News: ಇತ್ತೀಚೆಗೆ ಎಲ್ಲೆಡೆ ಆನ್ಲೈನ್ ಗೇಮ್, ಬೆಟ್ಟಿಂಗ್ ಆ್ಯಪ್ಗಳ ಹಾವಳಿ ಹೆಚ್ಚಾಗಿದ್ದು, ತೆಲಂಗಾಣದಲ್ಲಿ ಇದರ ನಿಷೇಧದ ಹೊರತಾಗಿಯೂ ಕಳೆದ ಒಂದೂವರೆ ವರ್ಷಗಳಲ್ಲಿ ರಾಜ್ಯಾದ್ಯಂತ 24 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಿ ಅನೇಕ ಯುವಕರು ಆನ್ಲೈನ್ ಬೆಟ್ಟಿಂಗ್ ಬಲೆಗೆ ಬೀಳುತ್ತಿದ್ದಾರೆ. ಆನ್ಲೈನ್ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್ಗಳಲ್ಲಿ ಆಡಿ, ಒಂದೇ ದಿನದಲ್ಲಿ ಶ್ರೀಮಂತರಾಗಿಬಿಡಿ ಎಂದು ಬರುವ ಚೇತೋಹಾರಕ ಜಾಹೀರಾತುಗಳಿಂದ ಹಾಗೂ ನಕಲಿ ಯಶಸ್ಸಿನ ಕಥೆಗಳಿಂದ ಆಮಿಷಕ್ಕೊಳಗಾಗಿ ಅನೇಕ ಯುವಕರು ಈ ಬೆಟ್ಟಿಂಗ್ ಸುಳಿಗೆ ಸಿಲುಕುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಇದಕ್ಕೆ ಕಡಿವಾಣ ಹಾಕಲು ಇದೀಗ ಸರ್ಕಾರ ಮುಂದಾಗಿದೆ.
ವರದಿ ಬಳಿಕ ಕ್ರಮ..
ಇನ್ನೂ ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಈಗಾಗಲೇ ನಾನು ಐಟಿ ಸಚಿವರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ. ಈ ಸಭೆಗೆ ಉದ್ಯಮದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಇಲ್ಲಿಯವರೆಗೆ ಇವುಗಳ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಯಾವುದೇ ಕಾನೂನು ಇರಲಿಲ್ಲ. ಹೀಗಾಗಿ, ಪರವಾನಗಿ ವ್ಯವಸ್ಥೆ ಮತ್ತು ಕಾನೂನಿನ ಪ್ರಕಾರ ನಿಯಂತ್ರಣವನ್ನು ಪರಿಚಯಿಸಲು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಉದ್ಯಮದ ಪ್ರತಿನಿಧಿಗಳ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೆ ಈ ಪ್ರಸ್ತಾವಿತ ಮಸೂದೆಯ ಕರಡನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ಸಮಿತಿಗೆ ನೀಡಲಾಗಿದೆ.ಅಲ್ಲದೆ ಕರಡು ಸಲ್ಲಿಸಿದ ನಂತರ, ನಾವು ನೂತನ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕೇಳಿ ಬಂದಿತ್ತು ಬ್ಯಾನ್ಗೆ ಒತ್ತಾಯ..!
ಅಲ್ಲದೆ ರಾಜ್ಯದಲ್ಲಿ ಬೆಟ್ಟಿಂಗ್ ಹಾಗೂ ಆನ್ಲೈನ್ ಗೇಮ್ಗಳ ಹಾವಳಿಗೆ ಸಿಲುಕಿ ಅನೇಕ ಯುವಕರು ಸಾಲದ ಸುಳಿಗೆ ಸಿಲುಕಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದರು. ಇನ್ನೂ ಈ ಆನ್ಲೈನ್ ಗೇಮ್ಗಳ ಚಟಕ್ಕೆ ಬಿದ್ದು ಸಾಕಷ್ಟು ಜನರು ಬೀದಿಪಾಲಾಗಿರುವ ಘಟನೆಗಳು ನಡೆಯುತ್ತಿವೆ. ಹೀಗಾಗಿ ಈ ಬೆಟ್ಟಿಂಗ್ ಹಾಗೂ ಆನ್ಲೈನ್ ಗೇಮ್ಮಿಂಗ್ ಆ್ಯಪ್ಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಈ ಕುರಿತು ಸದನದಲ್ಲೂ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಅಂತಿಮವಾಗಿ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರದಲ್ಲೇ ಇದರ ವಿರುದ್ಧ ಕಠಿಣ ಕಾನೂನು ತರಲು ಸಿದ್ಧವಾಗಿದೆ.