ಆಮ್ ಆದ್ಮಿ ಪಕ್ಷದಿಂದ ಏಳು ರಾಜ್ಯಸಭಾ ಸಂಸದರು ಏಕಕಾಲದಲ್ಲಿ ಪಕ್ಷಾಂತರಗೊಂಡಿರುವ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಗದ್ದಲದ ನಡುವೆಯೇ ಪಂಜಾಬ್ನ ರಾಜ್ಯಸಭಾ ಸಂಸದ ಬಲ್ಬೀರ್ ಸಿಂಗ್ ಸೀಚೆವಾಲ್ ತಮ್ಮ ನಿಲುವಿನಿಂದ ಗಮನ ಸೆಳೆದಿದ್ದಾರೆ.
ಸೀಚೆವಾಲ್ ಅವರು ಪಕ್ಷ ತೊರೆಯುವ ಆಹ್ವಾನವನ್ನು ನಿರಾಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. “ಪ್ರತ್ಯೇಕ ಗುಂಪು ರಚನೆ ಬಗ್ಗೆ ಮಾತನಾಡಲಾಗಿತ್ತು. ನನಗೂ ಸೇರಲು ಕರೆ ಬಂದಿತ್ತು. ಆದರೆ ನಾನು ಸ್ಪಷ್ಟವಾಗಿ ನಿರಾಕರಿಸಿದೆ” ಎಂದು ತಿಳಿಸಿದ್ದಾರೆ. ಈ ಸಂಬಂಧ ವಿಕ್ರಮ್ ಸಾಹ್ನಿ ಅವರಿಂದ ನೇರ ಸಂಪರ್ಕವಾಗಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ, “ಚಾಯ್ ಪೆ ಚರ್ಚಾ”ಗೆ ಆಹ್ವಾನ ನೀಡಿದ ಘಟನೆವನ್ನೂ ಅವರು ಬಹಿರಂಗಪಡಿಸಿದ್ದು, ಅದನ್ನೂ ತಳ್ಳಿಹಾಕಿದ್ದಾಗಿ ಹೇಳಿದ್ದಾರೆ. ಸಂಭಾಷಣೆಯಲ್ಲಿ “ವಿಶ್ವವಿದ್ಯಾಲಯದ ವ್ಯಕ್ತಿ” ಉಲ್ಲೇಖವಿದ್ದು, ಅದು ಅಶೋಕ್ ಕುಮಾರ್ ಮಿತ್ತಲ್ ಅವರನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಪಕ್ಷದ ಒಳರಾಜಕೀಯದ ಬಗ್ಗೆ ಮಾತನಾಡಿದ ಅವರು, ಸಂದೀಪ್ ಪಾಠಕ್ ಮತ್ತು ರಾಘವ್ ಚಡ್ಡಾ ಪಂಜಾಬ್ನಲ್ಲಿ ಬಲವಾದ ಪ್ರಭಾವ ಹೊಂದಿದ್ದಾರೆ ಎಂದು ಹೇಳಿದರು. ರಾಜ್ಯಸಭೆಯಲ್ಲಿ ತಮ್ಮ ಸಕ್ರಿಯ ಕಾರ್ಯವೈಖರಿ ಕೆಲವು ನಾಯಕರಿಗೆ ಅಸೌಕರ್ಯ ಉಂಟುಮಾಡಿದೆ ಎಂದೂ ಹೇಳಿದ್ದಾರೆ.
ಇದೇ ವೇಳೆ, “ಆಪರೇಷನ್ ಕಮಲ” ಆರೋಪಗಳ ಬಗ್ಗೆ ನೇರವಾಗಿ ಪ್ರತಿಕ್ರಿಯೆ ನೀಡದೇ, “ಪ್ರತಿ ರಾಜಕೀಯ ಪಕ್ಷವೂ ತನ್ನ ಹಿತಾಸಕ್ತಿಯನ್ನು ನೋಡುತ್ತದೆ” ಎಂದು ಹೇಳಿದರು. ಬಿಜೆಪಿ ಯಿಂದ ಯಾವುದೇ ಒತ್ತಡ ಅಥವಾ ಆಮಿಷ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮನ್ನು ರಾಜ್ಯಸಭೆಗೆ ಕಳುಹಿಸುವ ನಿರ್ಧಾರವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೆಗೆದುಕೊಂಡಿದ್ದಾರೆ ಎಂದು ಹೇಳಿದ ಅವರು, “ನನಗೆ ಹುದ್ದೆ ಬಗ್ಗೆ ದುರಾಸೆ ಇಲ್ಲ” ಎಂದು ತಿಳಿಸಿದ್ದಾರೆ.
ಒಟ್ಟಾರೆ, ಎಎಪಿಯಲ್ಲಿ ನಡೆದಿರುವ ಈ ದೊಡ್ಡ ಮಟ್ಟದ ಪಕ್ಷಾಂತರವು ರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಇನ್ನಷ್ಟು ಬಯಲಾಗುತ್ತಿರುವುದು ಸ್ಪಷ್ಟವಾಗಿದೆ.




