www.karnatakatv.net : ಬೆಳಗಾವಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ನೇಗಿಲ ಯೋಗಿ ರೈತ ಸೇವಾ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ನೇಗಿಲ ಯೋಗಿ ರೈತ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸುತ್ತಿರುವುದು.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಸಂಘಟನೆ ಪದಾಧಿಕಾರಿಗಳು ಹಾಗೂ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನೇಗಿಲ ಯೋಗಿ ರೈತ ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ಬೀರಪ್ಪಾ ದೇಶನೂರ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ಪೈಕಿ ರೈತರಿಗೆ ಮಾರಕವಾಗಿರುವ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಬಾರಕೋಲ್ ಚಳುವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಉಳಿಗಾಲ್ಲವಿಲ್ಲ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಮಾಜಿ ಪ್ರಧಾನಿ ವಾಜಪೇಯಿ ಅವರ ರೈತ ದೇಶದಲ್ಲಿ ಇದ್ದರೇ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ ಎಂದಿದ್ದರೂ ಅವರ ಯೋಜನೆ ಬಿಟ್ಟು ತಮ್ಮಗೆ ಅನುಕೂಲವಾಗುವ ರೀತಿ ಆಡಳಿತ ನಡೆಸುತ್ತಿದ್ದಾರೆ.
ಕೇಂದ್ರ ಸರಕಾರ ರೈತರನ್ನು ಭೂಮಿಯಿಂದ ಹೊರಗೆ ಹಾಕುವ ಕೆಲಸ ಮಾಡುತ್ತಿದೆ. ರಾಜ್ಯ ಸರಕಾರದ ಕೈ ಕಟ್ಟಿ ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೀವು ಜನಪ್ರತಿನಿಧಿಗಳಾಗಿ ಉಳಿಬೇಕೆಂದರೆ ವಿದ್ಯುತ್ ಖಾಸಗೀಕರಣ ನೀತಿ ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನೇಗಿಲ ಯೋಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಡತಾಳ, ಮಹೇಶ ನರಸನವರ, ಪ್ರಸಾದ ಕುಲಕರ್ಣಿ, ಸುರೇಶ ಕುರಿ, ಜಗದೀಶ ಪಾಟೀಲ, ಬಾಬು ಪವಾರ, ರಾಜು ತೊಲಗಿ, ಗಂಗಣ್ಣಾ ಸಿಂತರಿ, ಸಂಜು ಮಾದರ, ನೀಲವ್ವ ಶಿಂತ್ರಿ, ಸುನಂದಾ ನಾಯ್ಕರ, ಕಸ್ತೂರಿ ಪಾಟೀಲ, ದೀಪಾ ಪಾಟೀಲ, ಮಾಯವ್ವಾ ಕುರಬರ, ರತ್ನಪ್ಪ ಜೈನರ್, ಯಶೋಧಾ ಬಡಿಗೇರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ