತ್ತು.

ಇನ್ನೂ ಈ ವರ್ಷ ಪ್ರತಿಷ್ಠಾಪನೆಗೆ 4 ರಿಂದ 5 ಸಂಘಟನೆಗಳು ಅರ್ಜಿ ಸಲ್ಲಿಸಿದ್ದರೂ ಈಗಾಗಲೇ ಎರಡು ಅವಧಿ ಪ್ರತಿಷ್ಠಾಪಿಸಿರುವ ನ್ಯಾಯವಾದಿ ಸಂಜಯ ಬಡಸ್ಕರ ಅಧ್ಯಕ್ಷರಾಗಿರುವ ಮಹಾಮಂಡಳಕ್ಕೆ ಷರತ್ತು ವಿಧಿಸಿ ಅನುಮತಿ ನೀಡಿದ್ದು, ಈ ವರ್ಷವೂ ಕೂಡ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

About The Author